ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ರಾಜ್ಯದಲ್ಲಿ ಬಡವರು, ಕೂಲಿ ಕಾರ್ಮಿಕರಿಗೆ ಇಂದಿರಾ ಕ್ಯಾಂಟೀನ್ ಆಧಾರವಾಗಿದ್ದು, ಕಡಿಮೆ ದರದಲ್ಲಿ ಗುಣಮಟ್ಟದ ಊಟ, ಉಪಹಾರ ನೀಡುವ ಯೋಜನೆ ಬಹುಜನರಿಗೆ ಉಪಯುಕ್ತವಾಗಿದೆ ಎಂದು ಪುರಸಭೆ ಸದಸ್ಯ ರಾಜಣ್ಣ ಕುಂಬಿ ಹೇಳಿದರು.
ಅವರು ಪಟ್ಟಣದ ಶಿಗ್ಲಿ ಕ್ರಾಸ್ ಬಳಿ ಮಂಗಳವಾರ ನೂತನ ಇಂದಿರಾ ಕ್ಯಾಂಟೀನ್ ನಿರ್ಮಾಣದ ಭೂಮಿಪೂಜೆಯಲ್ಲಿ ಭಾಗವಹಿಸಿ ಮಾತನಾಡಿದರು.
ಬಡ ಜನತೆಯು ಹಸಿವಿನಿಂದ ಮಲಗಬಾರದು ಎಂಬುದು ಸಿದ್ದರಾಮಯ್ಯನವರ ಆಶಯವಾಗಿದೆ. ಹಸಿವು ಮುಕ್ತ ಸಮಾಜ ನಿರ್ಮಿಸುವ ಅವರ ಕನಸನ್ನು ಈಡೇರಿಸುವ ನಿಟ್ಟಿನಲ್ಲಿ ಇಂದಿರಾ ಕ್ಯಾಂಟೀನ್ ಮುನ್ನುಡಿ ಬರೆದಿದೆ.
ಆದ್ದರಿಂದ ಬಡ ಜನರ ಹಸಿವು ನೀಗಿಸುವ ನಿಟ್ಟಿನಲ್ಲಿ ಇಂದಿರಾ ಕ್ಯಾಂಟೀನ ಆರಂಭಿಸಲಾಗುತ್ತಿದೆ. ರೂ. 5ಗಳಲ್ಲಿ ಬೆಳಗಿನ ಉಪಹಾರ ಹಾಗೂ ಮಧ್ಯಾಹ್ನ ರೂ.10ಕ್ಕೆ ಊಟ ನೀಡುವ ಮಹತ್ವಾಕಾಂಕ್ಷಿ ಯೋಜನೆ ಕಾಂಗ್ರೆಸ್ ಪಕ್ಷದ ಕೊಡುಗೆಯಾಗಿದೆ. ಪಟ್ಟಣದ ಹಾಗೂ ತಾಲೂಕಿನ ಕೂಲಿ ಕಾರ್ಮಿಕರು ಹಾಗೂ ಬಡ ಜನತೆಯು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಹೇಳಿದರು.
ಸಾಹೀಬ್ ಜಾನ್ ಹವಾಲ್ದಾರ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕನಸಿನ ಯೋಜನೆ ಇದಾಗಿದೆ. ಈಗಾಗಲೇ ರಾಜ್ಯದ ಹಲವು ಪ್ರಮುಖ ಪಟ್ಟಣದ ಮತ್ತು ನಗರ ಪ್ರದೇಶಗಳಲ್ಲಿ ಈ ಯೋಜನೆ ಯಶಸ್ವಿಯಾಗಿದೆ. ಬಡ ಜನತೆಯು ಹಸಿವಿನಿಂದ ಬಳಬಾರದು ಎನ್ನುವುದು ಸರಕಾರದ ಧ್ಯೇಯವಾಗಿದೆ ಎಂದು ಹೇಳಿದರು.
ಈ ವೇಳೆ ಪುರಸಭೆಯ ನೂತನ ಅಧ್ಯಕ್ಷೆ ಯಲ್ಲವ್ವ ದುರಗಣ್ಣವರ ಅವರು ಕಾಮಗಾರಿಗೆ ಚಾಲನೆ ನೀಡಿದರು. ಉಪಾಧ್ಯಕ್ಷ ಫಿರ್ಧೋಶ್ ಆಡೂರ, ಬಸವರಾಜ ಓದುನವರ, ಮಂಜವ್ವ ನಂದೆಣ್ಣವರ, ಮುಸ್ತಾಕ್ ಅಹ್ಮದ್ ಶಿರಹಟ್ಟಿ, ಫಕ್ಕೀರೇಶ ನಂದೆಣ್ಣವರ, ನೀಲಪ್ಪ ಶೆರಸೂರಿ, ಸಿದ್ದು ದುರಗಣ್ಣವರ, ಸದಾನಂದ ನಂದೆಣ್ಣವರ, ಇಸ್ಮಾಯಿಲ್ ಆಡೂರ ಸೇರಿದಂತೆ ಅನೇಕರು ಇದ್ದರು.