ಬೆಂಗಳೂರು :- ಬಸ್ ಅಡ್ಡಗಟ್ಟಿದ ಯುವತಿ ಮೇಲೆ ಬಸ್ ನುಗ್ಗಿಸಲು ಪ್ರಯತ್ನಿಸಿದ ಬಸ್ ಚಾಲಕನನ್ನು ಅಮಾನತುಗೊಳಿಸಿ ಸಚಿವ ರಾಮಲಿಂಗಾರೆಡ್ಡಿ ಆದೇಶ ಹೊರಡಿಸಿದ್ದಾರೆ.
ಅಮಾನತಾದ ಚಾಲಕನನ್ನು ಪ್ರಶಾಂತ್ ಎಂದು ಗುರುತಿಸಲಾಗಿದೆ. ಬಿಎಂಟಿಸಿ ಬಸ್ ಪಕ್ಕ ಕಾರಿನಲ್ಲಿದ್ದ ಯುವತಿ ಕಾರಿನಿಂದ ಇಳಿದು ಬಸ್ ಚಾಲಕನನ್ನು ಪ್ರಶ್ನೆ ಮಾಡಿದ್ದಾಳೆ. ಯಾವ ವಿಚಾರವಾಗಿ ಯುವತಿ ಪ್ರಶ್ನೆ ಮಾಡಿದ್ದಾಳೆ ಎಂಬ ಕುರಿತು ಸ್ಪಷ್ಟತೆ ದೊರೆತಿಲ್ಲ. ಬಳಿಕ ಬಸ್ ಚಾಲಕ ಮತ್ತು ಯುವತಿ ನಡುವೆ ಜಗಳ ನಡೆದು ಬಸ್ ಚಾಲಕನನ್ನು ಪ್ರಶ್ನೆ ಮಾಡಲು ಯುವತಿ ಸಿಗ್ನಲ್ನಲ್ಲಿ ಬಸ್ ಅಡ್ಡಗಟ್ಟಿದ್ದಳು. ಆದರೆ, ಯುವತಿಯನ್ನು ಲೆಕ್ಕಿಸದೇ ಚಾಲಕ ಬಸ್ ನುಗ್ಗಿಸಲು ಮುಂದಾಗಿದ್ದಾನೆ. ಸ್ವಲ್ಪದರಲ್ಲೇ ಯುವತಿ ಪಾರಾಗಿದ್ದು, ಚಾಲಕನ ಕೃತ್ಯದಿಂದ ಜನ ಬೆಚ್ಚಿಬಿದ್ದಿದ್ದಾರೆ.
ಮೇ 23ರಂದು ಸಂಜೆ 5:40ಕ್ಕೆ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಏಕಾಏಕಿ ಯುವತಿಯ ಮೇಲೆ ಬಸ್ ಹತ್ತಿಸಲು ಹೊರಟಿದ್ದ ಚಾಲಕನ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಈ ಬೆನ್ನಲ್ಲೇ ಚಾಲಕನನ್ನು ಅಮಾನತು ಮಾಡಿ ಸಾರಿಗೆ ಸಚಿವರು ಆದೇಶ ಹೊರಡಿಸಿದ್ದಾರೆ.