ವಿಜಯಸಾಕ್ಷಿ ಸುದ್ದಿ, ಗದಗ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕ, ಜಿಲ್ಲಾ ವಾರ್ತಾ ಮತ್ತು ಪ್ರಚಾರ ಇಲಾಖೆ, ಜಿಮ್ಸ್ ರಕ್ತನಿಧಿ ಕೇಂದ್ರ ಹಾಗೂ ವೈದ್ಯಕೀಯ ವಿಜ್ಞಾನ ಸಂಸ್ಥೆ ಜಿಲ್ಲಾ ಆಸ್ಪತ್ರೆ ಗದಗ ಇವರುಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವ ರಕ್ತದಾನಿಗಳ ದಿನದ ಸಮಾರಂಭ, ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.
ಸಮಾರಂಭವನ್ನು ಉಧ್ಘಾಟಿಸಿ ಮಾತನಾಡಿದ ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಅರುಂಧತಿ ಕೆ, ರಕ್ತದಾನ ಶ್ರೇಷ್ಠದಾನ, ರಕ್ತದಾನ ಜೀವದಾನ, ರಕ್ತದಾನ ಮಹಾದಾನ ಎನ್ನುವಂತೆ ಎಲ್ಲರೂ ಮೂರು ತಿಂಗಳಿಗೆ ಒಂದು ಸಾರಿ ರಕ್ತದಾನ ಮಾಡಬಹುದು. ರಕ್ತದಾನ ಮಾಡುವುದರಿಂದ ದೇಹದಲ್ಲಿ ಹೊಸ ರಕ್ತ ಉತ್ಪತ್ತಿಯಾಗಿ ದೇಹದಲ್ಲಿ ಚೈತನ್ಯ ಬರುವುದು. ಎಲ್ಲರೂ ರಕ್ತದಾನ ಮಾಡಿ ರಕ್ತದ ಕೊರತೆಯನ್ನು ನೀಗಿಸುವಲ್ಲಿ ಕೈ ಜೋಡಿಸಬೇಕೆಂದರು.
ರಕ್ತದಾನದಿಂದ ದಾನಿಯ ದೇಹದಲ್ಲಿ 24 ಗಂಟೆಯೊಳಗಾಗಿ ಹೊಸ ರಕ್ತ ಉತ್ಪತ್ತಿ ಪ್ರಾರಂಭವಾಗುತ್ತದೆ. ರಕ್ತದಾನದಿಂದ ಕೊಬ್ಬಿನಾಂಶವನ್ನು ಕಡಿಮೆಯಾಗುತ್ತದೆ. ಹೃದಯ ರೋಗವನ್ನು ಕಡಿಮೆ ಮಾಡುತ್ತದೆ. ಜ್ಞಾಪಕ ಶಕ್ತಿಯನ್ನು ವೃದ್ಧಿಸುತ್ತದೆ. ಇಷ್ಟೆಲ್ಲಾ ಲಾಭಗಳಿರುವುದರಿಂದ ಪ್ರತಿಯೊಬ್ಬರಿಗೂ ರಕ್ತದಾನ ಮಾಡಲು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಹೆಚ್ಚು ಬಾರಿ ರಕ್ತದಾನ ಮಾಡಿದ ಮಾಲತೇಶ, ಮಂಜುನಾಥ, ಲಕ್ಕಪ್ಪ, ಮಲ್ಲೇಶ, ಪವನ್ ಇವರನ್ನು ಸನ್ಮಾನಿಸಲಾಯಿತು. ರಕ್ತದಾನ ಶಿಬಿರದಲ್ಲಿ 50ಕ್ಕೂ ಹೆಚ್ಚು ರಕ್ತದ ಯುನಿಟ್ಗಳನ್ನು ಸಂಗ್ರಹಿಸಲಾಯಿತು. ಜಿಮ್ಸ್ ರಕ್ತನಿಧಿ ಕೇಂದ್ರದ ಡಾ. ಮೋನಿಕಾ, ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ. ಮಹೇಶ ಪಾಟೀಲ ಮಾತನಾಡಿದರು.
ಸಮಾರಂಭದಲ್ಲಿ ಡಾ. ಈಶ್ವರ ಸಿಂಗ್, ಡಾ. ಶಕುಂತಲಾ ಅರಮನಿ, ಡಾ. ಮಲ್ಲಿಕಾರ್ಜುನ, ಎಸ್.ಬಿ ಪಾಟೀಲ, ವೆಂಕಟೇಶ, ಫಿರೋಜ, ಕೃಷ್ಣಾ, ವಿರೂಪಾಕ್ಷಿ, ಅನ್ನಪೂರ್ಣಾ ಹಾಗೂ ಸಿಬ್ಬಂದಿಗಳು ಹಾಜರಿದ್ದರು.
ಮೋದಿನವರ ಸ್ವಾಗತಿಸಿದರು. ಬಸವರಾಜ ಲಾಲಗಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.



