ಯಾದಗಿರಿ: ಜಿಲ್ಲೆಯ ಗೋನಾಳ ಗ್ರಾಮದಲ್ಲಿ ನಡೆದ ವೃದ್ಧನ ಕೊಲೆ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದ್ದು, ಮಗನೇ ತಂದೆಯನ್ನು ಸುಪಾರಿ ಕೊಟ್ಟು ಹತ್ಯೆ ಮಾಡಿಸಿದ್ದಾನೆ ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ.
ಮಾರ್ಚ್ 12ರ ರಾತ್ರಿ 74 ವರ್ಷದ ಹಂಪಣ್ಣ ಸಜ್ಜನ ಹತ್ಯೆಯಾಗಿತ್ತು. ಘಟನೆಯ ಬಳಿಕ ಅವರ ಪುತ್ರ ಶರಣಬಸಪ್ಪ ವಡಗೇರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರಂಭದಲ್ಲಿ ಆರೋಪಿಗಳನ್ನು ಪತ್ತೆಹಚ್ಚಲು ಕಷ್ಟಪಟ್ಟರು. ಆದರೆ ನಾಲ್ಕು ದಿನಗಳ ಬಳಿಕ ರಮೇಶ್, ಜಿ. ವಿರೇಶ್, ಎಂ. ವಿರೇಶ್ ಹಾಗೂ ಕೃಷ್ಟ ಎಂಬ ನಾಲ್ವರನ್ನು ಬಂಧಿಸುವಲ್ಲಿ ಯಶಸ್ವಿಯಾದರು.
ಆರೋಪಿಗಳನ್ನು ಬಂಧಿಸಿದ ಬಳಿಕ ಪ್ರಕರಣದ ಹಿನ್ನಲೆ ಬೆಳಕಿಗೆ ಬಂದಿದೆ. ತಿರುಪತಿ ಮೂಲದ ಈ ನಾಲ್ವರು ಹತ್ಯೆ ನಡೆಸಿದರೆ, ಹತ್ಯೆಗೆ ಸುಪಾರಿ ನೀಡಿದ್ದವರು ಮೃತನ ಪುತ್ರ ನರಸರೆಡ್ಡಿ ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ.
ಮೊದಲು ಆಸ್ತಿ ವಿಚಾರವೇ ಕೊಲೆಗೆ ಕಾರಣ ಎಂದು ಶಂಕಿಸಲಾಗಿತ್ತು. ಆದರೆ, ಮೃತನ ಮೊಬೈಲ್ ಪರಿಶೀಲನೆ ವೇಳೆ ಹಲವು ಮಹಿಳೆಯರೊಂದಿಗೆ ತೆಗೆದಿರುವ ಫೋಟೋಗಳು ಪತ್ತೆಯಾಗಿದ್ದು, ಅನೈತಿಕ ಸಂಬಂಧಗಳ ವಿಚಾರ ಹೊರಬಂದಿದೆ.
ಹಂಪಣ್ಣ ಸಜ್ಜನ ಗ್ರಾಮದಲ್ಲಿ ಕುಟುಂಬದಿಂದ ದೂರವಾಗಿ ಹೊಲದಲ್ಲೇ ವಾಸಿಸುತ್ತಿದ್ದರು. ಪತ್ನಿ ಸಾವಿನ ನಂತರ ಏಕಾಂಗಿಯಾಗಿ ಬದುಕುತ್ತಿದ್ದ ಅವರು, ಮದ್ಯಪಾನ ವ್ಯಸನಕ್ಕೂ ಒಳಗಾಗಿದ್ದರು. ತಮ್ಮ ಕಾಮತೃಷೆ ತೀರಿಸಿಕೊಳ್ಳಲು ಹಣದ ಆಮಿಷ ನೀಡಿ ಮಹಿಳೆಯರನ್ನು ಕರೆಸಿಕೊಳ್ಳುತ್ತಿದ್ದರೆಂಬುದು ತನಿಖೆಯಲ್ಲಿ ಬಹಿರಂಗವಾಗಿದೆ.
ಇದೇ ಕಾರಣದಿಂದ ಕುಟುಂಬದಲ್ಲೂ ಅಸಮಾಧಾನ ಉಂಟಾಗಿದ್ದು, ವಿಶೇಷವಾಗಿ ಮಗನ ಪತ್ನಿಯೊಂದಿಗೆ ಸಹ ಅನೈತಿಕ ವರ್ತನೆ ನಡೆಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಈ ವಿಚಾರ ತಿಳಿದ ನರಸರೆಡ್ಡಿ ಕೋಪಗೊಂಡು, ನಾಲ್ವರಿಗೆ ಸುಮಾರು ₹2 ಲಕ್ಷ ನೀಡಿ ತಂದೆಯನ್ನು ಕೊಲೆ ಮಾಡುವಂತೆ ಸುಪಾರಿ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಒಟ್ಟಿನಲ್ಲಿ, ಅನೈತಿಕ ಸಂಬಂಧಗಳ ಹಿನ್ನೆಲೆಯೇ ಈ ಹತ್ಯೆಗೆ ಕಾರಣವಾಗಿದ್ದು, ಪ್ರಕರಣಕ್ಕೆ ಇದೀಗ ಸ್ಪಷ್ಟತೆ ಸಿಕ್ಕಿದೆ.



