ಮಂಡ್ಯ: ದಳವಾಯಿ ಕೋಡಿಹಳ್ಳಿಯಲ್ಲಿ ನಡೆದ ತಾಯಿ–ಮಗಳು ಆತ್ಮಹತ್ಯೆ ಪ್ರಕರಣದ ಹಿನ್ನಲೆಯಲ್ಲಿ 72 ಗಂಟೆಗಳೊಳಗೆ ನಡೆದ ಘಟನೆಗಳ ಸರಣಿ ಬೆಚ್ಚಿ ಬೀಳಿಸುವಂತಿದೆ. ಈ ಪ್ರಕರಣದಲ್ಲಿ ಯುವತಿ ಪ್ರಿಯಾಂಕಳ ಪ್ರಿಯಕರ ಮುತ್ತುರಾಜ್ ಈಗಾಗಲೇ ಮೂರು ದಿನಗಳ ಹಿಂದೆ ಆತ್ಮಹತ್ಯೆಗೆ ಯತ್ನಿಸಿದ್ದ ಎಂಬುದು ತನಿಖೆಯಿಂದ ಬಹಿರಂಗವಾಗಿದೆ.
ಮುತ್ತುರಾಜ್ ವಿವಾಹಿತನಾಗಿದ್ದು, ಮೂರು ಮಕ್ಕಳ ತಂದೆಯೂ ಹೌದು. ಆದರೂ ಪ್ರಿಯಾಂಕಳೊಂದಿಗೆ ಪ್ರೀತಿ–ಪ್ರೇಮ ಸಂಬಂಧ ಹೊಂದಿದ್ದ. ಈ ವಿಚಾರ ಗೊತ್ತಾದ ನಂತರ ಪ್ರಿಯಾಂಕಳ ತಂದೆ–ತಾಯಿ ಇಬ್ಬರಿಗೂ ತೀವ್ರವಾಗಿ ಬುದ್ದಿ ಹೇಳಿ, ಮಗಳ ಮದುವೆಗೆ ವರ ಹುಡುಕುವ ಪ್ರಯತ್ನ ಆರಂಭಿಸಿದ್ದರು.
ಇದರಿಂದ ಕೋಪಗೊಂಡ ಮುತ್ತುರಾಜ್, ಪ್ರಿಯಾಂಕಳ ಮೇಲೆ ಒತ್ತಡ ತರುವ ಉದ್ದೇಶದಿಂದ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎನ್ನಲಾಗಿದೆ. ಈ ಘಟನೆ ಮೂರು ದಿನಗಳ ಹಿಂದೆ ನಡೆದಿದ್ದು, ಆತ ಈಗ ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಪ್ರಿಯಕರನ ಆತ್ಮಹತ್ಯೆ ಯತ್ನದ ಸುದ್ದಿ ಕೇಳಿ ಮಾನಸಿಕವಾಗಿ ಕುಸಿದ ಪ್ರಿಯಾಂಕ, ಆತಂಕ ಮತ್ತು ಭಯದಿಂದ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮಗಳ ಸಾವನ್ನು ಕಂಡ ತಾಯಿ ಶಂಕುತಲಾ ದೇವಿ ಮನನೊಂದಿದ್ದು, ತಾಳಲಾರದೆ ಆಕೆಯೂ ಕೂಡ ನೇಣಿಗೆ ಶರಣಾಗಿದ್ದಾರೆ.
ಒಂದೇ ಕುಟುಂಬದಲ್ಲಿ ತಾಯಿ–ಮಗಳು ಜೀವ ಕಳೆದುಕೊಂಡ ಈ ಘಟನೆ, ಪ್ರೇಮ ಸಂಬಂಧಗಳಿಂದ ಉಂಟಾಗುವ ಮಾನಸಿಕ ಹಿಂಸೆ ಎಷ್ಟು ಭೀಕರವಾಗಬಹುದು ಎಂಬುದನ್ನು ತೋರಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.



