ಬೆಂಗಳೂರು: ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆ ಪಾಕ್ ಸೈಬರ್ ದಾಳಿ ನಡೆಸುವ ಸಾಧ್ಯತೆ ಹಿನ್ನೆಲೆ ನಾಗರಿಕರು ಜಾಗೃತರಾಗಿರುವಂತೆ ಬೆಂಗಳೂರು ಪೊಲೀಸ್ ಕಮಿಷನರ್ ಬಿ.ದಯಾನಂದ್ ಎಚ್ಚರಿಕೆ ಸಂದೇಶ ನೀಡಿದ್ದಾರೆ.
ಇಂಡೋ-ಪಾಕ್ ಸಂಘರ್ಷ ಸನ್ನಿವೇಶದ ಕುರಿತ ಎಕ್ಸ್ಕ್ಲ್ಯೂಸಿವ್ ದೃಶ್ಯಗಳು, ವೈರಲ್ ವಿಡಿಯೋ, ಆಫರ್ ಕುರಿತ ಸಂದೇಶಗಳು ನಕಲಿ ವೆಬ್ಸೈಟ್ಗಳ ಮೂಲಕ ಸೃಷ್ಟಿಯಾಗಿರಬಹುದು. ಹಾಗೂ ನಿಮ್ಮ ಫೋನ್ಗಳಿಗೆ ಮಾಲ್ವೇರ್ಗಳನ್ನು ಇನ್ಸ್ಟಾಲ್ ಮಾಡಬಹುದು. ನಕಲಿ ಲಿಂಕ್ಗಳ ಮೂಲಕ ಸೇನೆಯಲ್ಲಿ ಕೆಲಸದ ಅಪ್ಲಿಕೇಶನ್ ಹೆಸರಿನಲ್ಲಿ ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ಸೈಬರ್ ವಂಚಕರು ಕಳುವು ಮಾಡಬಹುದು.
ತುರ್ತಾಗಿ ಆರ್ಮಿ ನೇಮಕಾತಿ ಮತ್ತಿತರ ಕುರಿತು ಅಪರಿಚಿತರಿಂದ ಮೇಲ್ಗಳನ್ನು ಸ್ವೀಕರಿಸಿದರೆ ಅವುಗಳನ್ನು ತೆರೆಯದಿರಿ. ಅವುಗಳ ಮೂಲಕ ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ಕದಿಯುವ ಸಾಧ್ಯತೆಗಳಿವೆ.
ವಾಟ್ಸ್ಆ್ಯಪ್ ಸೇರಿದಂತೆ ಇತರೆ ಸಾಮಾಜಿಕ ಜಾಲತಾಣಗಳ ಮೂಲಕ ಸ್ವೀಕರಿಸುವ ಅಪರಿಚಿತರ ಸಂದೇಶಗಳನ್ನು ತೆರೆಯದಿರಿ. ನಿಮ್ಮ ಪರಿಚಿತರಿಂದಲೇ ಅನುಮಾನಾಸ್ಪದ ಫೈಲ್ಗಳನ್ನು ಸ್ವೀಕರಿಸಿದರೂ ಸಹ ತೆರೆಯದಿರಿ ಹಾಗೂ ಇತರರೊಂದಿಗೆ ಹಂಚಿಕೊಳ್ಳದಿರಿ, ಬದಲಿಗೆ ಅವುಗಳನ್ನು ಡಿಲೀಟ್ ಮಾಡುವುದು ಸೂಕ್ತ ಎಂದು ಸಂದೇಶ ನೀಡಿದ್ದಾರೆ.