ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ತಾಲೂಕಿನಲ್ಲಿ ಜೆಜೆಎಂ ಕಾಮಗಾರಿ ಅಪೂರ್ಣಗೊಂಡಿರುವ ಬಗ್ಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರು/ಉಪಾಧ್ಯಕ್ಷರು ಮತ್ತು ಸರ್ವ ಸದಸ್ಯರ ಸಮಕ್ಷಮ ಠರಾವು ಬರೆಯಿಸಿ ಮೇಲಧಿಕಾರಿಗಳಿಗೆ ವರದಿ ನೀಡಬೇಕೆಂದು ಶಾಸಕ ಡಾ. ಚಂದ್ರು ಲಮಾಣಿ ಸೂಚಿಸಿದರು.
ಅವರು ಮಂಗಳವಾರ ಶಿರಹಟ್ಟಿಯ ತಾ.ಪಂ ಸಭಾಭವನದಲ್ಲಿ ಜರುಗಿದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಬಗ್ಗೆ ವಿಶೇಷ ಸಭೆಯನ್ನು ನಡೆಸಬೇಕು. ಬಾಕಿ ಉಳಿದಿರುವ ಸಂಖ್ಯೆ, ಎಷ್ಟು ಬಿಲ್ ಆಗಿದೆ, ಗುತ್ತಿಗೆದಾರರ ರಾಯಲ್ಟಿ ಎಷ್ಟಿದೆ ಎನ್ನುವುದರ ಬಗ್ಗೆಯೂ ಸಹ ಮಾಹಿತಿ ನೀಡಬೇಕು. ನೋಟೀಸ್ ನೀಡಿದರೂ ಕೆಲಸ ಪೂರ್ಣಗೊಳಿಸದ ಗುತ್ತಿಗೆದಾರರನ್ನು ಬ್ಲಾಕ್ಲಿಸ್ಟ್ಗೆ ಸೇರಿಸುವುದರ ಜೊತೆಗೆ ಕ್ರಿಮಿನಲ್ ಕೇಸ್ ದಾಖಲಿಸಲು ಮಾಹಿತಿಯನ್ನು ಕ್ರೋಢೀಕರಿಸಿ ಎಂದು ಆರ್ಡಬ್ಲ್ಯುಯಎಸ್ ಅಧಿಕಾರಿಗೆ ಸೂಚನೆ ನೀಡಿದರು.
ಕೆಶಿಫ್ನಿಂದ ರಾಜ್ಯ ಹೆದ್ದಾರಿ ಕಾಮಗಾರಿ ವೇಳೆ ಕುಡಿಯುವ ನೀರಿನ ಪೈಪ್ಲೈನ್ಗಳು ಒಡೆದುಹೋಗಿದ್ದು, ಇವುಗಳನ್ನು ಸರಿಪಡಿಸುವುದಕ್ಕೆ ಸಂಬಂಧಿಸಿದವರಿಗೆ ಪತ್ರ ಬರೆಯಬೇಕು. ಜೊತೆಗೆ ಎಲ್ & ಟಿಯವರಿಂದ ಕುಡಿಯುವ ನೀರು ಸರಬರಾಜು ಮಾಡಿದ ಬಗ್ಗೆ ತೆರಿಗೆ ಬರಬೇಕಿದ್ದು, ಅದರ ವಸೂಲಿಗೆ ಕ್ರಮ ವಹಿಸಬೇಕು. ಮುಂದಿನ ದಿನಗಳಲ್ಲಿ ಪೌರಕಾರ್ಮಿಕರ ಆರೋಗ್ಯದ ದೃಷ್ಟಿಯಿಂದ ಅವರಿಗೆ ಸೂಕ್ತ ಚಿಕಿತ್ಸೆಯನ್ನು ಒದಗಿಸಲು ಆದ್ಯತೆ ನೀಡಬೇಕೆಂದು ಶಾಸಕರು ಮುಖ್ಯಾಧಿಕಾರಿಗೆ ಸೂಚಿಸಿದರು.
