ಜು.19ರಂದು ರಕ್ತ ಸಂಗ್ರಹಣಾ ಘಟಕದ ಕಾರ್ಯಾರಂಭ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಸಮುದಾಯ ಅರೋಗ್ಯ ಕೇಂದ್ರದಲ್ಲಿ ಜು.19ರಂದು ರಕ್ತ ಸಂಗ್ರಹಣಾ ಘಟಕ ಕಾರ್ಯಾರಂಭಗೊಳ್ಳಲಿದೆ. ಕಳೆದ 10 ವರ್ಷಗಳ ಹಿಂದೆ ಕಾರ್ಯಾರಂಭವಾಬೇಕಿದ್ದ ರಕ್ತ ಸಂಗ್ರಹಣಾ ಘಟಕ ಅನೇಕ ಕಾರಣಗಳಿಂದ ನೆನೆಗುದಿಗೆ ಬಿದ್ದಿತ್ತು.

Advertisement

ಲಕ್ಷ್ಮೇಶ್ವರ ಸೇರಿ ನೆರೆಯ ಸವಣೂರ, ಶಿಗ್ಗಾಂವ, ಕುಂದಗೋಳ, ಶಿರಹಟ್ಟಿ ತಾಲೂಕಿನಿಂದ ನಿತ್ಯ ನೂರಾರು ರೋಗಿಗಳು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗೆ ಬರುತ್ತಾರೆ. ಕೈಗಾ-ಇಳಕಲ್, ಕಲ್ಮಲಾ-ಶಿಗ್ಗಾಂವ, ಮಂಗಸೂಳಿ- ಲಕ್ಷ್ಮೇಶ್ವರ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಈ ಆಸ್ಪತ್ರೆಯ ವ್ಯಾಪ್ತಿಯಲ್ಲಿ ನಿತ್ಯವೂ ಅಪಘಾತ ಪ್ರಕರಣಗಳು ನಡೆದ ಸಂದರ್ಭದಲ್ಲಿ ರಕ್ತದ ಅವಶ್ಯಕತೆ ಸಾಕಷ್ಟಿರುತ್ತದೆ. ಅಲ್ಲದೇ ಪ್ರತಿ ತಿಂಗಳು ಕನಿಷ್ಠ 50ಕ್ಕೂ ಹೆಚ್ಚು ಹೆರಿಗೆಗಳಾಗುತ್ತವೆ. ಮೂಲವ್ಯಾಧಿ, ಗಂಟುರೋಗ, ಹರ್ನಿಯಾ ಇತರೇ ಸಣ್ಣಪುಟ್ಟ ಶಸ್ತ್ರ ಚಿಕಿತ್ಸೆಗಳು ನಡೆಯುತ್ತಿರುತ್ತವೆ.

ಪಟ್ಟಣ ಸೇರಿ ಸುತ್ತಲಿನ ತಾಲೂಕಿನಿಂದ ಹತ್ತಾರು ಖಾಸಗಿ ಆಸತ್ರೆಗಳಲ್ಲಿ ಚಿಕಿತ್ಸೆಗೊಳಪಡುವ ರೋಗಿಗಳಿಗೆ ಈ ಬ್ಲಡ್ ಬ್ಯಾಂಕ್‌ನಿಂದ ಸಾಕಷ್ಟು ಉಪಯೋಗವಾಗಲಿದೆ. ಅಗತ್ಯ, ತುರ್ತು ಸಂದರ್ಭದಲ್ಲಿ ರೋಗಿಗಳೊಂದಿಗೆ ಹುಬ್ಬಳ್ಳಿ, ಗದುಗಿಗೆ ಹೋಗಲೇಬೇಕಾದ ಅನಿವಾರ್ಯತೆ ಇತ್ತು. ಅನೇಕ ಸಲ ತುರ್ತು ರಕ್ತ ಸಿಗದೇ ಜೀವ ಹೋದ ಸಂದರ್ಭಗಳೂ ಇವೆ. ಈ ಭಾಗದ ಜನರಿಂದ ಬ್ಲಡ್ ಬ್ಯಾಂಕ್ ಪ್ರಾರಂಭದ ಬಗ್ಗೆ ಬೇಡಿಕೆ ಇತ್ತು. ಇದೀಗ ಇದೇ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಿದ ಶಾಸಕ ಡಾ. ಚಂದ್ರು ಲಮಾಣಿ ಅವರ ಪ್ರಯತ್ನ ಮತ್ತು ವೈದ್ಯಾಧಿಕಾರಿ ಡಾ. ಶ್ರೀಕಾಂತ ಕಾಟೇವಾಲೆ ಅವರ ಇಚ್ಛಾಶಕ್ತಿಯಿಂದ ಜನೋಪಯೋಗಕ್ಕೆ ಅಣಿಯಾಗುತ್ತಿದೆ.

