ವಿಜಯಸಾಕ್ಷಿ ಸುದ್ದಿ, ಗದಗ: ವಿದ್ಯಾರ್ಥಿ ದೆಸೆಯಿಂದಲೇ ನಿಮ್ಮ ಜೀವನದ ಧ್ಯೇಯೋದ್ದೇಶಗಳ ಬಗ್ಗೆ ನಿಖರತೆ ಇರಲಿ. ನಿಮ್ಮ ಉದ್ದೇಶ ಹಾಗೂ ಧ್ಯೇಯೋದ್ದೇಶಗಳ ಸಾಕಾರಕ್ಕೆ ಈಗಿನಿಂದಲೇ ಪರಿಶ್ರಮ ಹಾಕಬೇಕು. ಜೊತೆಗೆ ಪ್ರಾಮಾಣಿಕತೆಯನ್ನು ಜೀವನದುದ್ದಕ್ಕೂ ಅಳವಡಿಸಿಕೊಳ್ಳುವ ಮೂಲಕ ಸಾಧನೆ ನಿಮ್ಮದಾಗಿಸಿಕೊಳ್ಳಿ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ ಹೇಳಿದರು.
ಇಲ್ಲಿನ ನಾಗಾವಿಯಲ್ಲಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಶನಿವಾರ ಜರುಗಿದ `ಉತ್ತಮ ಆಡಳಿತದಲ್ಲಿ ಲೋಕಾಯುಕ್ತ ಪಾತ್ರ’ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಉತ್ತಮ ಆಡಳಿತ ನೀಡುವ ಸದುದ್ದೇಶದಿಂದ ಯುವ ಪೀಳಿಗೆ ಸಾರ್ವಜನಿಕ ಸೇವೆಗೆ ಆಗಮಿಸಬೇಕು. ದೈನಂದಿನ ಕರ್ತವ್ಯದಲ್ಲಿ ಪ್ರಾಮಾಣಿಕತೆ ಅಳವಡಿಸಿಕೊಳ್ಳುವ ಮೂಲಕ ಸಾಧನೆ ಮಾಡುವ ಹುಮ್ಮಸ್ಸು ನಿಮ್ಮದಾಗಿಸಿಕೊಳ್ಳಬೇಕು. ನಿಮ್ಮ ವಿಚಾರಧಾರೆಗಳು ಗುಣಮಟ್ಟದಿಂದ ಹಾಗೂ ಉನ್ನತ ವಿಚಾರಗಳಿಂದ ಕೂಡಿರಬೇಕು. ಅವುಗಳ ಸಾಕಾರಕ್ಕೆ ಕಠಿಣ ಪರಿಶ್ರಮ ತೆಗೆದುಕೊಳ್ಳಬೇಕು. ಆಗ ಮಾತ್ರ ಜೀವನದಲ್ಲಿ ಸಾಧನೆ ನಿಮ್ಮದಾಗಲಿದೆ ಎಂದು ಕಿವಿಮಾತು ಹೇಳಿದರು.
ಹಳ್ಳಿಗಳ ಅಭಿವೃದ್ಧಿಯಿಂದ ಮಾತ್ರ ದೇಶದ ಅಭಿವೃದ್ಧಿ. ಹುಟ್ಟಿ ಬೆಳೆದ ಹಳ್ಳಿಗಳಿಗೆ ತೆರಳಿ ಅಭಿವೃದ್ಧಿ ಕಾರ್ಯ ಮಾಡುವ ಗುಣ ಅಧಿಕಾರಿ ವರ್ಗ ಪ್ರಾಮಾಣಿಕವಾಗಿ ಬೆಳೆಸಿಕೊಂಡಾಗ ಅಭಿವೃದ್ಧಿ ಸಾಧ್ಯ. ಅಧಿಕಾರಿಗಳಾದವರು ತಾವು ಹುಟ್ಟಿ ಬೆಳೆದ ಗ್ರಾಮಗಳಿಗೆ ತೆರಳಿ ಅಲ್ಲಿನ ಪರಿಸ್ಥಿತಿ ಅವಲೋಕಿಸಿ ಹಳ್ಳಿಗಳ ಪ್ರಗತಿಗೆ ಮನಸ್ಸು ಮಾಡಬೇಕು ಎಂದರು.
