ವಿಜಯಸಾಕ್ಷಿ ಸುದ್ದಿ, ನರೇಗಲ್ : ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರಕಾರ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಎಲ್ಲರೂ ಶಿಕ್ಷಣ ಕಲಿಯಲಿ ಎಂಬ ಆಸೆ ಸಿದ್ದರಾಮಯ್ಯ ನೇತೃತ್ವದ ಸರಕಾರಕ್ಕಿದೆ. ಆದ್ದರಿಂದ ಅಂಗನವಾಡಿ, ಶಾಲೆ ಮತ್ತಿರ ಕಟ್ಟಡಗಳ ನಿರ್ಮಾಣಕ್ಕೆ ಅನುದಾನವನ್ನು ಬಿಡುಗಡೆ ಮಾಡುತ್ತಿದೆ ಎಂದು ಕರ್ನಾಟಕ ರಾಜ್ಯ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷ, ರೋಣ ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಪಟ್ಟಣದ 12 ಮತ್ತು 13ನೇ ವಾರ್ಡಿನಲ್ಲಿ ನಿರ್ಮಾಣಗೊಳ್ಳಲಿರುವ ಅಂಗನವಾಡಿ ಕಟ್ಟಡಗಳಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಪಟ್ಟಣದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳಾಗಬೇಕಿದ್ದರೂ ಅದಕ್ಕೆ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ. ಪಟ್ಟಣದ ಸಾರ್ವಜನಿಕರು ಅಭಿವೃದ್ಧಿ ಕಾರ್ಯಳಿಗೆ ಸೂಕ್ತ ಸಹಕಾರ ನೀಡಿದರೆ ನರೇಗಲ್ ಪಟ್ಟಣವನ್ನು ಸುಂದರ ಪಟ್ಟಣವನ್ನಾಗಿಸಲು ನಾನು ಕಂಕಣಬದ್ಧನಾಗಿದ್ದೇನೆ ಎಂದು ಪಾಟೀಲ ಹೇಳಿದರು.
ಪಟ್ಟಣಕ್ಕೆ ನೂತನಾಗಿ ಆರು ಅಂಗನವಾಡಿ ಕೇಂದ್ರಗಳ ಕಟ್ಟಡ ಮಂಜೂರಾಗಿವೆ. ಈಗಾಗಲೇ ಅದರಲ್ಲಿ ಮೂರಕ್ಕೆ ಅನುದಾನ ಬಂದಿದ್ದು, ಒಂದು ಕೋಡಿಕೊಪ್ಪದಲ್ಲಿ ಮತ್ತು ಇನ್ನೆರಡು ಕಟ್ಟಡಗಳ ಕಾರ್ಯ ಆರಂಭವಾಗುತ್ತಿದೆ.
ರೈತಾಪಿ ಜನರ ಮಕ್ಕಳ ಶಿಕ್ಷಣಕ್ಕೂ ಸರಕಾರ ಆದ್ಯತೆ ನೀಡುತ್ತಿದೆ. ಆದ್ದರಿಂದ ರೈತರು ತಮ್ಮ ಮಕ್ಕಳನ್ನು ಹೆಚ್ಚಿನ ಓದಿಗೆ ಪ್ರೇರೇಪಿಸಬೇಕು. ಪಟ್ಟಣದಿಂದ ತೊಂಡಿಹಾಳ ಸಂಪರ್ಕಿಸುವ ರಸ್ತೆ ಸಂಪೂರ್ಣವಾಗಿ ಹಾಳಾಗಿದ್ದು, ಅದಕ್ಕಾಗಿ ವಿಶೇಷವಾದ ಅನುದಾನವನ್ನು ತಂದು ಕಾರ್ಯವನ್ನು ಶೀಘ್ರವೇ ಪ್ರಾರಂಭಿಸಲಾಗುವದೆಂದರು.
ನರೇಗಲ್ ಶಹರ ಘಟಕದ ಕಾಂಗ್ರೆಸ್ ಅಧ್ಯಕ್ಷ ಶಿವನಗೌಡ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು.
ವೇದಿಕೆಯ ಮೇಲೆ ಅಂದಪ್ಪ ಕಿರಟಗೇರಿ, ಭೀಮಪ್ಪ ಕಿರಟಗೇರಿ ವಾರ್ಡಿನ ಸದಸ್ಯರು ಇದ್ದರು. ಕಾರ್ಯಕ್ರಮದಲ್ಲಿ ಅಲ್ಲಾಭಕ್ಷಿ ನದಾಫ್, ಶೇಕಪ್ಪ ಕೆಂಗಾರ, ಮೈಲಾರಪ್ಪ ಚಳ್ಳಮರದ, ನಿಂಗನಗೌಡ ಲಕ್ಕನಗೌಡ್ರ, ಎಸ್ಟಿ ಘಟಕದ ಅಧ್ಯಕ್ಷ ಶೇಕಪ್ಪ ಜುಟ್ಲ, ಕಾಂಗ್ರೆಸ್ ಪಕ್ಷದ ಅನೇಕ ಕಾರ್ಯಕರ್ತರು, ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ರಮೇಶ ಹೊಸಮನಿ, ನಿರ್ಮಿತಿ ಕೇಂದ್ರದ ಅಭಿಯಂತರ ಪಾಟೀಲ, ಸಿಬ್ಬಂದಿಗಳು, ಅಂಗನವಾಡಿ ಕಾರ್ಯಕರ್ತೆಯರು, ಓಣಿಯ ಹಿರಿಯರು ಉಪಸ್ಥಿತರಿದ್ದರು.
ಪಟ್ಟಣದ ಬಸ್ ನಿಲ್ದಾಣದಿಂದ ಶ್ರೀ ಅನ್ನದಾನೇಶ್ವರ ಕಾಲೇಜುವರೆಗಿನ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಅದರ ದುರಸ್ತಿಯನ್ನೂ ಬೇಗ ಕೈಗೊಳ್ಳಲಾಗುವುದೆಂದು ಶಾಸಕರು ಈ ಸಂದರ್ಭದಲ್ಲಿ ತಿಳಿಸಿದರು. ಪಟ್ಟಣದಲ್ಲಿನ ಎಲ್ಲ ರಸ್ತೆಗಳನ್ನುಸಿಸಿ ರಸ್ತೆಗಳನ್ನು ಮಾಡುವುದರ ಜೊತೆಗೆ ಅವಶ್ಯವಿದ್ದಲ್ಲಿ ಮಹಿಳಾ ಶೌಚಾಲಯಕ್ಕೂ ಅನುಕೂಲ ಮಾಡಿಕೊಡಲಾಗುವುದು. ಹಿರೆಕೆರೆಗೆ ನೀರು ತುಂಬಿಸುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು. ನರೇಗಲ್ಲ ಪಟ್ಟಣ ಪಂಚಾಯಿತಿಗೆ ಮಂಜೂರಾಗಿರುವ ೨ ಕೋಟಿ ರೂಪಾಯಿಗಳ ಅನುದಾನದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಲಾಗಿದೆ ಎಂದು ಶಾಸಕರು ಹೇಳಿದರು.