ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ: ಇಲ್ಲಿನ ಪ್ರಾದೇಶಿಕ ತರಬೇತಿ ಕೇಂದ್ರದಲ್ಲಿ ವಿಜಯನಗರ ಔದ್ಯೋಗಿಕ ಆರೋಗ್ಯ ಮತ್ತು ಕೈಗಾರಿಕಾ ಸುರಕ್ಷತಾ ಸಂಸ್ಥೆ ಬೆಂಗಳೂರು ಸಹಯೋಗದೊಂದಿಗೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ತಾಂತ್ರಿಕ ಸಿಬ್ಬಂದಿಗಳಿಗೆ ಪ್ರಥಮ ಚಿಕಿತ್ಸಾ ತರಬೇತಿ ಶಿಬಿರ ಆಯೋಜಿಸಲಾಗಿತ್ತು.
ಸಮಾರಂಭ ಉದ್ಘಾಟಿಸಿ ಮಾತನಾಡಿದ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗಾ ಎಂ, ಪ್ರಥಮ ಚಿಕಿತ್ಸೆ ಸಂಸ್ಥೆಯ ಸಿಬ್ಬಂದಿಗಳಿಗೆ ಅತ್ಯವಶ್ಯವಾಗಿದೆ. ಘಟಕದಲ್ಲಿ ಕರ್ತವ್ಯ ನಿರ್ವಹಿಸುವಾಗ, ಯಾವುದೇ ಅವಘಡ ಉಂಟಾದಾಗ ಪ್ರಥಮ ಚಿಕಿತ್ಸೆ ನೀಡುವುದು ಅವಶ್ಯ. ಇಂತಹ ಸಂದರ್ಭದಲ್ಲಿ ನುರಿತ ಸಿಬ್ಬಂದಿಗಳಿಂದ ಪ್ರಥಮ ಚಿಕಿತ್ಸೆ ನೀಡುವಂತಾಗಲಿ ಎಂದು ಸಂಸ್ಥೆಯ ಎಲ್ಲ ಘಟಕಗಳ ತಾಂತ್ರಿಕ ಸಿಬ್ಬಂದಿಗಳಿಗೆ ತರಬೇತಿ ನೀಡಲಾಗುತ್ತಿದೆ. ನೀವು ಶಿಸ್ತುಬದ್ಧರಾಗಿ ತರಬೇತಿ ಪಡೆದುಕೊಂಡು ನಿಮ್ಮ ನಿಮ್ಮ ಘಟಕಗಳಲ್ಲಿ ಅರಿವು ಮೂಡಿಸಬೇಕು ಎಂದು ತಿಳಿಸಿದರು.
ತರಬೇತುದಾರರಾಗಿ ಆಗಮಿಸಿದ್ದ ವಿಜಯನಗರ ಔದ್ಯೋಗಿಕ ಆರೋಗ್ಯ ಮತ್ತು ಕೈಗಾರಿಕಾ ಸುರಕ್ಷತಾ ಸಂಸ್ಥೆಯ ಪ್ರವೀಣ ಮಾತನಾಡಿ, ಪ್ರಥಮ ಚಿಕಿತ್ಸೆಯು ಕೆಲಸ ನಿರ್ವಹಿಸುವ ಸ್ಥಳದಲ್ಲಿ ಮಾತ್ರವಲ್ಲದೆ ಮನೆಗಳಲ್ಲಿ ಕೂಡ ಅವಶ್ಯಕವಾಗಿದೆ. ಪ್ರಥಮ ಚಿಕಿತ್ಸೆ ಕುಟುಂಬವನ್ನು ರಕ್ಷಣೆ ಮಾಡುತ್ತದೆ. ಇಂದು ಪ್ರಥಮ ಚಿಕಿತ್ಸೆಯ ಎಲ್ಲ ತಾಂತ್ರಿಕತೆಯ ಬಗೆಗಳನ್ನು ಹೇಳಿಕೊಡಲಾಗುತ್ತದೆ. ಸಂಸ್ಥೆಯ ಸಿಬ್ಬಂದಿಗಳು ಸಹ ಪ್ರಥಮ ಚಿಕಿತ್ಸೆ ನೀಡಲು ಶಕ್ತರಾಗಲಿ ಎಂದು ತರಬೇತಿ ಶಿಬಿರ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಶಿಬಿರದಲ್ಲಿ 09 ವಿಭಾಗಗಳ ಘಟಕ, ವಿಭಾಗೀಯ ಕಾರ್ಯಾಗಾರ ಹಾಗೂ ಪ್ರಾದೇಶಿಕ ಕಾರ್ಯಾಗಾರಗಳಿಂದ 55 ತಾಂತ್ರಿಕ ಸಿಬ್ಬಂದಿಗಳು ಪ್ರಥಮ ಚಿಕಿತ್ಸೆ ತರಬೇತಿ ಪಡೆದುಕೊಂಡರು. ವಿರೂಪಾಕ್ಷ ಕಟ್ಟಿಮನಿ ಕಾರ್ಯಕ್ರಮ ನಿರೂಪಿಸಿದರು. ನವೀನಕುಮಾರ ತಿಪ್ಪಾ ವಂದಿಸಿದರು.