ವಿಜಯಸಾಕ್ಷಿ ಸುದ್ದಿ, ಗದಗ : ವಿಶ್ವ ಪ್ಲಂಬರ್ ದಿನಾಚಾರಣೆಯ ಅಂಗವಾಗಿ ಗದಗ-ಬೆಟಗೇರಿ ಪ್ಲಂಬರ್ ಸಂಘದ ವತಿಯಿಂದ ರಕ್ತದಾನ ಶಿಬಿರವನ್ನು ರೋಟರಿ ಐ ಕೇರ್ ಸೆಂಟರ್ನಲ್ಲಿ ಏರ್ಪಡಿಸಲಾಗಿತ್ತು. ಪ್ಲಂಬರ್ ಸಂಘ ಗದಗ-ಬೆಟಗೇರಿ, ರೋಟರಿ ಸಂಸ್ಥೆ ಗದಗ-ಬೆಟಗೇರಿ, ರೋಟರಿ ಸಂಸ್ಥೆ ಗದಗ-ಬೆಟಗೇರಿ ಹಾಗೂ ವೆಲ್ ಫೇರ್ ಸೊಸೈಟಿ ಇವುಗಳ ಸಂಯುಕ್ತಾಶ್ರಯದಲ್ಲಿ ನಡೆದ ರಕ್ತದಾನ ಶಿಬಿರವನ್ನು ರೊ. ಶ್ರೀಧರ ಸುಲ್ತಾನಪೂರ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾದ ಡಾ. ಕಮಲಾಕ್ಷಿ ಅಂಗಡಿ ರಕ್ತದ ವರ್ಗೀಕರಣ, ಯಾವ ಸಂಧರ್ಭದಲ್ಲಿ ರಕ್ತದ ಅವಶ್ಯಕತೆ ಒದಗುತ್ತದೆ, ರಕ್ತದಾನ ಮಾಡುವುದರಿಂದ ದಾನಿಗಳಿಗೆ ಹೇಗೆ ಲಾಭಗಳಾಗುತ್ತದೆ ಎಂದು ವಿವರಿಸಿದರು. ಪ್ಲಂಬರ್ ಸಂಘದ ಅಧ್ಯಕ್ಷ ಕೆ.ಬಿ. ಕುಡಗುಂಟಿ ಸರ್ವರನ್ನು ಸ್ವಾಗತಿಸಿ ರಕ್ತದಾನ ಮಾಡುವಂತೆ ವಿನಂತಿಸಿದರು.
ರೋಟರಿ ಸಂಸ್ಥೆಯ ಕಾರ್ಯದರ್ಶಿ ವೀಣಾ ತಿರ್ಲಾಪೂರ ಕಾರ್ಯಕ್ರಮ ನಿರೂಪಿಸಿ ವಂದಿಸಿರು. ಬಸವೇಶ್ವರ ರಕ್ತ ಭಂಡಾರದ ವತಿಯಿಂದ ಸುಮಾರು 15 ಯುನಿಟ್ ರಕ್ತವನ್ನು ಸಂಗ್ರಹಿಸಲಾಯಿತು. ಸಂಘದ ಸಂಸ್ಥಾಪಕ ಅಧ್ಯಕ್ಷ ಝಡ್.ಡಿ. ಬೇಲೇರಿ, ಅನಿಲ ಜಾದವ, ಗಣ್ಯ ವ್ಯಾಪಾರಸ್ಥರಾದ ವಿನೋದ ಪಟೇಲ, ಖಾಜೇಸಾಬ್ ಗಬ್ಬೂರ, ರೊ. ಬಾಲಕೃಷ್ಣ ಕಾಮತ್, ರೊ. ಶ್ರೀಧರಗೌಡ ಧರ್ಮಾಯತ ಮುಂತಾದವರು ಉಪಸ್ಥಿತರಿದ್ದರು.