ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಜಗತ್ತಿನಲ್ಲಿ ಜ್ಞಾನಿಗಳಿಗೆ ಬಹಳಷ್ಟು ಮಹತ್ವವಿದೆ. ಮನುಷ್ಯನಿಗೆ ಪುಸ್ತಕಗಳು ಜ್ಞಾನವನ್ನು ನೀಡುತ್ತವೆ. ಇಲ್ಲಿ ಪ್ರಾರಂಭಗೊಂಡಿರುವ ಈ ಗ್ರಂಥಾಲಯವನ್ನು ಸದುಪಯೋಗಪಡಿಸಿಕೊಂಡು ಜ್ಞಾನವಂತರಾಗಿರಿ ಎಂದು ಕುರುಡಗಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವನಗೌಡ ಸಿದ್ದನಗೌಡ ಹೇಳಿದರು.
ಸಮೀಪದ ಯರೆಬೇಲೇರಿ ಗ್ರಾಮದಲ್ಲಿ ಅವರು ಡಾ. ಬಿ.ಆರ್. ಅಂಬೇಡ್ಕರ ಗ್ರಂಥಾಲಯವನ್ನು ಉದ್ಘಾಟಿಸ್ಕಿವರು ಮಾತನಾಡಿದರು.
ಗ್ರಾಮಕ್ಕೊಂದು ಗ್ರಂಥಾಲಯವಿದ್ದರೆ ಅದು ಆ ಗ್ರಾಮದ ಸಾಂಸ್ಕೃತಿಕ ಕೇಂದ್ರವಾಗುತ್ತದೆ. ಇಲ್ಲಿನ ಗ್ರಂಥಗಳನ್ನು ಓದುವದರಿಂದ ನಮ್ಮಲ್ಲಿನ ಜ್ಞಾನ ತಾನೇ ತಾನಾಗಿ ಹೆಚ್ಚಾಗುತ್ತದೆ. ಆದ್ದರಿಂದ ನಿಮ್ಮ ಬಿಡುವಿನ ವೇಳೆಯನ್ನು ಹಾಳು ಹರಟೆಯಲ್ಲಿ ಕಳೆಯದೆ ಈ ಗ್ರಂಥಾಲಯಕ್ಕೆ ಬಂದು ಪತ್ರಿಕೆ, ಪುಸ್ತಕ ಓದಿ ನಿಮ್ಮ ಜ್ಞಾನವನ್ನು ಬೆಳೆಸಿಕೊಳ್ಳಿ. ಓದಿಗೆ ಇನ್ನೊಂದು ಹೆಸರೇ ಡಾ. ಅಂಬೇಡ್ಕರರಾಗಿದ್ದರು. ಅವರ ಹೆಸರಿನಲ್ಲಿ ಪ್ರಾರಂಭವಾದ ಈ ಗ್ರಂಥಾಲಯದಿಂದ ಒಬ್ಬರಾದರೂ ಜ್ಞಾನಿಗಳು ಈ ಗ್ರಾಮದಿಂದ ಹೊರಹೊಮ್ಮಲಿ ಎಂದು ಅವರು ಆಶಿಸಿದರು.
ರೋಣ ಸಿಪಿಐ ಎಸ್.ಎಸ್. ಬೀಳಗಿ ಮಾತನಾಡಿ, ಜಗತ್ತಿನಲ್ಲಿ ದಾರ್ಶನಿಕರೆನಿಸಿಕೊಂಡವರೆಲ್ಲರೂ ತಮ್ಮಲ್ಲಿನ ಜ್ಞಾನದ ಮೂಲಕ ಜಗದ್ವಿಖ್ಯಾತರಾಗಿದ್ದಾರೆ. ಜೀವನವೆಂದರೆ ಬರೀ ದುಡಿಮೆ, ಊಟ, ನಿದ್ರೆ ಮಾತ್ರವಲ್ಲ. ನಮ್ಮ ನಿತ್ಯದ ಜೀವನದೊಂದಿಗೆ ನಮ್ಮ ಜ್ಞಾನದ ವಿಕಾಸವನ್ನೂ ಮಾಡಿಕೊಳ್ಳಬೇಕು. ಅದಕ್ಕೆ ಇಂತಹ ಗ್ರಂಥಾಲಯಗಳು ಸಹಾಯ ಮಾಡುತ್ತವೆ ಎಂದರು.
ಸಭೆಯನ್ನುದ್ದೇಶಿಸಿ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಸಿ.ಕೆ. ಕಂದಕೂರ, ನರೇಗಲ್ಲ ಪಿಎಸ್ಐ ಐಶ್ವರ್ಯ ನಾಗರಾಳ ಇನ್ನಿತರರು ಮಾತನಾಡಿದರು. ಸಭೆಯಲ್ಲಿ ಗ್ರಾ.ಪಂ ಸದಸ್ಯರಾದ ರಮೇಶ ಕಡೇಮನಿ, ಅಲ್ಲಾಬಕ್ಷಿ ನದಾಫ್, ಪಿಡಿಒ ಶಿಲಪಾ ಕವಲೂರ, ಶಿಕ್ಷಕರಾದ ಭಜಂತ್ರಿ, ಮಹೇಶ ಕೇರಿ, ಗ್ರಾ.ಪಂ ಸಿಬ್ಬಂದಿ ಮತ್ತು ಗ್ರಾಮದ ಗಣ್ಯರು ಉಪಸ್ಥಿತರಿದ್ದರು.