ವಿಜಯಸಾಕ್ಷಿ ಸುದ್ದಿ, ಗದಗ: ಸಾಂಕ್ರಾಮಿಕ ರೋಗಗಳಾದ ಡೆಂಗೀ, ಚಿಕುನ್ಗುನ್ಯಾ, ಮಲೇರಿಯಾ, ಮೆದುಳು ಜ್ವರ, ಆನೆಕಾಲು ರೋಗ ಮತ್ತು ಜಿಕಾ ವೈರಸ್ ಸೊಳ್ಳೆಗಳಿಂದ ಹರಡುವ ರೋಗಳಾಗಿವೆ. ಮುಖ್ಯವಾಗಿ ಡೆಂಗೀ ಕಾಯಿಲೆಯಲ್ಲಿ ಹಣೆಯ ಮುಂಭಾಗದಲ್ಲಿ ನೋವು, ಕಣ್ಣುಗಳ ಚಲನೆಯ ತೊಂದರೆ, ಮಾಂಸಖಂಡಗಳ ನೋವು, ವಿಪರೀತ ಜ್ವರ, ಹೋಟ್ಟೆ ನೋವು, ಸುಸ್ತು, ಮತ್ತು ವಾಕರಿಕೆ ಮುಂತಾದ ಲಕ್ಷಣಗಳು ಕಂಡು ಬರುತ್ತವೆ ಎಂದು ಗದಗ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿಗಳು ಡಾ. ಹೆಚ್.ಎಲ್. ಗಿರಡ್ಡಿ ವಿವರಿಸಿದರು.
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಗದಗ ವಿಭಾಗದಲ್ಲಿ ಡೆಂಗೀ ಕುರಿತು ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರಿಗೆ ಹಮ್ಮಿಕೊಂಡಿದ್ದ ಅರಿವು ಕಾರ್ಯಕ್ರಮದಲ್ಲಿ ಅವರು ಮಾಹಿತಿ ನೀಡುತ್ತಿದ್ದರು.
ಮಲೇರಿಯಾ ರೋಗವು ಅನಾಫಿಲಿಸ್ ಹೆಣ್ಣು ಸೊಳ್ಳೆ ಕಚ್ಚುವುದರಿಂದ ರೋಗ ಬರುತ್ತದೆ. ಗೋವಾ, ದಕ್ಷಿಣ ಕನ್ನಡ, ಮಂಗಳೂರು ಮತ್ತು ಉಡುಪಿ ಜಿಲ್ಲೆಗಳಲ್ಲಿ ಮಲೇರಿಯಾ ರೋಗವು ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತಿದ್ದು, ನಮ್ಮ ಭಾಗದ ಜನರು ಅಲ್ಲಿ ದುಡಿಯಲು ಹೋದ ಸಂದರ್ಭದಲ್ಲಿ ಮಲೇರಿಯಾ ರೋಗ ಕಾಣಿಸಿಕೊಳ್ಳುತ್ತದೆ. ಮರಳಿ ಈ ಭಾಗಕ್ಕೆ ಬಂದಾಗ ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖಾ ಸಿಬ್ಬಂದಿಗಳು ಭೇಟಿ ನೀಡಿ ರಕ್ತ ಪರೀಕ್ಷೆ ಮಾಡಿ ಮಲೇರಿಯಾ ಖಚಿತಪಟ್ಟ ರೋಗಿಗೆ ಚಿಕಿತ್ಸೆ ನೀಡುತ್ತಾರೆ ಎಂದು ತಿಳಿಸಿದರು.
ವಿಭಾಗೀಯ ನಿಯಂತ್ರಣ ಅಧಿಕಾರಿ ಡಿ.ಎಮ್. ದೇವರಾಜ ಸ್ವಾಗತಿಸಿದರು. ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ರಿಯಾಜ್ ಖಾ.ಘೂಡುನಾಯ್ಕರ ವಂದಿಸಿದರು. ಕಾರ್ಯಕ್ರಮದಲ್ಲಿ ಗದಗ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿಗಳ ಕಾರ್ಯಲಯದ ಸಿಬ್ಬಂದಿಗಳಾದ ಅಜಯಕುಮಾರ ಆರ್.ಕಲಾಲ, ಮಹಮ್ಮದರಫಿ ಕದಾಂಪೂರ, ಈರಣ್ಣ ಎಸ್.ಚಲ್ಮಿ, ಅನಿತಾ ಬಾಗಲಕೋಟ ಹಾಗೂ ಗದಗ ವಿಭಾಗೀಯ ನಿಯಂತ್ರಣ ಅಧಿಕಾರಿಗಳ ಕಾರ್ಯಲಯದ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.
ಕೀಟಜನ್ಯ ಶಾಸ್ತ್ರಜ್ಞರಾದ ಅನ್ನಪೂರ್ಣ ಶೆಟ್ಟರ ಮಾತನಾಡುತ್ತಾ, ಈಡೀಸ್ ಸೊಳ್ಳೆಗಳ ಉತ್ಪತ್ತಿ ಹಾಗೂ ನಿಯಂತ್ರಣ ಕುರಿತು ವಿವರಿಸಿ, ನಿಯಂತ್ರಣಕ್ಕಾಗಿ ಟೈರ್ಗಳನ್ನು ಮಳೆ ನೀರು ಸಂಗ್ರಹವಾಗ ಪ್ರದೇಶಗಲ್ಲಿ ವಿಲೇವಾರಿ ಮಾಡುವುದು, ಲಾರ್ವಾ ನಾಶಕ ಬಳಸುವುದು, ಪ್ಲಾಸ್ಟಿಕ್ ಹೊದಿಕೆಗಳಲ್ಲಿ ನೀರು ಶೇಖರಣೆಯಾಗದಂತೆ ನೋಡಿಕೊಳ್ಳುವುದು, ಕಾರ್ಮಿಕರಿಗೆ ಸೊಳ್ಳೆ ನಿರೋಧಕಗಳನ್ನು ಬಳಸುವುದು ಇತ್ಯಾದಿಗಳ ಕುರಿತು ತಿಳಿಸಿದರು.