ಬೆಳಗಾವಿ: ಖಾವಿ ಧರಿಸಿ ಸತ್ಸಂಗದ ಬಗ್ಗೆ ಪ್ರವಚನ ನೀಡ್ತಿದ್ದ ಸ್ವಾಮೀಜಿಯ ವಿರುದ್ಧವೇ ಗಂಭೀರ ಆರೋಪ ಕೇಳಿ ಬಂದಿತ್ತು. ಹೌದು 17 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ಆರೋಪ ಹಿನ್ನೆಲೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ಮೇಖಳಿಯ ರಾಮಮಂದಿರ ಲೋಕೇಶ್ವರ ಮಹಾರಾಜ ಸ್ವಾಮೀಜಿಯನ್ನು ಪೋಕ್ಸೋ ಕೇಸ್ ಅಡಿ ಪೊಲೀಸರು ಬಂಧಿಸಿದ್ದಾರೆ.
ಮೇ 13ರಂದು ಮನೆಗೆ ಬಿಡುವುದಾಗಿ ಬಾಲಕಿಯನ್ನು ಸ್ವಾಮೀಜಿ ರಾಯಚೂರಿಗೆ ಕರೆದೊಯ್ದಿದ್ದಾರೆ. ಮೇ 13, 14ರಂದು ರಾಯಚೂರಿನಲ್ಲಿ ಎರಡು ದಿನ ಇದ್ದರು. ಬಳಿಕ ಮೇ 15ರಂದು ರಾತ್ರಿ ಬಾಗಲಕೋಟೆಯಲ್ಲಿ ವಾಸ್ತವ್ಯ ಹೂಡಿದ್ದರು. 2 ಕಡೆ ವಾಸ್ತವ್ಯ ಇದ್ದಾಗ ಅತ್ಯಾಚಾರ ಮಾಡಿದ್ದಾರೆ ಎಂದು ಆರೋಪ ಕೇಳಿಬಂದಿದೆ. ಯಾರ ಬಳಿಯಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಕೂಡ ಹಾಕಿದ್ದಾರೆ.
ಮೇ 16ರಂದು ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ಬಸ್ ನಿಲ್ದಾಣದಲ್ಲಿ ಬಾಲಕಿಯನ್ನು ಸ್ವಾಮೀಜಿ ಬಿಟ್ಟು ಹೋಗಿದ್ದಾರೆ. ಈ ಬಗ್ಗೆ ಮೇ 17ರಂದು ಬಾಗಲಕೋಟೆ ಮಹಿಳಾ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಬಳಿಕ ಮಹಿಳಾ ಠಾಣೆ ಪೊಲೀಸರು ಮೂಡಲಗಿ ಠಾಣೆಗೆ ಪ್ರಕರಣವನ್ನು ವರ್ಗಾಯಿಸಿದ್ದಾರೆ.