ಬೆAಗಳೂರಿನ ಬಿಬಿಎಂಪಿಯ 8 ಪ್ರಾದೇಶಿಕ ಕೇಂದ್ರಗಳಲ್ಲಿಯೂ ಕಸ ವಿಲೇವಾರಿ ಅವ್ಯವಸ್ಥೆ ಕುರಿತು ಸ್ವಯಂ ಪ್ರಕರಣ ದಾಖಲಿಸುವ ಮೂಲಕ ನಿಗಾ ವಹಿಸಲಾಗುತ್ತಿದೆ. ಬಿಬಿಎಂಪಿ ಅಧಿಕಾರಿಗಳಿಂದ ಸ್ವಚ್ಛತೆಗೆ ಆದ್ಯತೆ ನೀಡುವಂತೆ ತಿಳಿಸುವ ಮೂಲಕ ಸಾವಿರಾರು ಟನ್ ಕಸ ವಿಲೇವಾರಿ ಸರಿಯಾಗಿ ಆಗುವಂತೆ ನೋಡಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
ಆಡಳಿತದಲ್ಲಿ ಅವ್ಯವಹಾರ ಭ್ರಷ್ಟಾಚಾರ ನಡೆದಲ್ಲಿ ಅದನ್ನು ಸರಿಪಡಿಸಲು ಲೋಕಾಯುಕ್ತ ಸಂಸ್ಥೆಯನ್ನು 1984ರಲ್ಲಿ ಆರಂಭಿಸಲಾಗಿದೆ. ಆಡಳಿತದಲ್ಲಿ ದುರಾಡಳಿತ ಕಂಡುಹಿಡಿಯಲು ಸಂಸ್ಥೆ ಸ್ವತಂತ್ರವಾಗಿದೆ. ಇದರ ಕಾರ್ಯ ವ್ಯಾಪ್ತಿ ಅಪರಿಮಿತವಾದದ್ದು ಎಂದು ಹೇಳಿದರು.
ಲೋಕಾಯುಕ್ತ ಸಂಸ್ಥೆಗಳನ್ನು ಬೇರೆ ರಾಜ್ಯಗಳಿಗೆ ಹೋಲಿಸಿದಲ್ಲಿ, ಕರ್ನಾಟಕದಲ್ಲಿ ಲೋಕಾಯುಕ್ತ ಸಂಸ್ಥೆಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಮೂರರಿಂದ ನಾಲ್ಕು ಪಟ್ಟು ಹೆಚ್ಚು ಒದಗಿಸಲಾಗಿದೆ. 2022ರಲ್ಲಿ ಲೋಕಾಯುಕ್ತರಾಗಿ ಅಧಿಕಾರ ಸ್ವೀಕರಿಸಿದ ಮೇಲೆ ನಾನು 26 ಅಂಶಗಳ ಮಾರ್ಗಸೂಚಿಗಳನ್ನು ನೀಡುವ ಮೂಲಕ ಸರ್ಕಾರಿ ಇಲಾಖೆಗಳಿಗೆ ನಿರೀಕ್ಷಿತ-ಅನಿರೀಕ್ಷಿತ ಭೇಟಿ ನೀಡಿ ದುರಾಡಳಿತದ ಬಗ್ಗೆ ವರದಿ ಮಾಡುವಂತೆ ಜಿಲ್ಲಾ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ತಿಳಿಸಿದರು.
