ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಇತ್ತೀಚೆಗೆ ಗಜೇಂದ್ರಗಡದಲ್ಲಿ ನಡೆದ 10ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಾಂಸ್ಕೃತಿಕ ವಿಭಾಗದಲ್ಲಿ ಪಟ್ಟಣದ ಸಿಂಧೂ ಪಾಟೀಲ ಪ್ರದರ್ಶಿಸಿದ ಭರತನಾಟ್ಯ ಗಮನ ಸೆಳೆಯಿತು.
ನರೇಗಲ್ಲದ ಶ್ರೀ ಬಸವೇಶ್ವರ ಪ್ರಾಥಮಿಕ ಶಾಲೆಯಲ್ಲಿ 4ನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿದ್ದು, ನರೇಗಲ್ಲ ಪಟ್ಟಣ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಶಿವನಗೌಡ ಪಾಟೀಲ ಮತ್ತು ಮಂಜುಳಾ ದಂಪತಿಗಳ ಪ್ಮತ್ರಿಯಾಗಿದ್ದಾಳೆ. ಕಳೆದ ಮೂರು ವರ್ಷಗಳಿಂದ ಇವಳು ಗದುಗಿನ ನಿಮಿಷಾಂಬಾ ನಾಟಕ ಅಕಾಡೆಮಿಯ ಸಂಸ್ಥಾಪಕಿ, ವಿದೂಷಿ ಜ್ಯೋತಿಶ್ರೀ ಅವರ ಬಳಿ ತರಬೇತಿ ಪಡೆಯುತ್ತಿದ್ದಾಳೆ. ಭರತನಾಟ್ಯದಲ್ಲಿ ಮೂರು ಪರೀಕ್ಷೆಗಳನ್ನು ಇವಳು ಈಗಾಗಲೇ ಪೂರೈಸಿದ್ದು, ಈಗ ಗದುಗಿನ ಕಲಾಕಟಿರದ ವಿದೂಷಿ ಮಾಲಾರವೆ ಅವರಲ್ಲಿ ತರಬೇತಿಯನ್ನು ಪಡೆಯುತ್ತಿದ್ದಾಳೆ.
ನರೇಗಲ್ಲದ ಶ್ರೀ ದ್ಯಾಮವ್ವ ದೇವತಾ ಜಾತ್ರೆಯಲ್ಲಿ, ರೋಣದ ಬಸಮ್ಮ ತಾಯಿಯವರ ಪುಣ್ಯಸ್ಮರಣೋತ್ಸವದಲ್ಲಿ, ಅಬ್ಬಿಗೇರಿಯಲ್ಲಿ ನಡೆದ ಶರದ್ ನವರಾತ್ರಿ ಉತ್ಸವದಲ್ಲಿ, ನರೇಗಲ್ಲದ ಕಾಳಿಕಾ ದೇವಿಯ ಧಾರ್ಮಿಕ ಕಾರ್ಯದಲ್ಲಿ, ಗದುಗಿನ ಶ್ರೀ ಮಾರುತೇಶ್ವರ ಮಂದಿರದ ಕಾರ್ತಿಕೋತ್ಸವದಲ್ಲಿ ಈಕೆ ಪ್ರದರ್ಶಿಸಿದ ನೃತ್ಯವನ್ನು ಬಾಳೆಹೊನ್ನೂರಿನ ಜಗದ್ಗುರು ಶ್ರೀ ರಂಭಾಪುರಿ ಶ್ರೀಗಳು, ಹಿರೇಮಠದ ಶ್ರೀ ಮಲ್ಲಿಕಾರ್ಜುನ ಶ್ರೀಗಳು, ಹೆಬ್ಬಳ್ಳಿ ಚೈತನ್ಯಾಶ್ರಮದ ಶ್ರೀ ದತ್ತಾವಧೂತ ಮಹಾರಾಜರು, ಶಾಸಕ ಜಿ.ಎಸ್. ಪಾಟೀಲರು, ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ, ತಾಲೂಕಾ ಅಧ್ಯಕ್ಷ ಅಮರೇಶ ಗಾಣಿಗೇರ ಮತ್ತಿತರ ಗಣ್ಯರು ಮೆಚ್ಚಿ ಶುಭ ಕೋರಿದ್ದಾರೆ.