ವಿಜಯಸಾಕ್ಷಿ ಸುದ್ದಿ, ಗದಗ : ಶಿಕ್ಷಣ ಪ್ರೇಮಿ, ತ್ಯಾಗಜೀವಿ ಬಿ.ಜಿ. ಅಣ್ಣಿಗೇರಿ ಗುರುಗಳು ಶಿಕ್ಷಣ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆ ಅಮೋಘವಾದದ್ದು. ಗುರುಕುಲ ಮಾದರಿಯ ಆಶ್ರಮದಲ್ಲಿ ಇಂದಿಗೂ ನಿತ್ಯ ಅನುಭವಿಕ ಶಿಕ್ಷಕ ತಂಡದಿಂದ ‘ಅಕ್ಷರ ದಾಸೋಹ’ ನಡೆದಿರುವದು ಅಭಿನಂದನೀಯ ಎಂದು ಗದಗ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ವ್ಹಿ.ವ್ಹಿ. ನಡುವಿನಮನಿ ಹೇಳಿದರು.
ಅವರು ಶುಕ್ರವಾರ ಗದಗ ತಾಲೂಕಿನ ಕಣವಿ ಗ್ರಾಮದ ಸರಕಾರಿ ಮಾಧ್ಯಮಿಕ ಶಾಲೆಯಲ್ಲಿ ಶಿಕ್ಷಣ ಪ್ರೇಮಿ, ತ್ಯಾಗಜೀವಿ ಬಿ.ಜಿ. ಅಣ್ಣಿಗೇರಿ ಗುರುಗಳ ಪ್ರತಿಭಾ ಪ್ರತಿಷ್ಠಾನ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಸರಣಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಶಿಕ್ಷಕರಾಗಿ, ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸುತ್ತಿದ್ದ ಅಣ್ಣಿಗೇರಿ ಗುರುಗಳು ಗದುಗಿನಲ್ಲಿ ತಾವಿದ್ದ ಕೊಠಡಿಯಲ್ಲಿ ಕೆಲವು ವಿದ್ಯಾರ್ಥಿಗಳಿಗೆ ಟ್ಯೂಶನ್ ಹೇಳುವ ಪರಿಪಾಠವಿಟ್ಟುಕೊಂಡವರು. ಈ ಟ್ಯೂಶನ್ ಹೇಳುವ ಸುದ್ದಿ ಇತರ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿ ಕಾಲಕ್ರಮೇಣ ಅದು ಗುರುಕುಲ ಮಾದರಿಯಲ್ಲಿ ಬೆಳೆದು ಬಂದು ಅವರ ತರುವಾಯ ಅವರ ಶಿಷ್ಯರು ಈ ಗುರುಕುಲವನ್ನು ಪ್ರಗತಿಪಥದಲ್ಲಿ ಮುನ್ನಡೆಸಿಕೊಂಡು ಬಂದಿರುವದು ಶ್ಲಾಘನೀಯ ಎಂದರು.
ಪ್ರತಿಭಾನ್ವಿತ ವಿದ್ಯಾರ್ಥಿಗಳಿದ್ದಲ್ಲಿಯೇ ಬಂದು ಪ್ರತಿಭಾನ್ವಿತರಿಗೆ ಪ್ರತಿಷ್ಠಾನವು ಪುರಸ್ಕರಿಸುತ್ತಿರುವದು ಇತರ ವಿದ್ಯಾರ್ಥಿಗಳಿಗೆ ಸ್ಪೂರ್ತಿ, ಪ್ರೇರಣೆ ನೀಡಿದಂತಾಗಿದೆ. ಅಣ್ಣಿಗೇರಿ ಗುರುಗಳ ಗುರುಕುಲ ಆಶ್ರಮದಲ್ಲಿ ನಡೆಯುತ್ತಿರುವ ಅಕ್ಷರ ದಾಸೋಹ-ಜ್ಞಾನ ದಾಸೋಹ ನಿತ್ಯ ನಿರಂತರವಾಗಿರಲಿ ಎಂದರು.
ಮುಖ್ಯ ಅತಿಥಿಗಳಾಗಿ ಜಿಮ್ಸ್ ವೈದ್ಯಾಧಿಕಾರಿ ಡಾ. ಜಿ.ಎಸ್. ಪಲ್ಲೇದ, ಡೈಟ್ ಉಪನ್ಯಾಸಕ ಶಂಕರ ಹಡಗಲಿ, ಯಲ್ಲಪ್ಪ ಕಲ್ಯಾಣಿ, ಬಸಪ್ಪ ಸೋಗಿ ಆಗಮಿಸಿದ್ದರು. ಅಧ್ಯಕ್ಷತೆ ವಹಿಸಿದ್ದ ಪ್ರತಿಷ್ಠಾನದ ಅಧ್ಯಕ್ಷ ಶಿವಕುಮಾರ ಎಚ್.ಪಾಟೀಲ ಮಾತನಾಡಿ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡುವ ಮೂಲಕ ಇತರ ವಿದ್ಯಾರ್ಥಿಗಳಿಗೆ ಸ್ಪೂರ್ತಿ ನೀಡಲು ಆಯಾ ಶಾಲೆಗೆ ತೆರಳಿ ಪ್ರತಿಭೆಗಳನ್ನು ಗೌರವಿಸಲು ಪ್ರತಿಷ್ಠಾನ ಮುಂದಾಗಿದೆ ಎಂದರು.