ತಾಲೂಕಿನಲ್ಲಿ 2500 ಎಸ್ಎಸ್ಎಲ್ಸಿ ವಿದ್ಯಾರ್ಥಿಗಳು ಪರೀಕ್ಷೆಯನ್ನು ಬಯಸಿದ್ದು, ಇದರಲ್ಲಿ ಇತ್ತೀಚೆಗೆ ಜರುಗಿದ ಕಿರು ಪರೀಕ್ಷೆಯಲ್ಲಿ 590 ವಿದ್ಯಾರ್ಥಿಗಳು ಜಸ್ಟ್ ಪಾಸ್, 411 ವಿದ್ಯಾರ್ಥಿಗಳು ಫೇಲ್ ಆಗಿದ್ದು, ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳನ್ನು ನಡೆಸಲಾಗುತ್ತಿದೆ ಎಂದು ಬಿಇಓ ನಾಯ್ಕ ಸಭೆಗೆ ತಿಳಿಸಿದರು. ಎಲ್ಲ ವಿದ್ಯಾರ್ಥಿಗಳಿಗೂ ಸಹ ಗುಣಮಟ್ಟದ ಶಿಕ್ಷಣವನ್ನು ನೀಡಬೇಕೆಂದು ಶಾಸಕ ಸೂಚಿಸಿದರು. ಶಿರಹಟ್ಟಿಯ ಸಿಸಿಎನ್ ಸರಕಾರಿ ಪ್ರೌಢಶಾಲೆಯಲ್ಲಿ ಮುಖ್ಯಾಧಿಕಾರಿಯಿಂದ ಹಣಕಾಸಿನ ವ್ಯವಹಾರದಲ್ಲಿ ಲೋಪ-ದೋಷವಾಗಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಶಾಸಕ ಡಾ. ಲಮಾಣಿ ಸೂಚಿಸಿದರು.
ಜಿ.ಪಂ ಮುಖ್ಯ ಯೋಜನಾಧಿಕಾರಿ ಹಾಗೂ ತಾ.ಪಂ ಆಡಳಿತಾಧಿಕಾರಿ ನಿರ್ಮಲಾ ಕೆ, ತಹಸೀಲ್ದಾರ ಅನಿಲ ಬಡಿಗೇರ, ತಾ.ಪಂ ಇಓ ಆರ್.ವಿ. ದೊಡ್ಡಮನಿ, ತಾಲೂಕಾ ಗ್ಯಾರಂಟಿ ಸಮಿತಿ ಅಧ್ಯಕ್ಷ ವೀರಯ್ಯ ಮಠಪತಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಶಿರಹಟ್ಟಿ ಪ.ಪಂ ವ್ಯಾಪ್ತಿಯಲ್ಲಿ ಅಭಿವೃದ್ಧಿಯಾಗದೇ ಹ್ಯಾಂಡ್ ಓವರ್ ನೀಡಿದ್ದೀರಿ. ಸಂಬಂಧಿಸಿದವರಿಗೆ ನೋಟೀಸ್ ನೀಡಿ ನಿವಾಸಿಗಳಿಗೆ ಮೂಲ ಸೌಕರ್ಯ ಒದಗಿಸುವಂತೆ ಸೂಚನೆ ನೀಡಿ. ಇಲ್ಲದಿದ್ದರೆ ಅಂತವರ ಆಸ್ತಿಗಳ ಮೇಲೆ ಸರಕಾರದ ಭೋಜಾ ಕೂಡ್ರಿಸುವುದಕ್ಕೆ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕು. ಶಿರಹಟ್ಟಿ ಪಟ್ಟಣದಲ್ಲಿ 117 ಜನ ಫಲಾನುಭವಿಗಳನ್ನು ಆಶ್ರಯ ಯೋಜನೆಗೆ ಆಯ್ಕೆ ಮಾಡಲಾಗಿದ್ದು, ಇದನ್ನು ನೋಟೀಸ್ ಬೋರ್ಡ್ಗೆ ಪ್ರದರ್ಶಿಸಿ, ತಕರಾರುಗಳು ಬಂದರೆ ಸ್ವೀಕರಿಸಿ ಅದಕ್ಕೆ ಸಮರ್ಪಕ ಉತ್ತರ ನೀಡಿ. 15 ದಿನಗಳ ಒಳಗಾಗಿ ಫಲಾನುಭವಿಗಳ ಮನೆಗಳಿಗೆ ತೆರಳಿ ಸಂಪೂರ್ಣ ಮಾಹಿತಿಯನ್ನು ಕ್ರೋಢೀಕರಿಸಬೇಕೆಂದು ಮುಖ್ಯಾಧಿಕಾರಿಗೆ ಶಾಸಕ ಡಾ. ಲಮಾಣಿ ಸೂಚಿಸಿದರು.