ವಿಜಯಸಾಕ್ಷಿ ಸುದ್ದಿ, ಗದಗ: 2024-25ನೇ ಸಾಲಿನ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ರೈತರಿಂದ ಎಫ್.ಎ.ಕ್ಯೂ ಗುಣಮಟ್ಟದ ಕಡಲೆ ಖರೀದಿಸಲು ಬೆಂಬಲ ಬೆಲೆ ನಿಗದಿಪಡಿಸಲಾಗಿದೆ. ನೋಂದಣಿ ಪ್ರಕ್ರಿಯೆಯಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ನಿರ್ದೇಶನ ನೀಡಿದರು.
ಜಿಲ್ಲಾಧಿಕಾರಿಗಳ ಸಭಾಭವನದಲ್ಲಿ 2024-25ನೇ ಸಾಲಿನ ಹಿಂಗಾರು ಹಂಗಾಮಿನ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಕಡಲೆ ಹುಟ್ಟುವಳಿಯನ್ನು ಖರೀದಿಸುವ ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರ್ಕಾರದ ಮಾನದಂಡಗಳನ್ವಯ ಎಫ್.ಎ.ಕ್ಯೂ ಗುಣಮಟ್ಟವನ್ನು ದೃಢೀಕರಿಸಲು ಕ್ರಮ ವಹಿಸಬೇಕು. ಖರೀದಿ ಏಜೆನ್ಸಿಯವರು ತಮ್ಮ ಸಂಸ್ಥೆಯ ಹಿರಿಯ ಅಧಿಕಾರಿಗಳು ಮೇಲುಸ್ತುವಾರಿ ತಪಾಸಣೆ ಕೈಗೊಳ್ಳಬೇಕು. ಪ್ರತಿ ಖರೀದಿ ಕೇಂದ್ರಕ್ಕೆ ಗ್ರೇಡರ್ಗಳನ್ನು ನೇಮಿಸಬೇಕು. ಜಿಲ್ಲೆಯ ಪ್ರತಿ ರೈತರಿಂದ ಎಕರೆಗೆ 4 ಕ್ವಿಂಟಲ್ನಂತೆ ಗರಿಷ್ಟ 20 ಕ್ವಿಂಟಲ್ ಎಫ್.ಎ.ಕ್ಯೂ ಗುಣಮಟ್ಟದ ಕಡಲೆ ಕಾಳನ್ನು ಖರೀದಿಸಲು ಹಾಗೂ ಕಡಲೆ ಖರೀದಿ ಕೇಂದ್ರಗಳಲ್ಲಿ ರೈತರ ಹೆಸರಿನಲ್ಲಿ ವರ್ತಕರು ತರುವ ಕಡಲೆ ಕಾಳು ಖರೀದಿಸಿದಂತೆ ಹಾಗೂ ಖರೀದಿ ಸಂಸ್ಥೆಗಳು ಯಾವುದೇ ರೀತಿಯ ದುರುಪಯೋಗ ಆಗದಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕೆಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಸೂಚಿಸಿದರು.
ಸಭೆಯಲ್ಲಿ ಜಂಟಿ ಕೃಷಿ ನಿರ್ದೇಶಕಿ ತಾರಾಮಣಿ ಜಿ.ಎಚ್, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ವಿನೋದಕುಮಾರ್ ಹೆಗ್ಗಳಗಿ, ತೋಟಗಾರಿಕೆ ಇಲಾಖೆ, ಸಹಕಾರಿ ಸಂಘಗಳ ಇಲಾಖೆ, ಕೃಷಿ ಮಾರಾಟ ಇಲಾಖೆ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿಗಳು, ಮಾರ್ಕೆಟಿಂಗ್ ಫೆಡರೇಶನ್ ಶಾಖಾ ವ್ಯವಸ್ಥಾಪಕರು ಹಾಜರಿದ್ದರು.
ಕಡಲೆ ಖರೀದಿ ಕೇಂದ್ರಗಳು: ಗದಗ ತಾಲೂಕು (23): ಪಿಎಸಿಎಸ್ ಬಿಂಕದಕಟ್ಟಿ, ಹೊಂಬಳ, ಬಳಗಾನೂರ, ಹರ್ಲಾಪುರ, ಕುರ್ತಕೋಟಿ, ಶಿರೋಳ, ಕೋಟುಮಚಗಿ-1, ಕೋಟುಮಚಗಿ-2, ಕಣಗಿನಹಾಳ, ಲಕ್ಕುಂಡಿ, ನೀರಲಗಿ, ಸೊರಟೂರ, ಕದಡಿ, ಮುಳಗುಂದ, ತಿಮ್ಮಾಪುರ, ನಾಗಾವಿ-2, ನಾಗಾವಿ-1, ಅಂತೂರ, ಎಚ್.ಎಸ್. ವೆಂಕಟಾಪೂರ, ಟಿಎಪಿಸಿಎಂಎಸ್ ಗದಗ, ಶ್ರೀ ಪ್ರಭುಸ್ವಾಮಿ ಪಿಎಸಿಎಸ್ ಹೊಂಬಳ, ಶ್ರಮಜೀವಿ, ಎಫ್ಪಿಓ ಹಿರೇಹಂದಿಗೋಳ, ಗದಗ ಕಾಟನ್ ಸೇಲ್ ಸೊಸೈಟಿ.