ಜಿಲ್ಲೆಯ ಕೆಲ ತಾಲೂಕು ಆಸ್ಪತ್ರೆಗಳಲ್ಲಿಯೂ ಬ್ಲಡ್ ಬ್ಯಾಂಕ್ ಕಾರ್ಯಾರಂಭ ಮಾಡುತ್ತಿಲ್ಲ. ಆದರೆ ಲಕ್ಷ್ಮೇಶ್ವರದ ಸಮುದಾಯದ ಅರೋಗ್ಯ ಕೇಂದ್ರದಲ್ಲಿ 50 ಯೂನಿಟ್ ಸಾಮರ್ಥ್ಯದ, ಆಧುನಿಕ ತಂತ್ರಜ್ಞಾನದ ಜೀವ ರಕ್ಷಕ ರಕ್ತ ಸಂಗ್ರಹಣಾ ಘಟಕ ಪ್ರಾರಂಭಗೊಳ್ಳುತ್ತಿರುವುದು ಸಾರ್ವಜನಿಕರಲ್ಲಿ ನೆಮ್ಮದಿ ಮೂಡಿಸಿದೆ. ತಪಾಸಣೆ ಘಟಕ ಯಂತ್ರ, ಇನ್ಕ್ಯೂಬೇಟರ್, ಮೈಕ್ರೋಸ್ಕೋಪ್, ಸೆಂಟರ್ ಫ್ಯೂಸ್ ಸೇರಿ ಪೂಕರ ಉಪಕರಣಗಳು ಲಭ್ಯವಿದೆ. ಜನರೇಟರ್, ಸೋಲಾರ್ ವ್ಯವಸ್ಥೆಯೂ ಇದಕ್ಕಿದೆ. ಇದಕ್ಕಾಗಿ ವೈಧ್ಯಾಧಿಕಾರಿ ಡಾ. ಶ್ರೀಕಾಂತ ಕಾಟೇವಾಲೆ ವಿಶೇಷ ತರಬೇತಿ ಪಡೆದಿದ್ದಾರೆ. ನುರಿತ ಲ್ಯಾಬ್ ಟೆಕ್ನಿಷಿಯನ್ ವಿಜಯ ಮಾಂಡ್ರೆ ಹಲವು ವರ್ಷದಿಂದ ಇದೇ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಸರ್ಕಾರಿ ಆಸ್ಪತ್ರೆ ಅಷ್ಟೇ ಅಲ್ಲದೇ ನಮ್ಮ ಭಾಗದ ಖಾಸಗಿ ಆಸ್ಪತ್ರೆಗಳಲ್ಲಿ ನಡೆಯುವ ಹೆರಿಗೆ, ಅಪಘಾತ, ಶಸ್ತ್ರಚಿಕಿತ್ಸೆಯಂತಹ ಅನೇಕ ಸಂದರ್ಭಗಳಲ್ಲಿ ರಕ್ತದ ಅವಶ್ಯಕತೆ ಸಾಕಷ್ಟಿದೆ. ತುರ್ತು ಸಂದರ್ಭದಲ್ಲಿ ಕಿಮ್ಸ್ ಮತ್ತು ಜಿಮ್ಸ್ ಗೆ ಕಳುಹಿಸಲೇಬೇಕಾಗಿತ್ತು. ಇದೀಗ ನಮ್ಮ ಆಸ್ಪತ್ರೆಯಲ್ಲಿ ರಕ್ತ ಸಂಗ್ರಹಣಾ ಘಟಕ ಪ್ರಾರಂಭಗೊಳ್ಳುತ್ತಿರುವುದರಿಂದ ರೋಗಿಗಳಿಗೆ ಅನಕೂಲವಾಗಿದೆ. ರಕ್ತ ಸಂಗ್ರಹಣಾ ಘಟಕದ ಉದ್ಘಾಟನೆಯ ದಿನ ಆಸ್ಪತ್ರೆಯಲ್ಲಿಯೇ ಪತ್ರಕರ್ತರ ಸಂಘದಿಂದ ರಕ್ತದಾನ ಶಿಬಿರ ಹಮ್ಮಿಕೊಂಡಿರುವುದು ಸಂತಸ ತಂದಿದೆ.

– ಡಾ. ಶ್ರೀಕಾಂತ ಕಾಟೇವಾಲೆ.

ಸಮುದಾಯ ಆರೋಗ್ಯ ಕೇಂದ್ರದ ಆಡಳಿತಾಧಿಕಾರಿ.


Spread the love

LEAVE A REPLY

Please enter your comment!
Please enter your name here