ವಿಜಯಸಾಕ್ಷಿ ಸುದ್ದಿ, ರೋಣ : ಸರ್ವ ಸಮುದಾಯಗಳನ್ನು ಏಕತೆಯಿಂದ ಕಾಣುವ ಹಾಗೂ ಕೊಟ್ಟ ಮಾತಿನಂತೆ ನಡೆದುಕೊಳ್ಳುವ ಶಾಸಕ ಜಿ.ಎಸ್. ಪಾಟೀಲರ ಕೈಯನ್ನು ಸಮಾಜದ ಬಂಧುಗಳು ಬಿಡಬೇಡಿ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಅವರು ರೋಣ ತಾಲೂಕಾ ಗಾಣಿಗ ಸಮುದಾಯದ ನೂತನ ಸಮುದಾಯ ಭವನ ಕಟ್ಟಡ ನಿರ್ಮಾಣದ ಭೂಮಿಪೂಜೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ರೋಣ ತಾಲೂಕಿನ ಗಾಣಿಗ ಸಮುದಾಯ ಭವನ ನಿರ್ಮಿಸಲು ಮುಂದಾಗಿರುವುದು ಸಂತಸ ತಂದಿದೆ. ಅಲ್ಲದೆ ಶಾಸಕ ಜಿ.ಎಸ್. ಪಾಟೀಲರು ಈಗಾಗಲೇ 1 ಕೋಟಿ ರೂ.ಗಳ ಅನುದಾನವನ್ನು ಒದಗಿಸಿದ್ದು, ಮೊದಲ ಹಂತದ 25 ಲಕ್ಷ ರೂ.ಗಳು ಸಮುದಾಯಕ್ಕೆ ಬಂದಿರುವುದು ಅಭಿನಂದನಾರ್ಹ. ಮುಖ್ಯವಾಗಿ ಕಟ್ಟಡ ನಿರ್ಮಾಣಕ್ಕೆ 3 ಕೋಟಿಗೂ ಹೆಚ್ಚಿನ ಹಣ ಬೇಕಿದ್ದು, ನಾನು ಸಹ ವಯಕ್ತಿಕವಾಗಿ ಭವನ ನಿರ್ಮಾಣಕ್ಕೆ 25 ಲಕ್ಷರೂಗಳನ್ನು ನೀಡುತ್ತೇನೆ ಎಂದು ಭರವಸೆ ನೀಡಿದರು.
ಶಾಸಕ ಜಿ.ಎಸ್. ಪಾಟೀಲರು ಅತ್ಯಂತ ಪ್ರಭಾವಿ ನಾಯಕರು. ಗಾಣಿಗ ಸಮುದಾಯ ಸೇರಿದಂತೆ ಎಲ್ಲ ಸಮುದಾಯದವರ ಏಳ್ಗೆಯನ್ನು ಬಯಸುವ ವ್ಯಕ್ತಿಯಾಗಿದ್ದಾರೆ. ರಾಜಕಾರಣದಲ್ಲಿ ಇಂತಹ ಸೃಜನಶೀಲ ವ್ಯಕ್ತಿಗಳು ವಿರಳ. ಹೀಗಾಗಿ, ಕ್ಷೇತ್ರದ ಜನರು ಜಿ.ಎಸ್. ಪಾಟೀಲರಂತಹ ವ್ಯಕ್ತಿಯ ಕೈ ಬಿಡಬಾರದು ಎಂದ ಅವರು, ಮುಂದಿನ ದಿನಗಳಲ್ಲಿ ರೋಣ ಮತಕ್ಷೇತ್ರ ಅಭಿವೃದ್ಧಿಯತ್ತ ಸಾಗಲಿದೆ ಎಂದು ಆಶಾಭಾವನೆಯನ್ನು ವ್ಯಕ್ತಪಡಿಸಿದರು.
ಜಯಬಸವ ಕುಮಾರ ಶ್ರೀಗಳು, ಗುರುಪಾದ ಶ್ರೀಗಳು, ಮುಪ್ಪಿನ ಬಸವಲಿಂಗ ಶ್ರೀಗಳು, ಗಂಗಾಧರ ಶ್ರೀಗಳು, ಸದಾಶಿವ ಮಹಾಂತ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ದಶರಥ ಗಾಣಿಗೇರ, ಹುಚ್ಚಪ್ಪ ನವಲಗುಂದ, ಬಸವರಾಜ ನವಲಗುಂದ, ಬಸವರಾಜ ಬಿಂಗಿ, ಪರಶುರಾಮ ಅಳಗವಾಡಿ, ಸಿದ್ದಣ್ಣ ಬಂಡಿ, ಬಿ.ಎಸ್. ಸುಂಕದ, ವಿ.ಬಿ. ಸೋಮನಕಟ್ಟಿಮಠ, ಯೂಸುಪ್ ಇಟಗಿ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.
ಶಾಸಕ ಜಿ.ಎಸ್. ಪಾಟೀಲ ಮಾತನಾಡಿ, ನನ್ನ ರಾಜಕೀಯ ಜೀವನದಲ್ಲಿ ಗಾಣಿಗ ಸಮುದಾಯ ಸೇರಿದಂತೆ ಎಲ್ಲ ಸಮುದಾಯದವರೂ ಬೆಂಬಲಿಸಿದ್ದಾರೆ. ಸರ್ವ ಸಮುದಾಯಗಳ ಹಿತ ಕಾಯುವುದು ನನ್ನ ಮೊದಲ ಆದ್ಯತೆಯಾಗಿದೆ. ಸಮುದಾಯ ಭವನ ನಿರ್ಮಾಣಕ್ಕೆ ಮತ್ತಷ್ಟು ಅಗತ್ಯ ನೆರವು ನೀಡಲಾಗುವುದು. ಸಮುದಾಯದ ಸಹಾಯಹಸ್ತ ಕೂಡ ಮುಖ್ಯವಾಗಿದೆ ಎಂದರು.