ಗದಗ:- ಬೈಕ್ ಪಾರ್ಕ್ ಮಾಡಿ ಟೀ ಕುಡಿಯಲು ಹೋದ ಮಾಲೀಕನ ಚಲನವಲನ ಗಮನಿಸಿ ಜಸ್ಟ್ 15 ನಿಮಿಷದಲ್ಲೇ ಖದೀಮನೋರ್ವ ವಾಹನ ಕದ್ದು ಎಸ್ಕೇಪ್ ಆಗಿರುವ ಘಟನೆ ಗದಗ ನಗರದ ಕಲಾಮಂದಿರ ರಸ್ತೆಯಲ್ಲಿ ಜರುಗಿದೆ.
ಕಣ್ಮುಂದೆ ಇದ್ದ ಬೈಕ್ ಕಳೆದುಕೊಂಡ ವಾಹನ ಸವಾರ ಇದೀಗ ಕಂಗಾಲಾಗಿದ್ದಾನೆ. ಹೌದು, ಗದಗ ನಗರದ ಕಲಾಮಂದಿರ ರಸ್ತೆಯಲ್ಲಿ ವಿಜಯ್ ಕುಮಾರ್ ಅನ್ನೋ ಸವಾರನೋರ್ವ ತನ್ನ ಬೈಕ್ ಪಾರ್ಕ್ ಮಾಡಿ, ಟೀ ಅಂಗಡಿಯಲ್ಲಿ ಸ್ನೇಹಿತನ ಜೊತೆ ಮಾತನಾಡುತ್ತಿದ್ದ.
ಇದೇ ಅವಕಾಶಕ್ಕಾಗಿ ಕಾದು ನಿಂತಿದ್ದ ಕ್ಯಾಪ್ ಧರಿಸಿದ್ದ ಖದೀಮ, ವಿಜಯ್ ಆತನ ಸ್ನೇಹಿತನ ಜೊತೆ ಮಾತ್ನಾಡುತ್ತಿರುವಾಗಲೇ ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದಾನೆ. ಪಾರ್ಕ್ ಮಾಡಿ 20 ಮೀಟರ್ ಅಂತರದಲ್ಲೇ ಬೈಕ್ ಮಾಲೀಕ ವಿಜಯ್ ನಿಂತಿದ್ದ. ವಿಜಯ್ ಕುಮಾರ್ ಆಚೆ ತಿರುಗಿ ನಿಂತಿರುವುದನ್ನ ಗಮನಿಸಿ ಕ್ಷಣಾರ್ಧದಲ್ಲಿ ಖದೀಮ ಈ ಕೃತ್ಯ ಎಸಗಿದ್ದಾನೆ.
ರಸ್ತೆ ಬದಿಯಿಂದ ಬಂದು ಬೈಕ್ ಪರೀಕ್ಷಿಸುವಂತೆ ನಿಂತು ಬೈಕ್ ಕಳ್ಳತನ ಮಾಡಿದ್ದಾನೆ. ಬೈಕ್ ನಂಬರ್ ಪ್ಲೇಟ್ ಡ್ಯಾಮೇಜ್ ಮಾಡಿ ನಂತರ ಬೈಕ್ ಕಳ್ಳತನ ಮಾಡಿದ್ದು, ಕಳ್ಳನ ಕರಾಮತ್ತು ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಬೈಕ್ ಕಳೆದುಕೊಂಡು ಕಂಗಾಲಾಗಿರುವ ಮಾಲೀಕ ವಿಜಯ್ ಕುಮಾರ್, ಹೇಗಾದ್ರೂ ಮಾಡಿ ಬೈಕ್ ಹುಡುಕಿಕೊಡಿ ಅಂತಾ ಅಂಗಲಾಚುತ್ತಿದ್ದಾರೆ.
ಗದಗ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಸಿಸಿಟಿವಿ ದೃಶ್ಯ ಆಧರಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.