ಬೆಂಗಳೂರು: ದೇಶದಲ್ಲಿ ವರದಕ್ಷಿಣೆ ಕಿರುಕುಳ ಹಾಗೂ ಮಹಿಳೆಯರ ಮೇಲೆ ಕೌಟುಂಬಿಕ ದೌರ್ಜನ್ಯ, ಬಾಲ್ಯ ವಿವಾಹದಂಥ ಪ್ರಕರಣಗಳು ಹೆಚ್ಚುತ್ತಿವೆ. ಇದು ಜಿಲ್ಲೆಯ ಪ್ರಜ್ಞಾವಂತರಲ್ಲಿ ಆತಂಕ ಮೂಡಿಸಿದೆ.ವಿದ್ಯಾವಂತ ದಂಪತಿಗಳ ನಡುವೆ ಹೆಚ್ಚಾಗಿ ವರದಕ್ಷಿಣೆ ದೌರ್ಜನ್ಯ, ಕಿರುಕುಳ ಪ್ರಕರಣ ಸಂಭವಿಸುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ.
ಇದೀಗ ಕರ್ನಾಟಕದ ರಾಜಧಾನಿ ಹಾಗೂ ದೇಶದ ಸಿಲಿಕಾನ್ ಸಿಟಿಯಾಗಿ ಗುರುತಿಸಿಕೊಂಡಿರುವ ಬೆಂಗಳೂರು, ಇತ್ತೀಚೆಗೆ ಆಘಾತಕಾರಿ ಕಾರಣದಿಂದ ಮತ್ತೊಮ್ಮೆ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿದೆ. ವರದಕ್ಷಿಣೆ ಕಿರುಕುಳ ಪ್ರಕರಣಗಳಲ್ಲಿ ಬೆಂಗಳೂರು ದೇಶದ ಇತರ ಮೇಟ್ರೋ ನಗರಗಳಿಗಿಂತಲೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿ ಅಗ್ರಸ್ಥಾನದಲ್ಲಿ ಸ್ಥಾನ ಪಡೆದಿದೆ.
ಇದನ್ನು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಬಹಿರಂಗಪಡಿಸಿದ್ದು, 2023ರ ವರದಿ ಪ್ರಕಾರ ಬೆಂಗಳೂರಿನಲ್ಲಿ ವರದಕ್ಷಿಣೆ ಸಂಬಂಧಿತ 1,013 ದೂರುಗಳು ದಾಖಲಾಗಿವೆ. ಇದು ಮುಂಬೈ, ದೆಹಲಿ, ಚೆನ್ನೈ ಸೇರಿದಂತೆ ಇತರ 18 ಮೇಟ್ರೋ ನಗರಗಳಿಗಿಂತಲೂ ಹೆಚ್ಚಿನ ಸಂಖ್ಯೆಯಾಗಿದೆ ಎಂದು ಸ್ಟೇಟಿಸ್ಟಿಕಲ್ ಕ್ರೈಮ್ ರೆಕಾರ್ಡ್ಸ್ ಬ್ಯುರೋ (SCRB) ಸ್ಪಷ್ಟಪಡಿಸಿದೆ.
ವರದಕ್ಷಿಣೆ ಕಿರುಕುಳ ಪ್ರಕರಣದಲ್ಲಿ ಪಾಟ್ನಾದಲ್ಲಿ 104 ಪ್ರಕರಣಗಳು ದಾಖಲಾದರೆ, ಲಕ್ನೋನಲ್ಲಿ ಕೇವಲ 19 ಪ್ರಕರಣಗಳು ದಾಖಲಾಗಿರುವುದು ವರದಿ ಆಗಿದೆ. ಆದರೆ ಬೆಂಗಳೂರಿನಲ್ಲಿ ಸಾವಿರಾರು ದೂರುಗಳು ದಾಖಲಾಗಿದೆ. ಹಾಗಂತ ಅಪರಾಧಗಳು ನಡೆಯುತ್ತಿವೆ ಎಂದು ಅರ್ಥವಲ್ಲ,
ಬದಲಿಗೆ ಹೆಚ್ಚಿನ ಮಹಿಳೆಯರು ತಮಗಾದ ದೌರ್ಜನ್ಯದ ಬಗ್ಗೆ ದೂರು ನೀಡಲು ಮುಂದೆ ಬರುತ್ತಿದ್ದಾರೆ ಎಂಬುವುದನ್ನು ತೋರಿಸುತ್ತದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿರುವುದಾಗಿ ದಿ ಹಿಂದೂ ವರದಿ ಮಾಡಿದೆ.
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಬಹಿರಂಗ ಪಡಿಸಿದ ಮಾಹಿತಿಯ ಪ್ರಕಾರ 2023ರಲ್ಲಿ ಕರ್ನಾಟಕದ ಒಟ್ಟಾರೆ ಪರಿಸ್ಥಿತಿ ನೋಡಿದರೆ ಮಹಿಳೆಯರು, ಮಕ್ಕಳು ಮತ್ತು ವೃದ್ಧರ ಮೇಲಿನ ಅಪರಾಧಗಳಲ್ಲಿ ಹೆಚ್ಚಳ ಕಂಡುಬಂದಿದೆ. ರಾಜ್ಯದಲ್ಲಿ ಮಹಿಳೆಯರ ಮೇಲೆ ಸಂಭವಿಸಿದ್ದ ಅಪರಾಧ ಸಂಖ್ಯೆ ಶೇಕಡಾ 14 ಕ್ಕಿಂತ ಹೆಚ್ಚು ಏರಿಕೆಯಾಗಿದೆ.