ಚಿಕ್ಕಮಗಳೂರು:- ರಾಜ್ಯ ಗೃಹ ಸಚಿವ ಜಿ. ಪರಮೇಶ್ವರ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಆರೋಪದಲ್ಲಿ ಅರೆಸ್ಟ್ ಆಗಿದ್ದ ಬಿಜೆಪಿ ಮುಖಂಡ ಸಂತೋಷ್ ಕೊಟ್ಯಾನ್ಗೆ ಜಾಮೀನು ಮಂಜೂರಾಗಿದೆ.
ಚಿಕ್ಕಮಗಳೂರು ಜಿಲ್ಲಾ ನ್ಯಾಯಾಲಯ ಷರತ್ತು ಬದ್ಧ ಜಾಮೀನು ನೀಡಿ ಆದೇಶ ಹೊರಡಿಸಿದೆ. ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಂತೋಷ್ ಕೊಟ್ಯಾನ್ ಬಿಡುಗಡೆ ಹಿನ್ನೆಲೆ, ಚಿಕ್ಕಮಗಳೂರು ನಗರದಲ್ಲಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ನಗರದ ಶ್ರೀಕಂಠಪ್ಪ ವೃತ್ತದಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದ್ದಾರೆ. ರಾಮನಹಳ್ಳಿಯ ಕಾರಗೃಹದಿಂದ ಬೈಕ್ ರ್ಯಾಲಿ ಮೂಲಕ ನಗರಕ್ಕೆ ಅವರನ್ನು ಕಾರ್ಯಕರ್ತರು ಕರೆತಂದಿದ್ದಾರೆ. ಈ ವೇಳೆ ಸಂತೋಷ್ ಕೊಟ್ಯಾನ್ಗೆ ಹೂವು ಎಸೆದು ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಸ್ವಾಗತಿಸಿದ್ದಾರೆ.
ಇನ್ನೂ ಸಂತೋಷ್ ಅವರು, ನಾಲ್ಕು ದಿನದಿಂದ ಜೈಲಿನಲ್ಲಿದ್ದರು. ಈ ವೇಳೆ ಸುಳ್ಳು ಕೇಸ್ ದಾಖಲಿಸಿದ್ದಾರೆ ಎಂದು ನಗರ ಠಾಣೆ ಬಳಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಈಗ ಚಿಕ್ಕಮಗಳೂರು ಜಿಲ್ಲಾ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.