ಪ್ರತಿಷ್ಠಾನದ ಉಪಾಧ್ಯಕ್ಷ ಶಂಕ್ರಪ್ಪ ಅಣ್ಣಿಗೇರಿ, ಕಾರ್ಯದರ್ಶಿ ಶಿವಪ್ಪ ಕತ್ತಿ, ಖಜಾಂಚಿ ಸಿದ್ಧಲಿಂಗನಗೌಡ ಪಾಟೀಲ, ನಿರ್ದೆಶಕರಾದ ಶಿವಾನಂದ ದಂಡಿನ, ವಿರುಪಾಕ್ಷಪ್ಪ ಮ್ಯಾಗೇರಿ, ಚನ್ನಪ್ಪ ಮಲ್ಲಾಡದ, ತೋಂಟೇಶ ವೀರಲಿಂಗಯ್ಯನಮಠ, ವಿರುಪಾಕ್ಷಪ್ಪ ಶಾಂತಗೇರಿ, ಕಳಕಪ್ಪ ಕುರ್ತಕೋಟಿ ಪಾಲ್ಗೊಂಡಿದ್ದರು.
ಪ್ರಾರಂಭದಲ್ಲಿ ಎಸ್.ಜಿ. ಮೂಲಿಮನಿ ಸ್ವಾಗತಿಸಿದರು, ಎಂ.ಎಸ್. ಗಾರವಾಡ ಪ್ರಾಸ್ತಾವಿಕವಾಗಿ ಮಾತನಾಡದರು. ಕೊನೆಗೆ ಜಿ.ಎನ್. ಮುದ್ದಿಕೋಲ ವಂದಿಸಿದರು. ಪ್ರವೀಣ ಮಾಯಣ್ಣವರ, ರೋಹಿಣಿ ಅರಗಂಜಿ, ವಿಜಯ ಮಜ್ಜಿಗುಡ್ಡ, ಶಿವರಾಜ ಗಾಜಿ, ನೀಲಮ್ಮ ಹಳ್ಳಿಕೇರಿ, ಉಮಾ ಕೋರಿ ಇವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಗದಗ ತಾಲೂಕಿನ ಮುಳಗುಂದ ಪಟ್ಟಣದ ಸರಕಾರಿ ಉರ್ದು ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಸುಹಾನಾ ದಾದಪ್ಪನವರ, ತಬಸೂಮ್ ಗುಂಜಳ, ಸಾನಿಯಾ ಕಿಚಡಿ, ಶಾಹೀನ್ ಶೇಖ ಹಾಗೂ ತಸ್ಲೀಮ್ ಮುಜಾವರ ಅವರಿಗೆ ಪುರಸ್ಕಾರ ನೀಡಿ ಗೌರವಿಸಲಾಯಿತು.
ಪ್ರತಿಭಾ ಪುರಸ್ಕಾರ ತಂಡದವರಲ್ಲದೆ ಶಾಲೆಯ ಎಸ್.ಜಿ. ಉಮರ್ಜಿ, ಎನ್.ಎನ್. ಪಿಂಜಾರ, ಎಸ್.ಎಂ. ನೆಗಳೂರ, ಜಿ.ಎಂ. ಫಿರಂಗಿ, ನೇಹಾ ಖಟವಟೆ, ತಾಯಮ್ಮ ಮುಂತಾದವರು ಪಾಲ್ಗೊಂಡಿದ್ದರು. ಮುಳಗುಂದದ ,ಒರಾರ್ಜಿ ವಸತಿ ಶಾಲೆಯಲ್ಲೂ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಇಂದಿನ ಪ್ರತಿಭಾ ಪುರಸ್ಕಾರ
ಜುಲೈ 20ರಂದು ಮುಂಜಾನೆ 8 ಗಂಟೆಗೆ ಹೊಂಬಳ ಗ್ರಾಮದ ಸರಕಾರಿ ಶಾಲೆ, ಮುಂಜಾನೆ 9 ಗಂಟೆಗೆ ಲಿಂಗದಾಳ ಸರಕಾರಿ ಶಾಲೆ, ಮುಂಜಾನೆ 10 ಗಂಟೆಗೆ ಕದಡಿಯ ಸರಕಾರಿ ಶಾಲೆಯಲ್ಲಿ ಪ್ರತಿಭಾ ಪುರಸ್ಕಾರ ನಡೆಯಲಿದೆ ಎಂದು ಪ್ರತಿಷ್ಠಾನದ ಪ್ರಕಟಣೆ ತಿಳಿಸಿದೆ.