ವಿಜಯಸಾಕ್ಷಿ ಸುದ್ದಿ, ಗದಗ : ಸಭಾಪತಿ ಬಸವರಾಜ ಹೊರಟ್ಟಿ ದಂಪತಿಗಳು ಸಿದ್ಧಲಿಂಗ ನಗರದ ಸರ್ಕಾರಿ ಪ್ರೌಢಶಾಲೆಯನ್ನು ದತ್ತು ಪಡೆದು ಎಲ್ಲ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಶಾಲೆಯ ಕಳೆಯನ್ನು ಹೆಚ್ಚಿಸಿದ್ದಾರೆ. ಈಗ ವಿದ್ಯಾರ್ಥಿಗಳಿಗೆ ಶುದ್ಧ ನೀರಿನ ಕೊರತೆಯನ್ನು ನಿವಾರಿಸಲು ಮುಂದಾಗಿದ್ದು ಶ್ಲಾಘನೀಯ ಹಾಗೂ ಅವರ ಸೇವೆ ಸದಾಕಾಲ ಸ್ಮರಣೀಯ ಎಂದು ಗದಗ ಬೆಟಗೇರಿ ನಗರಸಭೆ ಸದಸ್ಯೆ ವಿದ್ಯಾವತಿ ಗಡಗಿ ಅಭಿಪ್ರಾಯಪಟ್ಟರು.
ಅವರು ಸ್ಥಳೀಯ ಸಿದ್ಧಲಿಂಗ ನಗರದ ಸರಕಾರಿ ಪ್ರೌಢಶಾಲೆಯಲ್ಲಿ ಸಭಾಪತಿ ಬಸವರಾಜ ಹೊರಟ್ಟಿಯವರ ಸಹಕಾರದಿಂದ ನಿರ್ಮಾಣಗೊಳ್ಳುತ್ತಿರುವ ಶುದ್ಧ ನೀರು ಘಟಕದ ಭೂಮಿಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಈ ಶಾಲೆಯಲ್ಲಿ ಓದುತ್ತಿರುವವರಲ್ಲಿ ಮಧ್ಯಮ ವರ್ಗ, ಬಡ ಹಾಗೂ ಗ್ರಾಮೀಣ ವಿದ್ಯಾರ್ಥಿಗಳೇ ಹೆಚ್ಚಿದ್ದಾರೆ. ಆ ಮಕ್ಕಳು ಸಹ ಶುದ್ಧ ಕುಡಿಯುವ ನೀರಿನಿಂದ ವಂಚಿತರಾಗಬಾರದು ಹಾಗೂ ಸಹಜ ನೀರನ್ನು ಕುಡಿದು ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗಬಾರದು ಎಂಬ ಸದಾಶಯದೊಂದಿಗೆ ಹೊರಟ್ಟಿಯವರು ಶುದ್ಧ ನೀರು ಘಟಕದ ನಿರ್ಮಾಣಕ್ಕೆ ನೆರವು ನೀಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಸಾ.ಶಿ. ಇಲಾಖೆ ಉಪನಿರ್ದೇಶಕ ಎಂ.ಎ. ರಡ್ಡೇರ್, ಕ್ಷೇತ್ರ ಶಿಕ್ಷಣಾಧಿಕಾರಿ ಅರ್.ಎಸ್. ಬುರಡಿ, ನಿವೃತ್ತ ಮುಖ್ಯೋಪಾಧ್ಯಾಯ ಎಸ್.ಎಂ. ಅಗಡಿ, ಪ್ರಭಾರಿ ಮುಖ್ಯೋಪಾಧ್ಯಾಯರಾದ ಜಯಲಕ್ಷ್ಮಿ ಅಣ್ಣಿಗೇರಿ, ಶಂಕ್ರಮ್ಮ ಆರ್. ಹಣಮಗೌಡ್ರು, ಸಂಜೀವಿನಿ ಜಿ.ಕೂಲಗುಡಿ, ಎಂ.ಐ. ಶಿವನಗೌಡರ, ಮಂಜುಳಾ ಪಿ.ಸಾಮ್ರಾಣಿ, ಶಶಿಕಲಾ ಬಿ.ಗುಳೇದವರ, ಸುಮಂಗಲ ಎಂ.ಪತ್ತಾರ್, ಶೋಭಾ ಎಸ್.ಗಾಳಿ, ಶಾರದಾ ಎ.ಬಾಣದ, ರಮೇಶ್ ಬಸರಿ, ಸಾವಿತ್ರಿ ಎ.ಗದ್ದನಕೇರಿ, ಎನ್.ಆರ್. ಶಿರೋಳ್, ಸಬಿಯಾ ಯು. ಕುಷ್ಟಗಿ, ಗಂಗಾ ಎಂ.ಅಳವಂಡಿ, ಪದ್ಮಾ ವಿ.ದಾಸರ್, ಲಕ್ಷ್ಮಮ್ಮ ಮಾಳೋತ್ತರ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಡಾ.ಬಸವರಾಜ ಧಾರವಾಡ ಮಾತನಾಡಿ, ಶುದ್ಧ ನೀರಿನ ಕೊರತೆ ಈ ಶಾಲೆಯಲ್ಲಿ ಇದ್ದದ್ದನ್ನು ಮನಗಂಡು ಹೊರಟ್ಟಿಯವರು ಶುದ್ಧ ನೀರು ಘಟಕ ನಿರ್ಮಾಣಕ್ಕೆ ಅವಕಾಶ ಕಲ್ಪಿಸಿದ್ದಾರೆ. ಯುನಿಸೆಫ್ ವರದಿಯ ಪ್ರಕಾರ ದೇಶದ ಶೇ. 56 ಪ್ರತಿ಼ಶತ ಶಾಲೆಗಳಲ್ಲಿ ನೀರಿಲ್ಲ. ಉತ್ತಮ ಆರೋಗ್ಯಕ್ಕೆ ಶುದ್ಧ ನೀರಿನ ಅವಶ್ಯಕತೆ ಇದೆ.
ಇದನ್ನು ಅರಿತ ಸಭಾಪತಿ ಬಸವರಾಜ ಹೊರಟ್ಟಿಯವರು ಇಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ನಿತ್ಯ ಶುದ್ಧ ನೀರು ದೊರೆಯುವಂತೆ ಕಲ್ಪಿಸಿಕೊಡಲಿದ್ದಾರೆ ಎಂದು ಹೇಳಿದರು.