ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಆರೋಪದಡಿ ನಟ ದರ್ಶನ್, ಪವಿತ್ರಾಗೌಡ ಸೇರಿದಂತೆ ಆರೋಪಿಗಳು ಪರಪ್ಪನ ಅಗ್ರಹಾರದ ಜೈಲು ಪಾಲಾಗಿದ್ದಾರೆ. ಕೊಲೆ ನಡೆದು ತಿಂಗಳುಗಳು ಕಳೆಯುತ್ತ ಬಂದಿದ್ದು, ಕೊಲೆಯ ಬಗ್ಗೆ ಒಂದೊಂದೇ ಸಾಕ್ಷ್ಯಗಳನ್ನು ಪೊಲೀಸರು ತನಿಖೆಯಿಂದ ದೃಢ ಪಡಿಸುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 70% ಎಫ್ಎಸ್ಎಲ್ ವರದಿ ಪೊಲೀಸರ ಕೈ ಸೇರಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ್ ತಿಳಿಸಿದ್ದಾರೆ.
ಗ್ಯಾಜೆಟ್ ಅಥವಾ ಎಲೆಕ್ಟ್ರಾನಿಕ್ ಉಪಕರಣಗಳ ಸಾಕ್ಷ್ಯಗಳನ್ನು ಹೈದರಾಬಾದ್ ಎಫ್ಎಸ್ಎಲ್ ಗೆ ಕಳಿಸಲಾಗಿದ್ದು ಅಲ್ಲಿಂದ ವರದಿಗಳು ಕೆಲ ದಿನಗಳಲ್ಲಿ ತಮ್ಮನ್ನು ತಲುಪಲಿವೆ. ಎಲ್ಲ ವರದಿಗಳು ಪ್ರಾಪ್ತವಾದ ಬಳಿಕ ಮತ್ತೊಮ್ಮೆ ಸಾಕ್ಷಿಗಳಿಂದ ಸ್ಪಷ್ಟೀಕರಣ ಪಡೆಯಲಾಗುವುದು, ಅದಾದ ನಂತರ ಪ್ರಕರಣದ ಅಂತಿಮ ವರದಿ ಅಥವಾ ಚಾರ್ಜ್ಶೀಟನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ಆಯುಕ್ತ ದಯಾನಂದ ಹೇಳಿದರು.
ಸದ್ಯ ಆರೋಪಿಗಳ ತಲೆಗೂದಲು ಸ್ಯಾಂಪಲ್ ವರದಿ ಖಾಕಿ ಕೈಗೆ ತಲುಪಿದೆ. ಇಬ್ಬರು ಆರೋಪಿಗಳಿಗೆ ಕೂದಲು ಸಂಕಷ್ಟ ತಂದೊಡ್ಡಿದ್ದು, ಕೊಲೆ ಮಾಡಿದ ಬಳಿಕ ರೇಣುಕಾಸ್ವಾಮಿ ಶವವನ್ನು ಬಿಸಾಡುವಾಗ ಸ್ಕಾರ್ಪಿಯೋ ಕಾರಲ್ಲಿ ನಾಲ್ವರು ಆರೋಪಿಗಳು ಹೋಗಿದ್ರು. ಆ ಸ್ಕಾರ್ಪಿಯೋ ಕಾರಲ್ಲಿ ಆರೋಪಿಗಳ ಕೂದಲು ಉದುರಿತ್ತು. ಅದನ್ನು ಸಂಗ್ರಹಿಸಿ ಡಿಎನ್ಎ ಟೆಸ್ಟ್ಗೆ ಕಳುಹಿಸಲಾಗಿತ್ತು. ಈಗ ಡಿಎನ್ಎ ವರದಿ ಬಂದಿದ್ದು ಇಬ್ಬರು ಆರೋಪಿಗಳ ಕೂದಲು ಮ್ಯಾಚ್ ಆಗಿದೆ. ಸದ್ಯ ತನಿಖೆ ಅಂತಿಮ ಘಟ್ಟ ತಲುಪಿದ್ದು, ಶೀಘ್ರವೇ ಚಾರ್ಜ್ಶೀಟ್ ಸಲ್ಲಿಕೆಯಾಗಲಿದೆ.