ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ : ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ಗರೀಬಿ ಹಠಾವೊ ಮೂಲಕ ಬಡವರ ಏಳ್ಗೆಯ ಘೋಷಣೆ ಮಾಡಿದರು. ಅದನ್ನೇ ರಾಜೀವ ಗಾಂಧಿಯವರು ಹೇಳುತ್ತಾ ಬಂದರು. ಈಗ ರಾಹುಲ್ ಗಾಂಧಿ ಸಹ ಅದನ್ನೇ ಹೇಳುತ್ತಿದ್ದು, ಮೂರು ತಲೆಮಾರಿನಿಂದ ಬಡವರ ಏಳ್ಗೆ ಆಗಲಿಲ್ಲ.
ಹೇಳಿದವರ ಕುಟುಂಬ ಮಾತ್ರ ಶ್ರೀಮಂತವಾಗುತ್ತಾ ಬಂದಿತು ಎಂದು ಬಿಜೆಪಿ ನಾಯಕಿ, ಖ್ಯಾತ ಚಿತ್ರನಟಿ ಶೃತಿ ಹೇಳಿದರು.
ಬಾಗಲಕೋಟ ಲೋಕಸಭಾ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿ.ಸಿ. ಗದ್ದಿಗೌಡರ ಪರ ಪ್ರಚಾರಾರ್ಥವಾಗಿ ಹಮ್ಮಿಕೊಂಡಿದ್ದ ರೋಡ್ ಶೋ ನಂತರ ಬಜಾರ ರಸ್ತೆಯಲ್ಲಿ ಮತದಾರರನ್ನು ಉದ್ದೇಶಿಸಿ ಅವರು ಮಾತನಾಡಿದರು.
10 ವರ್ಷಗಳ ಕಾಲ ಅಧಿಕಾರ ನಡೆಸಿದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ 25 ಕೋಟಿ ಬಡ ಕುಟುಂಬಗಳ ಆಶಾಕಿರಣವಾಗಿದ್ದು, ಪ್ರಪಂಚದಲ್ಲಿಯೇ ಶುದ್ಧ ಹಸ್ತ ಪ್ರಧಾನಿಯಾಗಿ ಬೆಳಗಿದ್ದಾರೆ. ಇನ್ನು ಸಂವಿಧಾನದ ಬಗ್ಗೆ ಮಾತನಾಡುವ ಕಾಂಗ್ರೆಸ್, ಅಂಬೇಡ್ಕರ ಅವರನ್ನು ಸೋಲಿಸಿದರು. ಜವಾಹರಲಾಲ ನೆಹರು ಅವರೇ ಅವರ ವಿರುದ್ಧ ಪ್ರಚಾರ ಮಾಡಿದರು. ಅವರು ನಿಧನರಾಗಿದ್ದಾಗ ಅವರ ಅಂತ್ಯಕ್ರಿಯೆಗೆ ಸ್ಥಳ ನೀಡದ ಕಾಂಗ್ರೆಸ್ ಸರಕಾರ ಸಂವಿಧಾನ ಉಳಿವಿನ ಬಗ್ಗೆ ಬಿಜೆಪಿ ವಿರುದ್ಧ ಮಾತನಾಡುತ್ತಿದೆ. ಆದರೆ ಇಂದು ಬಿಜೆಪಿಯು ಅಂಬೇಡ್ಕರರಿಗೆ ಬಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ. ಹೀಗಾಗಿ, ಮೋದಿಯವರ ಕೈ ಬಲಬಡಿಸಲು ಬಿಜೆಪಿಗೆ ಮತ ನೀಡಿ ಎಂದರು.
ಬಿಜೆಪಿ ಮುಖಂಡ ಡಾ. ಶೇಖರ ಸಜ್ಜನ, ಯುವ ಮುಖಂಡ ಉಮೇಶಗೌಡ ಪಾಟೀಲ ಸೇರಿದಂತೆ ಪಕ್ಷದ ಮುಖಂಡರು, ಮಹಿಳೆಯರು ಪಾಲ್ಗೊಂಡಿದ್ದರು. ಮಾಜಿ ಸೈನಿಕ, ಬಿಜೆಪಿ ಧುರೀಣ ದತ್ತಾತ್ರೇಯ ಜೋಶಿ ಸ್ವಾಗತಿಸಿ ವಂದಿಸಿದರು.
ಶಾಸಕ ಸಿ.ಸಿ. ಪಾಟೀಲ ಮಾತನಾಡಿ, ಕಾಂಗ್ರೆಸ್ ಸರಕಾರವು ಬಿಟ್ಟಿ ಭಾಗ್ಯಗಳನ್ನು ನೀಡುವ ಮೂಲಕ ಜನರನ್ನು ಆಲಸಿಗಳನ್ನಾಗಿ ಮಾಡುತ್ತಿದೆ. ಆದರೆ ಮೋದಿಯವರ ಸರಕಾರ ವ್ಯಕ್ತಿತ್ವವವನ್ನು ರೂಪಿಸುವ ಲಕ್ಪತಿ ದೀದೀ ಯೋಜನೆ ಮೂಲಕ ಮಹಿಳೆಯರನ್ನು ಸ್ವಾವಲಂಬಿ ಜೀವನ ನಡೆಸಲು ಪ್ರೋತ್ಸಾಹ ನೀಡುತ್ತಿದೆ. ಎಲ್ಲರನ್ನು ಶ್ರಮಿಕರನ್ನಾಗಿ ಮಾಡುತ್ತಿದ್ದಾರೆ. ಸೈನಿಕರ ಮೇಲಿರುವ ಕಾಳಜಿ, ಗಡಿ ಭದ್ರತೆ ಸೇರಿದಂತೆ ಆರ್ಥಿಕವಾಗಿ ಸದೃಢ ಭಾರತÀವಾಗಿ ಹೊರಹೊಮ್ಮುತ್ತಿರುವುದು ತಮ್ಮೆಲ್ಲರ ಕಣ್ಣೆದುರಿಗೆ ಇದೆ ಎಂದರು.