ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪಟ್ಟಣದ ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ಬಿಜೆಪಿಯ ಯಲ್ಲವ್ವ ದುರ್ಗಣ್ಣವರ ಪಕ್ಷದ ವಿಪ್ ಉಲ್ಲಂಘಿಸಿ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿಯಾಗಿ ಅಧ್ಯಕ್ಷ ಸ್ಥಾನ ಪಡೆದುಕೊಂಡಿದ್ದು, ಅವರ ಮೇಲೆ ಕಾನೂನು ಕ್ರಮಕ್ಕೆ ಪಕ್ಷ ಮುಂದಾಗಲಿದೆ ಎಂದು ಬಿಜೆಪಿ ಶಿರಹಟ್ಟಿ ಮಂಡಳ ಅಧ್ಯಕ್ಷ ಸುನೀಲ ಮಹಾಂತಶೆಟ್ಟರ ಹೇಳಿದರು.
ಅವರು ಪಟ್ಟಣದ ರಂಭಾಪುರಿ ಕಲ್ಯಾಣ ಮಂಟಪದಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ಪುರಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗೆ ಮತ ನೀಡಲು ಸೂಚಿಸಿ ಪಕ್ಷದ ಸದಸ್ಯರಿಗೆ ವಿಪ್ ನೀಡಲು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಜಿಲ್ಲಾ ಘಟಕದ ಅಧ್ಯಕ್ಷರಿಗೆ ಆದೇಶ ನೀಡಿದ್ದರು. ಆದೇಶದನ್ವಯ ಪಕ್ಷದ ಆರು ಜನ ಸದಸ್ಯರಿಗೆ ವಿಪ್ ಜಾರಿ ಮಾಡಲಾಗಿತ್ತು. ಆದರೆ ಅಧಿಕಾರದ ಆಸೆಗಾಗಿ ಪಕ್ಷ ವಿರೋಧಿ ಚಟುವಟಿಕೆ ಮಾಡಿ ಕಾಂಗ್ರೆಸ್ ಬೆಂಬಲ ಪಡೆದು ಅಧ್ಯಕ್ಷರಾಗಿರುವ ಯಲ್ಲವ್ವ ದುರ್ಗಣ್ಣವರ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲು ಜಿಲ್ಲಾ ಘಟಕದ ಅಧ್ಯಕ್ಷರು ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವದೆಂದು ಸ್ಪಷ್ಟಪಡಿಸಿದರು.
ಈ ವೇಳೆ ಬಿಜೆಪಿ ನಗರ ಘಟಕದ ಅಧ್ಯಕ್ಷ ನವೀನ ಬೆಳ್ಳಟ್ಟಿ, ಕಾರ್ಯದರ್ಶಿ ಅನಿಲ ಮುಳಗುಂದ, ಗಂಗಾಧರ ಮೆಣಸಿನಕಾಯಿ, ನೀಲಪ್ಪ ಹತ್ತಿ, ಗಿರೀಶ ಚೌರಡ್ಡಿ, ಸಂತೋಷ ಜಾವೂರ, ಪ್ರವೀಣ ಬೋಮಲೆ, ದುಂಡೇಶ ಕೊಟಗಿ, ಸಂಗಮೇಶ ಬೆಳವಲಕೊಪ್ಪ, ಹೊನ್ನಪ್ಪ ಒಡ್ಡರ, ಬಸವರಾಜ ಚಕ್ರಸಾಲಿ, ಹಾಲಪ್ಪ ಸೂರಣಗಿ, ಪುರಸಭೆ ಸದಸ್ಯರುಗಳಾದ ಪ್ರವೀಣ ಬಾಳಿಕಾಯಿ, ಅಶ್ವಿನಿ ಅಂಕಲಕೋಟಿ, ಮಂಜುಳಾ ಗುಂಜಳ, ಪೂಜಾ ಖರಾಟೆ, ಕವಿತಾ ಶರಸೂರಿ, ಪೂರ್ಣಿಮಾ ಪಾಟೀಲ, ವಾಣಿ ಹತ್ತಿ ಹಾಜರಿದ್ದರು.


