ಗದಗ: ಐತಿಹಾಸಿಕ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಇದೀಗ ಹೊಸ ತಿರುವು ಸಿಕ್ಕಿದೆ.

ನಿಧಿಯನ್ನು ಸರ್ಕಾರಕ್ಕೆ ಒಪ್ಪಿಸಿದ ಪ್ರಜ್ವಲ್ ರಿತ್ತಿ ಕುಟುಂಬವು ತಜ್ಞರು ಅಂದಾಜಿಸಿರುವ ಬೆಲೆಯ ಆಧಾರದ ಮೇಲೆ ತಮ್ಮ ಪಾಲು ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದೆ.

ಸರ್ಕಾರ ನೇಮಿಸಿದ ತಜ್ಞರ ತಂಡವು ಇತ್ತೀಚೆಗೆ ಪರಿಶೀಲನೆ ನಡೆಸಿ ನಿಧಿಯ ಅಂದಾಜು ಮೌಲ್ಯವನ್ನು ಸುಮಾರು 8 ಕೋಟಿ ರೂಪಾಯಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ. ಆದರೆ ಈ ಮೊತ್ತಕ್ಕೆ ಒಪ್ಪುವುದಿಲ್ಲ ಎಂದು ಹೇಳಿರುವ ಕುಟುಂಬದವರು, ಪ್ರಾಚೀನ ವಸ್ತುವಾಗಿರುವುದರಿಂದ ಇದರ ಆ್ಯಂಟಿಕ್ ಮೌಲ್ಯ ಈಗಿನ ಅಂದಾಜಿಗಿಂತ ಹತ್ತರಷ್ಟು ಹೆಚ್ಚಿರಬಹುದು ಎಂದು ಹೇಳಿದ್ದಾರೆ.
ಆದರೂ ಕಾನೂನಿನ ಪ್ರಕಾರ ತಜ್ಞರು ನಿಗದಿಪಡಿಸಿದ 8 ಕೋಟಿ ರೂ. ಮೌಲ್ಯಕ್ಕೆ ಐದರ ಒಂದು ಭಾಗ ಪಾಲು ನೀಡಬೇಕು ಎಂದು ಕುಟುಂಬದವರು ಆಗ್ರಹಿಸಿದ್ದಾರೆ.
ಪ್ರಜ್ವಲ್ ರಿತ್ತಿ ನಿಧಿಯನ್ನು ಪ್ರಾಮಾಣಿಕವಾಗಿ ಸರ್ಕಾರಕ್ಕೆ ಒಪ್ಪಿಸಿದ್ದಾನೆ. ಹೀಗಾಗಿ ಸರ್ಕಾರವೂ ಪ್ರಾಮಾಣಿಕವಾಗಿ ಪರಿಹಾರ ನೀಡಬೇಕು ಎಂದು ಕುಟುಂಬದವರು ತಿಳಿಸಿದ್ದಾರೆ.
ಈ ಕುರಿತು ಸಚಿವ ಎಚ್.ಕೆ. ಪಾಟೀಲ್ ಹಾಗೂ ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರ ರಾಜ್ಯ ಸಲಹಾ ಸಮಿತಿ ಸದಸ್ಯ ಸಿದ್ದು ಪಾಟೀಲ್ ಭರವಸೆ ನೀಡಿದ್ದು, ಅವರ ಮೇಲೆ ನಮಗೆ ನಂಬಿಕೆ ಇದೆ ಎಂದು ಕುಟುಂಬದವರು ಹೇಳಿದ್ದಾರೆ.
ಕುಟುಂಬದವರ ಪ್ರಕಾರ, ನಿಧಿಯ ನಿಜವಾದ ಆ್ಯಂಟಿಕ್ ಮೌಲ್ಯವನ್ನು ಪರಿಗಣಿಸಿ ನ್ಯಾಯಸಮ್ಮತ ಪರಿಹಾರ ನೀಡಬೇಕು ಎಂಬುದು ಅವರ ಪ್ರಮುಖ ಬೇಡಿಕೆಯಾಗಿದೆ.



