ಬೆಂಗಳೂರು: ಬಿಜೆಪಿ ಒಳಜಗಳ ಮುಚ್ಚಿ ಹಾಕೋಕೆ ಕಾಲ್ತುಳಿತ ಪ್ರಕರಣ ತೆಗೆದುಕೊಂಡಿದ್ದಾರೆ ಎಂದು ಮಾಜಿ ಸಚಿವ ಲಕ್ಷ್ಮಣ್ ಸವದಿ ಕಿಡಿಕಾರಿದ್ದಾರೆ. ಕಾಲ್ತುಳಿತ ಪ್ರಕರಣ ಡೈವರ್ಟ್ ಮಾಡಲು ಜಾತಿಗಣತಿ ವಿಷಯ ತಂದಿದ್ದಾರೆ ಎಂಬ ಬಿಜೆಪಿ ಆರೋಪ ವಿಚಾರಕ್ಕೆ ನಗರದಲ್ಲಿ ಮಾತನಾಡಿದ ಅವರು, ಬಿಜೆಪಿ ಅವರಿಗೆ ಆರೋಪ ಮಾಡುವುದೇ ಕೆಲಸ.
ಅವರು ಆರೋಪ ಮಾಡಲಿ. ಬಿಜೆಪಿ ಒಳಜಗಳ ಮುಚ್ಚಿ ಹಾಕೋಕೆ ಕಾಲ್ತುಳಿತ ಪ್ರಕರಣ ತೆಗೆದುಕೊಂಡಿದ್ದಾರೆ. ಯತ್ನಾಳ್ ಸೇರಿ ಮೂರು ಗುಂಪಿದೆ. ಪಕ್ಷ ಉದ್ಧಾರ ಆಗುವುದಿಲ್ಲ. ಇವರಿಗೆ ಬುದ್ಧಿ ಇಲ್ಲ ಎಂದು ಜನ ಮಾತಾಡುತ್ತಿದ್ದಾರೆ. ಅದನ್ನ ಡೈವರ್ಟ್ ಮಾಡೋಕೆ ಈ ವಿಷಯ ತೆಗೆದುಕೊಂಡು ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಇನ್ನೂ ಹೊಸ ಜಾತಿಗಣತಿಗೆ ಸರ್ಕಾರ ನಿರ್ಧರಿಸಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಹೈಕಮಾಂಡ್ಗೆ ಸಿಎಂ ತಲೆಬಾಗಿದ್ದಾರೆ. ಸರ್ವೇ ಬಗ್ಗೆ ಕೆಲವು ಸಮುದಾಯಗಳ ವಿರೋಧ ಇತ್ತು. ಇದನ್ನ ಸರಿಪಡಿಸಲು ಹೈಕಮಾಂಡ್ ನಾಯಕರು ಸಿಎಂ ಜೊತೆ ಚರ್ಚೆ ಮಾಡಿ,
ಹೊಸ ಜಾತಿಗಣತಿ ಮಾಡುವುದಾಗಿ ಹೇಳಿದ್ದಾರೆ. ಎಲ್ಲಿ ಲೋಪ ಆಗಿದೆ ಅದನ್ನು ಸರಿ ಮಾಡಲು ಮುಂದಾಗಿದ್ದಾರೆ. ಇದರಿಂದ ಒಳ್ಳೆಯದಾಗಿದೆ. ಕೇಂದ್ರ ಸರ್ಕಾರ ಗಣತಿ ಮಾಡಲಿ ಅದರ ಜೊತೆ ಹೋಲಿಕೆ ಮಾಡಲು ನಮಗೆ ಗಣತಿ ಬೇಕಾಗುತ್ತದೆ ಎಂದರು.