ಬೆಂಗಳೂರು:- ರಾಜ್ಯ ಸರ್ಕಾರದ ಹಗರಣಗಳನ್ನು ಜನರ ಮುಂದಿಡಲು ಬಿಜೆಪಿ ನಿರ್ಧರಿಸಿದ್ದು, ದೋಸ್ತಿ ಪಕ್ಷ ಜೆಡಿಎಸ್ ಜೊತೆಗೂಡಿ ಬೆಂಗಳೂರು ಟು ಮೈಸೂರು ಪಾದಯಾತ್ರೆಗೆ ಮುಂದಾಗಿದೆ.
ಮುಡಾ ಹಾಗು ವಾಲ್ಮೀಕಿ ನಿಗಮ ಹಗರಣ ಕುರಿತು ಸದನದಲ್ಲಿ ಚರ್ಚೆಗೆ ಸರಿಯಾದ ವೇದಿಕೆ ಲಭ್ಯವಾಗದ ಹಿನ್ನೆಲೆಯಲ್ಲಿ ಜನತಾ ನ್ಯಾಯಾಲಯಕ್ಕೆ ಕೊಂಡೊಯ್ಯಲು ಬಿಜೆಪಿ ಮತ್ತು ಜೆಡಿಎಸ್ ನಿರ್ಧರಿಸಿದೆ. ಬೃಹತ್ ಪಾದಯಾತ್ರೆ ಮೂಲಕ ಜನರಿಗೆ ಕಾಂಗ್ರೆಸ್ ಸರ್ಕಾರದ ಹಗರಣಗಳನ್ನು ಮನವರಿಕೆ ಮಾಡಿಕೊಡಲು ತೀರ್ಮಾನಿಸಿದೆ. ಅದಕ್ಕಾಗಿ 140 ಕಿಲೋಮೀಟರ್ಗಳ ಬೃಹತ್ ಪಾದಯಾತ್ರೆಗೆ ನಿರ್ಧರಿಸಲಾಗಿದೆ
ನೈಸ್ ರಸ್ತೆ ಜಂಕ್ಷನ್ನಲ್ಲಿರುವ ಕೆಂಪಮ್ಮ ದೇಗುಲದಲ್ಲಿ ಪೂಜೆ ಸಲ್ಲಿಸಿದ ನಂತರ ಬಿಜೆಪಿ ನಾಯಕರ ಪಾದಯಾತ್ರೆ ಆರಂಭವಾಗಲಿದೆ.
ಮೊದಲ ದಿನ 12 ಕಿಮೀ ಪಾದಯಾತ್ರೆ ನಡೆಸಲಿರುವ ಬಿಜೆಪಿ ನಾಯಕರು ಅಂದು ರಾತ್ರಿ ಮಂಜುನಾಥ್ ಚೌಲ್ಟ್ರಿಯಲ್ಲಿ ವಾಸ್ತವ್ಯ ಹೂಡಲಿದ್ದಾರೆ.
2ನೇ ದಿನ 20.5 ಕಿಮೀ ಪಾದಯಾತ್ರೆ ನಡೆಸಲಿರುವ ನಾಯಕರು ಬಳಿಕ ಕೆಂಗಲ್ ಆಂಜನೇಯ ದೇಗುಲದಲ್ಲಿ ವಾಸ್ತವ್ಯ ಹೂಡಲಿದ್ದಾರೆ.
3ನೇ ದಿನ 19 ಕಿಮೀ ಪಾದಯಾತ್ರೆ ನಡೆಸುವ ಬಿಜೆಪಿ ನಾಯಕರು, ನಿಡಗಟ್ಟದ ಸುಮಿತ್ರಾದೇವಿ ಕನ್ವೆನ್ಷನ್ ಹಾಲ್ನಲ್ಲಿ ವಾಸ್ತವ್ಯ ಹೂಡಲಿದ್ದಾರೆ.
4ನೇ ದಿನ 21.5 ಕಿಮೀ ಪಾದಯಾತ್ರೆ ನಡೆಸಿ ಶಶಿಕಿರಣ್ ಸಭಾಂಗಣದಲ್ಲಿ ವಾಸ್ತವ್ಯ ಹೂಡಲಿದ್ದಾರೆ.
5ನೇ ದಿನ 16.5 ಕಿಮೀ ಪಾದಯಾತ್ರೆ ನಡೆಸಿ ಮಂಡ್ಯ ಜಿಲ್ಲೆಗೆ ತಲುಪಲಿದ್ದಾರೆ. ಅಂದು ರಾತ್ರಿ ಇಂಡವಾಳ ಗ್ರಾಮದಲ್ಲಿ ವಾಸ್ತವ್ಯ ಹೂಡಲಿದ್ದಾರೆ.
6ನೇ ದಿನ 17 ಕಿಮೀ ಪಾದಯಾತ್ರೆ ನಡೆಸಿ ಮಂಜುನಾಥ ಚೌಲ್ಟ್ರಿಯಲ್ಲಿ ವಾಸ್ತವ್ಯ ಹೂಡಲಿದ್ದಾರೆ.
7ನೇ ದಿನ 9 ಕಿಮೀ ಮತ್ತು 8ನೇ ದಿನ 17 ಕಿಮೀ ಪಾದಯಾತ್ರೆ ಮಾಡಿ ಮೈಸೂರು ತಲುಪಲಿದ್ದಾರೆ.