ಗದಗ: ಕುಟುಂಬದ ರಾಜಕಾರಣ ಬಿಟ್ಟು ಹೊರಗಡೆ ಬರದೆ ಹೋದ್ರೆ ಖಂಡಿತ ಬಿಜೆಪಿಗೆ ಸಮಸ್ಯೆ ಆಗುತ್ತೆ ಎಂದು ಯಡಿಯೂರಪ್ಪ, ವಿಜಯೇಂದ್ರ ವಿರುದ್ದ ಕೆಎಸ್ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.
ಗದಗದಲ್ಲಿ ಮಾತನಾಡಿದ ಅವರು, ಕುಟುಂಬ ರಾಜಕಾರಣದಿಂದ ನಾಯಕರು, ಕಾರ್ಯಕರ್ತರು ನೋವಿನಲ್ಲಿದ್ದಾರೆ. ರಕ್ತವನ್ನು ಬೇವರು ರೂಪದಲ್ಲಿ ಸುರಿಸಿ ಪಾರ್ಟಿ ಕಟ್ಟಿದ್ದಾರೆ. ಆದ್ರೆ ಬಿಜೆಪಿ ಒಂದೇ ಕುಟುಂಬದ ಕೈಯಲ್ಲಿ ಸಿಕ್ಕು ಹೋಗಿದೆ. ಆದ್ದರಿಂದ ಇದಕ್ಕೆ ಸರಿಯಾದ ರೂಪ ಬರಬೇಕೆಂದು ಅಪೇಕ್ಷ ಪಡುತ್ತಿದ್ದಾರೆ ಎಂದು ಹೇಳಿದರು.
ಇನ್ನೂ ಬಿಜೆಪಿಯಲ್ಲಿ ಹಿಂದುತ್ವದ ತತ್ವ ಸಿದ್ದಾಂತಗಳು ಈಗ ಇಲ್ಲ. ಈವಾಗ ಬಿಜೆಪಿಯಲ್ಲಿ ಹಿಂದುತ್ವ ಬಿಟ್ಟು ಸ್ವಜನ ಪಕ್ಷಪಾತ ನಡೆಯುತ್ತಿದೆ. ಇದಕ್ಕೆ ಸರಿಯಾಗಿ ಬ್ರೇಕ್ ಹಾಕಬೇಕು, ಹಿಂದುತ್ವಕ್ಕೆ ಸರಿಯಾದ ಬೆಲೆ ಸಿಗಬೇಕು. ಬಿಜೆಪಿ ಕುಟುಂಬ ರಾಜಕಾರಣದಿಂದ ಮುಕ್ತವಾಗಬೇಕು ಎಂದು ಪರೋಕ್ಷವಾಗಿ ಯಡಿಯೂರಪ್ಪ ವಿರುದ್ಧ ಕಿಡಿಕಾರಿದರು.
ಈ ಹಿಂದೆ ದಲಿತರು, ಹಿಂದುಳಿದವರು, ಲಿಂಗಾಯತರು ಬ್ರಾಹ್ಮಣರು, ಒಕ್ಕಲಿಗರನ್ನು ಸೇರಿಸಿಕೊಂಡು ಪಕ್ಷವನ್ನು ಗೆಲ್ಲಿಸಿಕೊಂಡು ಬಂದಿದ್ದೇವೆ. ಆವಾಗ ಇಡೀ ಹಿಂದು ಸಮಾಜ ನಮ್ಮ ಜೊತೆಗೆ ಇತ್ತು. ಆದ್ರೆ ಈಗ ಕುಟುಂಬ ರಾಜಕಾರಣ ಸರಿಯಿಲ್ಲ, ಇಡೀ ರಾಜ್ಯದ ಪ್ರಮುಖ ನಾಯಕರು ನೊಂದಿದ್ದಾರೆ. ಪಕ್ಷದ ಸಿದ್ದಾಂತಗಳ ವಿರುದ್ಧ ಹೋಗಿರವವರ ವಿರುದ್ಧ ನಾವು ಸಂಘಟನೆ ಮಾಡುತ್ತಿದ್ದೇವೆ. ಹೊಂದಾಣಿಕೆ ರಾಜಕಾರಣಕ್ಕೆ ಪರಿಹಾರ ಕಂಡು ಹಿಡಿಯಬೇಕು ಎನ್ನುವುದು ನಮ್ಮ ಪ್ರಯತ್ನವಾಗಿದೆ ಎಂದರು.