ಬೆಂಗಳೂರು:- ಪತ್ನಿ ಶೀಲ ಶಂಕಿಸಿ ಗಂಡನೋರ್ವ ಆಕೆಯ ಕತ್ತು ಹಿಸುಕಿ ಕೊಂದ ಘಟನೆ ಬೆಂಗಳೂರಿನ ಹೆಗ್ಗಡೆ ನಗರದ 1 ನೇ ಕ್ರಾಸ್ ನಲ್ಲಿ ಜರುಗಿದೆ.
35 ವರ್ಷದ ವೇಲಾರಮಣಿ ಕೊಲೆಯಾದ ದುರ್ದೈವಿ. ಗಂಡ ಚಂದ್ರಶೇಖರ್ ನಿಂದ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ. ನಿನ್ನೆ ಬೆಳಗ್ಗೆ 10 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಕ್ಯಾಬ್ ಡ್ರೈವರ್ ಆಗಿದ್ದ ಕೊಲೆ ಆರೋಪಿ ಚಂದ್ರಶೇಖರ್, ಖಾಸಗಿ ಕಂಪನಿಯಲ್ಲಿ ಅಕೌಂಟೆಂಟ್ ಆಗಿದ್ದ ವೇಲಾರಮಣಿ ಇವರಿಬ್ಬರ ಮದುವೆ 11 ವರ್ಷದ ಹಿಂದೆ ಹಿರಿಯರ ಸಮ್ಮುಖದಲ್ಲಿ ನಡೆದಿತ್ತು. ದಂಪತಿಗಳು ಅನ್ಯೋನ್ಯವಾಗಿದ್ದರು. ಅಲ್ಲದೇ ಇವರಿಬ್ಬರ ದಾಂಪತ್ಯದ ಸಂಕೇತವಾಗಿ ಇಬ್ಬರು ಮುದ್ದಾದ ಮಕ್ಕಳು ಕೂಡ ಇದ್ದಾರೆ. ಇತ್ತೀಚೆಗೆ ಫೋನ್ ನಲ್ಲೇ ಹೆಚ್ಚು ಮಾತನಾಡುತ್ತಿದ್ದ ಪತ್ನಿ ಮೇಲೆ ಗಂಡನಿಗೆ ಅನುಮಾನ ಮೂಡಿದೆ. ಇದೇ ವಿಚಾರಕ್ಕೆ ನಿನ್ನೆ ಇಬ್ಬರು ಮಕ್ಕಳು ಸ್ಕೂಲಿಗೆ ಹೋದ ಮೇಲೆ ದಂಪತಿಗಳಿಬ್ಬರ ನಡುವೆ ಗಲಾಟೆ ಆಗಿದೆ. ಈ ವೇಳೆ ಗಲಾಟೆ ವಿಕೋಪಕ್ಕೆ ಹೋಗಿ ಹೆಂಡ್ತಿ ಕತ್ತು ಹಿಸುಕಿ ಪತಿ ಚಂದ್ರಶೇಖರ್ ಕೊಲೆ ಮಾಡಿದ್ದಾನೆ.
ಬಳಿಕ ತಾನೇ ಸಂಪಿಗೆಹಳ್ಳಿ ಠಾಣೆಗೆ ಹೋಗಿ ಶರಣಾಗಿದ್ದಾನೆ. ನಂತರ ಸ್ಥಳಕ್ಕೆ ತೆರಳಿದ್ದ ಸಂಪಿಗೆಹಳ್ಳಿ ಪೊಲೀಸರು, ಕೊಲೆ ಮಾಡಿದ ಸ್ಥಳ ಪರಿಶೀಲನೆ ನಡೆಸಿದರು. ಬಳಿಕ ಮೃತ ದೇಹ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದ್ದರು.
ಘಟನೆ ಸಂಬಂಧ ಸಂಪಿಗೆಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.