ಲೋಕಾಯುಕ್ತನಾಗಿ ಅಧಿಕಾರ ವಹಿಸಿಕೊಂಡಾಗ ರಾಜ್ಯದಲ್ಲಿ ಒಟ್ಟು 9000 ಪ್ರಕರಣಗಳು ಬಾಕಿ ಇದ್ದವು. ನಂತರದಲ್ಲಿ ಹೊಸ ಪ್ರಕರಣಗಳ ನೋಂದಾವಣೆ ಅಧಿಕವಾಗುತ್ತಾ ಸಾಗಿತು. ಸದ್ಯ 24 ಸಾವಿರ ಪ್ರಕರಣಗಳಿದ್ದು, ಈಗಾಗಲೇ 11000 ಪ್ರಕರಣಗಳನ್ನು ವಿಲೇ ಮಾಡಲಾಗಿದೆ. ಅಲ್ಲದೆ 400ಕ್ಕೂ ಅಧಿಕ ಪ್ರಕರಣಗಳಲ್ಲಿ ಸರ್ಚ್ ವಾರಂಟ್ ಜಾರಿ ಮಾಡುವ ಮೂಲಕ ಕ್ರಮ ವಹಿಸಲಾಗಿದೆ ಎಂದು ನ್ಯಾ. ಬಿ.ಎಸ್. ಪಾಟೀಲ ತಿಳಿಸಿದರು.
ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸುರೇಶ್ ನಾಡಗೌಡರ ಮಾತನಾಡಿ, ಸಾಧನೆಗೆ ಕಠಿಣಶ್ರಮ, ಪ್ರಯತ್ನ ಇರಲಿ. ಲೋಕಾಯುಕ್ತರ ನ್ಯಾಯಮೂರ್ತಿ ಬಿ.ಎಸ್. ಪಾಟೀಲ ಅವರ ಮಾತುಗಳು ನಿಮ್ಮೆಲ್ಲರಿಗೆ ಪ್ರೇರಣೆಯಾಗಿ, ಉತ್ತಮ ಆಡಳಿತದಲ್ಲಿ ನಾವೆಲ್ಲರೂ ಭಾಗಿಯಾಗೋಣ. ಗಾಂಧೀಜಿಯವರ ಗ್ರಾಮ ಸ್ವರಾಜ್ ಪರಿಕಲ್ಪನೆ ಸಾಕಾರಕ್ಕೆ ಪಾತ್ರರಾಗೋಣ ಎಂದರು.
ವೇದಿಕೆಯಲ್ಲಿ ಲೋಕಾಯುಕ್ತ ಎಸ್.ಪಿ ಹನಮಂತರಾಯ, ವಿವಿ ಹಣಕಾಸು ಅಧಿಕಾರಿ ಪ್ರಶಾಂತ್ ಜೆಸಿ ಉಪಸ್ಥಿತರಿದ್ದರು. ವಿವಿ ಸಹಾಯಕ ನಿರ್ದೇಶಕ ಅಬ್ದುಲ್ ಅಜೀಜ ಮುಲ್ಲಾ ಸ್ವಾಗತಿಸಿದರು. ಉಪನ್ಯಾಸಕ ಮೆಹರ್ವಾಡೆ ವಂದಿಸಿದರು.
ಸರ್ಕಾರ ಸ್ವಚ್ಛತೆಗೆ ಒತ್ತುಕೊಟ್ಟು ಕಾರ್ಯನಿರ್ವಹಿಸುತ್ತಿದೆ. ಸಾರ್ವಜನಿಕರು ಸ್ವಚ್ಛತೆಯಡೆಗೆ ಜಾಗೃತರಾಗಬೇಕು. ಶೌಚಾಲಯಗಳನ್ನು ದಿನನಿತ್ಯ ಬಳಸುವ ಮನೋಭಾವನೆ ಮೂಡುವಂತೆ ಬದಲಾವಣೆಯಾಗಬೇಕು. ಜಿಲ್ಲಾ ಪಂಚಾಯಿತಿಯಿಂದ ಶೌಚಾಲಯಗಳ ಅವ್ಯವಸ್ಥೆಗಳ ಕುರಿತು ಸ್ವಯಂ ಪ್ರಕರಣ ದಾಖಲಿಸುವ ಮೂಲಕ ಗ್ರಾಮೀಣಾಭಿವೃದ್ಧಿಗೆ ಇರುವ ಎಲ್ಲ ಕ್ರಮಗಳನ್ನು ಲೋಕಾಯುಕ್ತ ಇಲಾಖೆ ಕೈಗೊಳ್ಳುತ್ತಿದೆ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ ತಿಳಿಸಿದರು.



