ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಬಳ್ಳಾರಿ, ಕೊಪ್ಪಳ, ಹುಬ್ಬಳ್ಳಿ ಗಲಾಟೆಯ ಘಟನೆಗಳನ್ನು ರಾಜಕೀಯ ಲಾಭಕ್ಕೆ ಜಟಿಲಗೊಳಿಸಿ ಹಲ್ಲೆಯ ಆರೋಪ ಹೇಳುತ್ತಿರುವುದು ಬಿಜೆಪಿಯ ಹತಾಶೆಯ ಮನಸ್ಥಿತಿಯ ಕಾರಣಕ್ಕೆ ಬಂದವುಗಳು ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಎಂ.ಗೊಡಬಾಳ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಬಿಜೆಪಿಗೆ ಸದ್ಯ ಮಾಡಲು ಕೆಲಸವಿಲ್ಲ. ದೇಶದಲ್ಲಿ ಈಗಾಗಲೇ ಸುಳ್ಳು ಹೇಳುವ ಮೂಲಕ, ಜನ ಮತ್ತು ವ್ಯವಸ್ಥೆಯನ್ನು ಕಲುಷಿತಗೊಳಿಸಿ ಅಧಿಕಾರ ಪಡೆದುಕೊಂಡಿದ್ದು, ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದ ಸಮರ್ಥ ಆಡಳಿತ ಅರ್ಥವಾಗುತ್ತಿರುವ ಹಿನ್ನೆಲೆಯಲ್ಲಿ ಮುಂದೆ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂಬ ಹತಾಶೆಯಿಂದ ಇಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಕೊಪ್ಪಳದ ರೈಲ್ವೆ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಸೋಮಣ್ಣ ಅವರ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ಮಾಡಿದ್ದಾರೆ. ಇದನ್ನು ಸಚಿವ ಶಿವರಾಜ ತಂಗಡಗಿ, ಸಂಸದ ರಾಜಶೇಖರ ಹಿಟ್ನಾಳ ಮತ್ತು ಶಾಸಕ ರಾಘವೇಂದ್ರ ಹಿಟ್ನಾಳ ಅವರೇ ಮಾಡಿಸಿದ್ದಾರೆ ಎಂದು ಹೋರಾಟಕ್ಕೆ ಇಳಿದಿದ್ದಾರೆ. ಇದೆಲ್ಲಾ ಅತ್ಯಂತ ಕ್ಷುಲ್ಲಕ ಮತ್ತು ಅಧಿಕಾರದ ಹಪಾಹಪಿತನಕ್ಕೆ ಸಾಕ್ಷಿಯಾಗಿದೆ. ಇಂತಹ ಕೆಲಸ ಮಾಡುವುದೇ ಬಿಜೆಪಿಯ ಹಳೆಯ ಚಾಳಿ. ಶಿಷ್ಟಾಚಾರ ಉಲ್ಲಂಘನೆ ಆಗಿದ್ದಕ್ಕೆ ಸಹಜವಾಗಿ ಕಾರ್ಯಕರ್ತರಿಗೆ ನೋವಾಗಿ ಕೂಗಾಡಿದ್ದಕ್ಕೆ ಬಡಿದೇ ಬಿಟ್ಟರು ಎಂದು ಹೇಳುವುದು ಸರಿಯಲ್ಲ ಎಂದಿದ್ದಾರೆ.
ಇನ್ನು ಬಳ್ಳಾರಿಯಲ್ಲಿ ಜನಾರ್ಧನರಡ್ಡಿ ಅವರು ಕಾಲಿಡುತ್ತಲೇ ಜಗಳ, ಗಲಾಟೆಗಳು ಪ್ರಾರಂಭವಾಗಿದ್ದು, ಸದಾ ತಮಗೆ ಸಂಬಂಧವೇ ಇಲ್ಲದ ಮಾತುಗಳಿಂದ ಪ್ರಚಾರದಲ್ಲಿ ಇರಲು ಪ್ರಯತ್ನ ಮಾಡುವ ಜನಾರ್ಧನ ರಡ್ಡಿಯವರಿಂದಲೇ ಬಳ್ಳಾರಿ ಮತ್ತು ಕೊಪ್ಪಳದಲ್ಲಿ ಶಾಂತಿ ಭಂಗವಾಗುತ್ತಿದೆ. ಇವರನ್ನು ಕಾನೂನು ಮೂಲಕ ಹದ್ದುಬಸ್ತಿನಲ್ಲಿ ಇಡಬೇಕು ಎಂದು ಜ್ಯೋತಿ ಒತ್ತಾಯಿಸಿದ್ದಾರೆ.



