ಗದಗ: ಮಲ್ಲಸಮುದ್ರ ರಸ್ತೆಯಲ್ಲಿ ಇರುವ ಪರಿಚಿತರೊಬ್ಬರನ್ನು ಭೇಟಿಯಾಗಲು ಹೊರಟಿದ್ದ ವ್ಯಕ್ತಿಯೊಬ್ಬರಿಗೆ ಬೈಕ್ ಡಿಕ್ಕಿ ಹೊಡೆದು ಪಾದಚಾರಿ ಹಾಗೂ ಸವಾರ ಮೃತಪಟ್ಟ ಘಟನೆ ಜರುಗಿದೆ.
ಮುಳಗುಂದ ರಸ್ತೆಯ ಬಚಪನ್ ಶಾಲೆಯ ಬಳಿ ನಿನ್ನೆ ರಾತ್ರಿ ಈ ಘಟನೆ ನಡೆದಿದೆ. ಅಪಘಾತದಲ್ಲಿ ಜಿಲ್ಲೆಯ ಮುಂಡರಗಿ ತಾಲೂಕಿನ ಮೇವುಂಡಿ ಗ್ರಾಮದ ಮೈಲಾರಪ್ಪ ಸ್ವಾಗಿ (62) ಹಾಗೂ
ಯೂಟ್ಯೂಬ್ರ್ ನೀಲಪ್ಪ ಕಟಗಿ ಮೃತಪಟ್ಟ ದುರ್ಧೈವಿಗಳು.
ಮೂಲತಃ ಗದಗ ತಾಲೂಕಿನ ಅಂತೂರು-ಬೆಂತೂರಿನ ಗ್ರಾಮದ ಮೃತ ನೀಲಪ್ಪ ಕಟಗಿ ಮೊದಲು ಕೆಆರ್ ಎಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ. ಆ ಸಂದರ್ಭದಲ್ಲಿ ಸಾಕಷ್ಟು ಹೆಸರು ಗಳಿಸಿದ್ದ. ನಂತರ ತನ್ನದೇ ಹೆಸರಿನ ಎನ್ಕೆ ನ್ಯೂಸ್ ಅಂತ (ನೀಲಪ್ಪ ಕಟಗಿ) ಯೂಟ್ಯೂಬ್ ಚಾನಲ್ ಆರಂಭಿಸಿದ್ದ. ಚಾನಲ್ ಮೂಲಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿ ಹಲವರ ನಿದ್ದೆಗೆಡಿಸಿದ್ದ.
ಮೃತ ನೀಲಪ್ಪ ಕಟಗಿ ಗದಗದ ಆದಿತ್ಯ ನಗರದ ತಮ್ಮ ನಿವಾಸದಿಂದ ಧೋಬಿಘಾಟ ಬಳಿ ಇರುವ ಸ್ನೇಹಿತನ ಮನೆಗೆ ಹೊರಟಿದ್ದರು. ಇದೇ ವೇಳೆ ಬಚಪನ್ ಶಾಲೆ ಕಡೆಯಿಂದ ವೃದ್ಧ ಮೈಲಾರಪ್ಪ, ರಸ್ತೆ ದಾಟುತ್ತಿರುವಾಗ, ಬೈಕ್ ಸವಾರ ನೀಲಪ್ಪ ಮೈಲಾರಪ್ಪನಿಗೆ ಡಿಕ್ಕಿ ಹೊಡೆದು ಇಬ್ಬರೂ ಕೆಳಗೆ ಬಿದ್ದು ಗಂಭೀರ ಗಾಯಗಳಾಗಿತ್ತು. ಈ ವೇಳೆ ನೀಲಪ್ಪ ಕಟಗಿ ಹಾಗೂ ಮೈಲಾರಪ್ಪನಿಗೆ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.
ಆದರೆ ಚಿಕಿತ್ಸೆ ಫಲಕಾರಿಯಾಗದೆ ನೀಲಪ್ಪ ಸಾವನ್ನಪ್ಪಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಪಾದಚಾರಿ ಮೈಲಾರಪ್ಪ ಅವರನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಘಟನಾ ಸ್ಥಳಕ್ಕೆ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.