ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನ ಜನರಿಗೆ ಬೇಸಿಗೆ ಆರಂಭಕ್ಕೂ ಮುನ್ನ ಬಿಗ್ ಶಾಕ್ ಎದುರಾಗಿದೆ. ನಗರದಲ್ಲಿ ಹಲವಾರು ಮನೆಗಳಲ್ಲಿ ನೀರನ್ನು ವ್ಯರ್ಥಗೊಳಿಸುವುದನ್ನು ನಾವು ಕಾಣುತ್ತಲೇ ಇರುತ್ತೇವೆ. ಹಲವಾರು ಚಾಳಿಗಳನ್ನು ಹಲವಾರು ಜನರು ತಮಗೆ ಅರಿವಿಲ್ಲದಂತೆಯೇ ಅನುಸರಿಸುತ್ತಿರುವುದರಿಂದ ದಿನವೊಂದಕ್ಕೆ ಸಾವಿರಾರು ಲೀಟರ್ ಗಳಷ್ಟು ನೀರು ವ್ಯರ್ಥವಾಗುತ್ತಿರುತ್ತದೆ.
ಹೀಗಾಗಿ ಕಳೆದ ಬಾರಿ ಬೇಸಿಗೆಯಲ್ಲಿ ಹೊರಡಿಸಿದ್ದ ಆದೇಶ ಮರು ಜಾರಿ ಮಾಡಲಾಗಿದ್ದು, ಅನಗತ್ಯವಾಗಿ ನೀರು ವ್ಯರ್ಥ ಮಾಡಿದವರಿಗೆ ದಂಡ ವಿಧಿಸಲು ಜಲಮಂಡಳಿ ಸಜ್ಜಾಗಿದೆ.
ಈ ಬಗ್ಗೆ ಆದೇಶ ಹೊರಡಿಸಿರುವ ಜಲಮಂಡಳಿ ಕೈದೋಟ, ವಾಹನ ತೊಳೆಯಲು ಕುಡಿಯುವ ನೀರು ಬಳಸಿದರೆ 5 ಸಾವಿರ ರೂ. ದಂಡ ವಿಧಿಸುವುದಾಗಿ ತಿಳಿಸಿದೆ. ಆದೇಶ ಉಲ್ಲಂಘಿಸಿದವರ ಬಗ್ಗೆ ಸಹಾಯವಾಣಿ ಸಂಖ್ಯೆ 1916 ಕರೆ ಮಾಡಿ ದೂರು ನೀಡಲು ಸೂಚನೆ ನೀಡಲಾಗಿದೆ.
ಬೆಂಗಳೂರು ಮಹಾನಗರದಲ್ಲಿ ಖಾಯಂ ವಾಸಿಗಳು ಹಾಗೂ ಬಂದು ಹೋಗುವವರನ್ನು ಸೇರಿಸಿದಂತೆ ಸುಮಾರು 1 ಕೋಟಿ 40 ಲಕ್ಷ ಜನಸಂಖ್ಯೆಯನ್ನು ಗುರುತಿಸಲಾಗಿದೆ. ಎಲ್ಲರಿಗೂ ಕುಡಿಯುವ ನೀರನ್ನು ಪೂರೈಕೆ ಮಾಡುವುದು ಅವಶ್ಯಕವಾಗಿದೆ. ಪ್ರಸ್ತುತ ನಗರದಲ್ಲಿ ಪ್ರತಿದಿನ ಉಷ್ಣಾಂಶ ಏರುತ್ತಿದೆ. ಇತ್ತೀಚಿನ ದಿನಗಳಲ್ಲಿ ಮಳೆಯ ಕೊರತೆಯಿಂದ ಅಂತರ್ಜಲ ಕುಸಿದಿದ್ದು, ಬೆಂಗಳೂರು ನಗರದಲ್ಲಿ ನೀರನ್ನು ಪೋಲು ಮಾಡುವುದನ್ನು ತಡೆಗಟ್ಟುವುದು ಅವಶ್ಯವೆಂದು ಮನಗಂಡು ಕುಡಿಯುವ ನೀರನ್ನು ಸಾರ್ವಜನಿಕರು ಮಿತವಾಗಿ ಬಳಸುವಂತೆ ಅಗತ್ಯಪಡಿಸಲಾಗಿದೆ.