ಬೆಂಗಳೂರು: ನಗರದ ಹೃದಯ ಭಾಗದಲ್ಲೇ ನಡೆದ ರಸ್ತೆ ಅಪಘಾತವು ತುರ್ತು ಸೇವೆಗಳ ವೈಫಲ್ಯವನ್ನು ಬಯಲಿಗೆಳೆದಿದೆ. ವಿಂಡ್ಸರ್ ಮ್ಯಾನರ್ ಬ್ರಿಡ್ಜ್ ಸಮೀಪ ಜಲ್ಲಿಕಲ್ಲು ಚೆಲ್ಲಿಕೊಂಡಿದ್ದ ರಸ್ತೆಯಲ್ಲಿ ಬೈಕ್ ಸ್ಕಿಡ್ ಆಗಿ ಡೆಲಿವರಿ ಬಾಯ್ ಕೆಳಗೆ ಬಿದ್ದಿದ್ದು, ತೀವ್ರವಾಗಿ ಗಾಯಗೊಂಡು ಪ್ರಜ್ಞೆ ತಪ್ಪಿದ್ದಾನೆ.
ಘಟನೆ ನಡೆದ ನಂತರ ಸುಮಾರು 30 ರಿಂದ 40 ನಿಮಿಷಗಳವರೆಗೆ ಅಂಬುಲೆನ್ಸ್ ಸ್ಥಳಕ್ಕೆ ಆಗಮಿಸದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ನಗರದ ಮಧ್ಯಭಾಗದಲ್ಲೇ, ಮುಖ್ಯಮಂತ್ರಿ ನಿವಾಸಕ್ಕೂ ಸಮೀಪದಲ್ಲಿದ್ದರೂ ತುರ್ತು ಸೇವೆಗಳ ಪ್ರತಿಕ್ರಿಯೆ ವಿಳಂಬವಾಗಿರುವುದು ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ.
ತಡರಾತ್ರಿ ಕಲಾಪ ಮುಗಿದು ಅದೇ ಮಾರ್ಗದಲ್ಲಿ ಸಂಚರಿಸಿದ್ದ ಶಾಸಕರು ಹಾಗೂ ಸಚಿವರು ಸಹ ಗಾಯಾಳುವಿನ ನೆರವಿಗೆ ಬರಲಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಪೊಲೀಸರ ಎದುರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಗಾಯಗೊಂಡಿದ್ದ ಡೆಲಿವರಿ ಬಾಯ್ನ್ನು ನಂತರ ಕೆಸಿ ಜನರಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಸಂಬಂಧಿಸಿದಂತೆ ಅಧಿಕಾರಿಗಳ ನಿರ್ಲಕ್ಷ್ಯ ಕುರಿತಾಗಿ ಪ್ರಶ್ನೆಗಳು ಉದ್ಭವಿಸುತ್ತಿವೆ.



