ವಿಜಯಸಾಕ್ಷಿ ಸುದ್ದಿ, ಗದಗ : ಇಲ್ಲಿನ ವಿ.ಪಿ. ಗಾಲಾ ಸ್ಕೂಲ್ ಆಫ್ ನರ್ಸಿಂಗ್ ಹಾಗೂ ಇನ್ಸ್ಟಿಟ್ಯೂಟ್ ಆಫ್ ಪ್ಯಾರಾಮೆಡಿಕಲ್ ಸೈನ್ಸ್ನಲ್ಲಿ ಬಸವೇಶ್ವರ ಬ್ಲಡ್ ಬ್ಯಾಂಕ್ ಸಹಯೋಗದೊಂದಿಗೆ ವರ್ಲ್ಡ್ ಪ್ಯಾರಾಮೆಡಿಕ್ ದಿನದ ಅಂಗವಾಗಿ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು.
ಕಾಲೇಜಿನ ಪ್ರಿನ್ಸಿಪಾಲ ಅಮರಯ್ಯ ಚಿನ್ನಯ್ಯನಮಠ ಮಾತನಾಡಿ, ರಕ್ತವು ಪ್ರಕೃತಿ ನಮಗೆ ನೀಡಿದ ಅತ್ಯಮೂಲ್ಯ ಕೊಡುಗೆಯಾಗಿದೆ. ರಕ್ತದಾನ ಎಂದರೆ ಒಬ್ಬ ವ್ಯಕ್ತಿಗೆ ಜೀವದಾನ. ನಾವು ನೀಡುವ ರಕ್ತ ಇನ್ನೊಂದು ದಿನ ಬೇರೆಯವರಿಗೆ ಉಪಯೋಗವಾಗುತ್ತದೆ. ಆದರೆ ರಕ್ತದಾನದ ಬಗ್ಗೆ ಹೆಚ್ಚಿನ ಜನರಲ್ಲಿ ಅರಿವಿನ ಕೊರತೆ ಇದೆ. ರಕ್ತದಾನದಿಂದ ನಮ್ಮ ದೇಹಕ್ಕೆ ಯಾವುದೇ ಹಾನಿಯಾಗುವುದಿಲ್ಲ ಎಂದು ವಿವರಿಸಿದರು.
ಕಾಲೇಜಿನ ಅಧ್ಯಕ್ಷರಾದ ರಚನಾ ಗಾಲಾ, ಸೆಕ್ರೆಟರಿ ಪಂಕಜ್ ಗಾಲಾ, ನಿರ್ದೇಶಕ ಗುಂಜನ ಗಾಲಾ ಮತ್ತು ಬಸವೇಶ್ವರ್ ಬ್ಲಡ್ ಬ್ಯಾಂಕ್ ಆಡಳಿತಧಿಕಾರಿ ಅನಿಲಕುಮಾರ್ ಹಾಜರಿದ್ದರು.
ಶಿಬಿರದಲ್ಲಿ ನರ್ಸಿಂಗ್, ಪ್ಯಾರಾಮೆಡಿಕಲ್ ವಿದ್ಯಾರ್ಥಿಗಳು, ಕಾಲೇಜಿನ ಎಲ್ಲ ಸಿಬ್ಬಂದಿಗಳು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿದರು. ಕಾರ್ಯಕ್ರಮದಲ್ಲಿ ಬಸವೇಶ್ವರ ಬ್ಲಡ್ ಬ್ಯಾಂಕ್ ಗದಗ ಸಿಬ್ಬಂದಿ ವರ್ಗದವರು ಶಿಬಿರ ಯಶಸ್ವಿಯಾಗಲು ಶ್ರಮಿಸಿದರು.