ಕಾರಟಗಿ;- ನಮ್ಮ ಸರ್ಕಾರ ಬೀಳುವ ತಿರುಕನ ಕನಸು ಬಿಜೆಪಿ ಕಾಣ್ತಾ ಇದೆ ಎಂದು ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಸೋಲಿನ ಹತಾಶೆ ಬಿಜೆಪಿಯನ್ನು ಇನ್ನೂ ಕಾಡುತ್ತಿದೆ. ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡದಷ್ಟು ಪಕ್ಷ ಕುಸಿದಿದೆ. ಆದರೂ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಅವರಿಗೆ ಸರ್ಕಾರ ಬೀಳುತ್ತದೆ ಎನ್ನುವ ಭ್ರಮೆ ಇನ್ನೂ ಹೋಗಿಲ್ಲ ಎಂದರು.
ವಿರೋಧ ಪಕ್ಷದ ನಾಯಕನನ್ನು ಮೊದಲು ಬಿಜೆಪಿ ಆಯ್ಕೆ ಮಾಡಿಕೊಳ್ಳಲಿ. ಜತೆಗೆ ಒಬ್ಬ ರಾಜ್ಯಾಧ್ಯಕ್ಷನನ್ನು ಆಯ್ಕೆ ಮಾಡಿಕೊಳ್ಳಲಿ. ಚೇತರಿಸಿಕೊಳ್ಳದ ಸ್ಥಿತಿಯಲ್ಲಿರುವ ಬಿಜೆಪಿ ಕಾರ್ಯಕರ್ತರನ್ನು ಮೇಲೇಳಿಸುವ ಕೆಲಸವನ್ನು ಈಶ್ವರಪ್ಪ ಮೊದಲು ಮಾಡಲಿ. ಅದು ಬಿಟ್ಟು ಸದೃಢವಾಗಿರುವ ಕಾಂಗ್ರೆಸ್ನ ಭವಿಷ್ಯದ ಮಾತನಾಡುವುದು ಬಿಡಲಿ ಎಂದು ತಾಕೀತು ಮಾಡಿದರು.
ಸರ್ಕಾರವನ್ನು ಅಲುಗಾಡಿಸಲು ಯಾರಿಂದಲೂ ಸಾಧ್ಯವಿಲ್ಲ. ಸರ್ಕಾರ ತನ್ನ ಐದು ವರ್ಷಗಳ ಅವಧಿ ಪೂರ್ಣಗೊಳಿಸಲಿದೆ ಎಂದು ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದರು.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಒಟ್ಟು ಲೋಕಸಭಾ ಸ್ಥಾನಗಳಲ್ಲಿ 12-15 ಸ್ಥಾನಗಳನ್ನು ಕಾಂಗ್ರೆಸ್ ಗೆಲ್ಲಲಿದೆ. ಒಂದು ವೇಳೆ ಬಿಜೆಪಿ ಕೇಂದ್ರ ನಾಯಕರು ವಿಧಾನಸಭಾ ಚುನಾವಣೆಯಲ್ಲಿ ಮಾಡಿದಂತೆ ಹಿರಿಯ ನಾಯಕರನ್ನು ತುಳಿದರೆ ಆ ಪಕ್ಷಕ್ಕೆ 5-10 ಸ್ಥಾನ ಮಾತ್ರ ಕಾಯಂ ಆಗುವ ಸಾಧ್ಯತೆ ಇದೆ ಎಂದರು.
ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಭೇಟಿಗೆ ಯಾವುದೇ ಅರ್ಥ ಕಲ್ಪಿಸಬಾರದು. ಇನ್ನು ಅವರ ಭೇಟಿಯಲ್ಲಿ ಉಭಯ ಕುಶಲೋಪರಿ ಇತ್ತೇ ಹೊರತು ರಾಜಕೀಯದ ಮಾತುಕತೆಗೆ ಅವಕಾಶ ಇದ್ದಿಲ್ಲ ಎಂದರು.