ಬೆಂಗಳೂರು: ಬಿಜೆಪಿ ನಾಯಕರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕರಾದ ಮುನಿರತ್ನ, ಸಿ.ಟಿ.ರವಿ, ರವಿಕುಮಾರ್ ಮೊದಲಾದ ಬಿಜೆಪಿ ನಾಯಕರನ್ನು ಕಾಂಗ್ರೆಸ್ ಟಾರ್ಗೆಟ್ ಮಾಡಿದೆ.
ಮಂಜುನಾಥ್ ಹಾಗೂ ನಾಗೇಶ್ ಹಣ ಪಡೆದು ಮೋಸ ಮಾಡಿದ್ದಾರೆ ಎಂದು ಚಾಲಕ ಬಾಬು ಆತ್ಮಹತ್ಯೆ ಪತ್ರದಲ್ಲಿ ಬರೆದಿದ್ದಾರೆ. ಹಾಗೆಯೇ ಆನ್ಲೈನ್ ಗೇಮ್ನಿಂದಲೂ ನಷ್ಟವಾಗಿದೆ ಎಂದು ತಿಳಿಸಿದ್ದಾರೆ. ಇಲ್ಲಿ ಎಲ್ಲೂ ಸಂಸದ ಡಾ.ಕೆ.ಸುಧಾಕರ್ ಅವರ ಬಗ್ಗೆ ಆರೋಪ ಮಾಡಿಲ್ಲ. ನಮ್ಮ ಬಳಿ ಯಾರೇ ಬಂದರೂ ಸಹಾಯ ಮಾಡುತ್ತೇವೆ. ಆದರೆ ಹಾಗೆ ಸಹಾಯ ಕೇಳಿ ಹೋದವರು ಸುಸೈಡ್ ಮಾಡಿಕೊಂಡರೆ ಅದಕ್ಕೆ ನಾವೇ ಕಾರಣರಾಗುವುದಿಲ್ಲ ಎಂದರು.
ಈ ಹಿಂದೆ ಕೊಡಗು ಶಾಸಕರಾದ ಮಂಥರ್ ಗೌಡ ಹಾಗೂ ಎ.ಎಸ್.ಪೊನ್ನಣ್ಣ, ಸಚಿವ ಪ್ರಿಯಾಂಕ್ ಖರ್ಗೆ ಹೆಸರುಗಳು ಆತ್ಮಹತ್ಯೆ ಪ್ರಕರಣದಲ್ಲಿ ಕೇಳಿಬಂದಿತ್ತು. ಈ ಪ್ರಕರಣದಲ್ಲಿ ಪ್ರಬಲವಾದ ಸಾಕ್ಷ್ಯಾಧಾರಗಳೂ ಇತ್ತು. ಗುತ್ತಿಗೆದಾರ ಸಚಿನ್ ಪಾಂಚಾಳ್ ಅನೇಕ ಬಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಭೇಟಿ ಮಾಡಿದ್ದರು. ಸಚಿನ್ ಸಚಿವರ ಜೊತೆಗೆ ಮಾತಾಡಿದ್ದರು. ಅಷ್ಟೆಲ್ಲ ಸಾಕ್ಷಿಗಳಿದ್ದರೂ ಸಚಿವರ ವಿರುದ್ಧ ಪೊಲೀಸರು ಕ್ರಮ ವಹಿಸಲಿಲ್ಲ ಎಂದರು.