ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಶಿಕ್ಷಣದಿಂದ ವ್ಯಕ್ತಿಯಷ್ಟೇ ಅಲ್ಲದೆ ದೇಶದ ಸರ್ವತೋಮುಖ ಅಭಿವೃದ್ಧಿ ಸಾಧ್ಯ. ಅದರಲ್ಲೂ ಹೆಣ್ಣು ಮಕ್ಕಳು ಶಿಕ್ಷಣವಂತರಾಗುವುದು ಪ್ರಗತಿಯ ದ್ಯೋತಕವೇ ಆಗಿದೆ ಎಂದು ವಿ.ಪ ಸದಸ್ಯ ಎಸ್.ವಿ. ಸಂಕನೂರ ಹೇಳಿದರು.
ಅವರು ಮಂಗಳವಾರ ಪಟ್ಟಣದ ಶ್ರೀ ತಾಯಿ ಪಾರ್ವತಿ ಮಕ್ಕಳ ಬಳಗದ ಪಿಎಸ್ಬಿಡಿ ಬಾಲಕಿಯರ ಪ್ರೌಢಶಾಲೆಯಲ್ಲಿ ಭೋಜನಾಲಯ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ, ಉಚಿತ ನೋಟ್ಬುಕ್ ವಿತರಣೆ, ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಶಾಲೆಯಲ್ಲಿ ಮಕ್ಕಳಿಗೆ ಪಠ್ಯ ಶಿಕ್ಷಣದ ಜತೆಗೆ ಮಾನವೀಯ ಮೌಲ್ಯಗಳು, ನಾಡಿನ ಸಂಸ್ಕೃತಿ, ಸಂಪ್ರದಾಯ, ಗುರು-ಹಿರಿಯರ ಬಗ್ಗೆ ಗೌರವ ಭಾವನೆ ಮೂಡಿಸುವ ನೈತಿಕ ಶಿಕ್ಷಣ ನೀಡುವದು ಅವಶ್ಯವಾಗಿದೆ. ಶಿಕ್ಷಣ ಅಂಕ ಕೇಂದ್ರಿತವಾಗಿರದೇ ಜ್ಞಾನಾಧಾರಿತ ಮತ್ತು ಜೀವನ ಶಿಕ್ಷಣ ಕಲಿಸಬೇಕು. ಈ ನಿಟ್ಟಿನಲ್ಲಿ ಪಟ್ಟಣದಲ್ಲಿ ಮಹಿಳೆಯರಿಂದಲೇ ನಡೆಯುತ್ತಿರುವ ತಾಯಿ ಪಾರ್ವತಿ ಮಕ್ಕಳ ಬಳಗದ ಕಾರ್ಯ ಶ್ಲಾಘನೀಯ ಎಂದರು.
ಈ ವೇಳೆ ವಿಶ್ವಪರಿಸರ ದಿನಾಚರಣೆ ನಿಮಿತ್ತ ಶಾಲಾ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು. ಶೈಕ್ಷಣಿಕ ಬಲವರ್ಧನೆಗಾಗಿ ಮಕ್ಕಳಿಗೆ ಉಚಿತ ನೋಟಬುಕ್ ವಿತರಣೆ ಮಾಡಲಾಯಿತು. ಸಂಸ್ಥೆಯ ಅಧ್ಯಕ್ಷೆ ಸುವರ್ಣಬಾಯಿ ಬಹದ್ದೂರದೇಸಾಯಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ರೋಹಿಣಿಬಾಯಿ ಬಹದ್ದೂರದೇಸಾಯಿ, ಜಯಲಕ್ಷ್ಮಿ ಮಹಾಂತಶೆಟ್ಟರ, ಶಾರದಕ್ಕ ಮಹಾಂತಶೆಟ್ಟರ, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎನ್. ನಾಯಕ್, ಪ.ಪೂ ಕಾಲೇಜು ಪ್ರಾಚಾರ್ಯ ಜಾನಾನಾಯಕ, ಮುಖ್ಯೋಪಾಧ್ಯಾಯ ಜೆ.ಡಿ. ಲಮಾಣಿ, ಸಾವಂತ್ರೆಮ್ಮ ಹೂವಿನ ಮುಂತಾದವರಿದ್ದರು. ನಿರ್ಮಲಾ ಗೌರಿ, ಎಸ್.ಎಸ್. ಮಠದ, ಪಿ.ಎಲ್. ಪಾಟೀಲ ನಿರ್ವಹಿಸಿದರು.
ಶಾಸಕ ಡಾ.ಚಂದ್ರು ಲಮಾಣಿ ಮಾತನಾಡಿ, ಸಾವಿರಾರು ಮಕ್ಕಳು ಓದುತ್ತಿರುವ ಈ ಶಾಲೆಯಲ್ಲಿನ ಭೋಜನಾಲಯದ ಕೊರತೆ ನೀಗಿಸಲು ಶಾಸಕರ 4 ಲಕ್ಷ ಮತ್ತು ವಿ.ಪ. ಸದಸ್ಯರ 4 ಲಕ್ಷ ರೂಗಳ ಅನುದಾನ ಕಲ್ಪಿಸಲಾಗಿದೆ. ದೇಶದ ಭವಿಷ್ಯ ರೂಪಿಸುವ ಶ್ರೇಷ್ಠ, ಬುದ್ಧಿವಂತ ಮಕ್ಕಳನ್ನು ಸಮಾಜಕ್ಕೆ ಸಮರ್ಪಿಸುವ ಸೇವೆ ಮಾಡುವ ಶಿಕ್ಷಣ ಸಂಸ್ಥೆಗೆ ಮುಂದಿನ ದಿನಗಳಲ್ಲಿ ಅಗತ್ಯವಿರುವ ಇತರೇ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಸಹಕಾರ ನೀಡುವದಾಗಿ ಹೇಳಿದರು.