ಶಿರಹಟ್ಟಿ ಮತ್ತು ಲಕ್ಮೇಶ್ವರ ತಾಲೂಕು (6): ಪಿಎಸಿಎಸ್ ಅಡರಗಟ್ಟಿ, ಶಿರಹಟ್ಟಿ, ಯಳವತ್ತಿ, ಟಿಎಪಿಸಿಎಂಎಸ್ ಲಕ್ಮೇಶ್ವರ, ಶಿರಹಟ್ಟಿ, ಭೂ ಪರಿವರ್ತನೆ ಫಾರ್ಮರ್ಸ್ ಪ್ರೊಡ್ಯೂಜರ್ ಕಂ. ಲಿ ಬೆಳ್ಳಟ್ಟಿ.
ಮುಂಡರಗಿ (6): ಪಿಎಸಿಎಸ್ ಆಲೂರು, ಪೇಠಾಲೂರ, ಬರದೂರ, ಹಳ್ಳಿಕೇರಿ, ಟಿಎಪಿಸಿಎಂಎಸ್ ಮುಂಡರಗಿ, ಚಂದನವನ ಫಾರ್ಮರ್ಸ್ ಪ್ರೋಡ್ಯೂಜರ್ ಕಂ ಲಿ ಡಂಬಳ.
ನರಗುAದ (10): ಪಿಎಸಿಎಸ್ ಚಿಕ್ಕನರಗುಂದ, ಜಗಾಪೂರ, ಶಿರೋಳ, ಸುರಕೋಡ, ಸಂಕದಾಳ, ಕೊಣ್ಣೂರ, ಹಿರೇಕೊಪ್ಪ, ಖಾನಾಪುರ-ಗಂಗಾಪೂರ, ಟಿಎಪಿಸಿಎಂಎಸ್ ನರಗುಂದ, ಬಾಬಾಸಾಹೇಬ ರೈತ ಉತ್ಪಾದಕ ಕಂ ಲಿ ನರಗುಂದ.
ರೋಣ ಮತ್ತು ಗಜೇಂದ್ರಗಡ(24 )ಪಿಎಸಿಎಸ್ ಹೊಸಳ್ಳಿ, ಮಲ್ಲಾಪುರ, ರೋಣ-1, ರೋಣ-2, ಸೂಡಿ, ಸವಡಿ, ಯಾವಗಲ್, ಅಬ್ಬಿಗೇರಿ, ಬೆಳವಣಕಿ, ಇಟಗಿ, ನಿಡಗುಂದಿ, ಜಕ್ಕಲಿ, ಕೊತಬಾಳ, ಹೊಳೆ ಹಡಗಲಿ, ಹೊಳೆ ಆಲೂರ, ಯಾ.ಸ. ಹಡಗಲಿ, ಕೌಜಗೇರಿ, ಮೆಣಸಗಿ, ಹೊಳೆಮಣ್ಣೂರ, ಟಿಎಪಿಸಿಎಂಎಸ್ ರೋಣ, ಟಿಎಪಿಸಿಎಂಎಸ್ ಗಜೇಂದ್ರಗಡ, ಟಿಎಪಿಸಿಎಂಎಸ್ ನರೇಗಲ್, ಜನಚೇತನ ಫಾರ್ಮರ್ಸ್ ಪ್ರೊಡ್ಯೂಸರ್ ಕಂಪನಿ, ಸೂಡಿ, ಭೂಮಿ ಸಂಜೀವಿನಿ ಫಾರ್ಮರ್ಸ್ ಪ್ರೊಡ್ಯೂಸಿಂಗ್ ಕಂಪನಿ ನಿ ಸವಡಿ.
ಕೃಷಿ ಮಾರಾಟ ಇಲಾಖೆಯ ಸಹಾಯಕ ನಿರ್ದೇಶಕರು ಮಾತನಾಡಿ, ಎಫ್.ಎ.ಕ್ಯೂ ಗುಣಮಟ್ಟದ ಕಡಲೆ ಹುಟ್ಟುವಳಿಗೆ ಪ್ರತಿ ಕ್ವಿಂಟಾಲ್ಗೆ ರೂ.5650ರಂತೆ ಕನಿಷ್ಟ ಬೆಂಬಲ ಬೆಲೆ ನಿಗದಿಪಡಿಸಲಾಗಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ವಯ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳ (ಮಾರ್ಕಫೆಡ್) ಸಂಸ್ಥೆಯನ್ನು ರಾಜ್ಯದ ವತಿಯಿಂದ ಖರೀದಿ ಸಂಸ್ಥೆಯನ್ನಾಗಿ ನೇಮಿಸಿದೆ. ರೈತರ ನೋಂದಣಿ ಕಾರ್ಯದ ಕಾಲಾವಧಿಯನ್ನು ಆದೇಶ ಹೊರಡಿಸಿದ ದಿನಾಂಕದಿಂದ 80 ದಿನಗಳವರೆಗೆ ಹಾಗೂ ಖರೀದಿ ಅವಧಿಯನ್ನು 90 ದಿನಗಳವರೆಗೆ ಜರುಗಿಸಲಾಗುವುದು. ಜಿಲ್ಲೆಯ 69 ಕಡೆಗಳಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲು ತೀರ್ಮಾನಿಸಲಾಯಿತು.