ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದಲ್ಲಿನ ಇಂದಿರಾ ಕ್ಯಾಂಟೀನ್ ನಿರ್ವಹಣೆ ಸಂಪೂರ್ಣ ಅವ್ಯವಸ್ಥೆಯಿಂದ ಕೂಡಿದ್ದು, ರುಚಿ-ಶುಚಿ, ಪ್ರಮಾಣ ಎಲ್ಲ ನಿಯಮಾವಳಿಗಳನ್ನು ಗಾಳಿಗೆ ತೂರಿ ಬೋಗಸ್ ಬಿಲ್ ತೆಗೆಯುವ ಕಾರ್ಯ ಮಾಡುತ್ತಿದ್ದಾರೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಅಸಮಾಧಾನ ವ್ಯಕ್ತಪಡಿಸಿದರು.
ಅವರು ಶುಕ್ರವಾರ ಬೆಳಿಗ್ಗೆ ಪೌರ ಕಾರ್ಮಿಕರೊಂದಿಗೆ ಉಪಹಾರ ಸೇವಿಸಲು ಬರುತ್ತೇನೆಂದು ಮೊದಲೇ ತಿಳಿಸಿ ಪಟ್ಟಣದ ಇಂದಿರಾ ಕ್ಯಾಂಟೀನ್ಗೆ ಹೋದಾಗ ಅಲ್ಲಿನ ವ್ಯವಸ್ಥೆ, ಆಹಾರದ ಗುಣಮಟ್ಟ, ಪ್ರಮಾಣದ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ಸರ್ಕಾರ ಬಡವರು, ಕಾರ್ಮಿಕರ ಹಿತದೃಷ್ಟಿಯಿಂದ ಇಂದಿರಾ ಕ್ಯಾಂಟೀನ್ ಯೋಜನೆಯಲ್ಲಿ 300 ಜನರಿಗೆ ಬೆಳಿಗ್ಗೆ 5 ರೂಪಾಯಿಗೆ ಉಪಹಾರ, ಮಧ್ಯಾಹ್ನ 10 ರೂಪಾಯಿಗೆ ಊಟ ಕೊಡಬೇಕು. ಗುಣಮಟ್ಟ ಮತ್ತು ನಿಗದಿತ ಪ್ರಮಾಣದಲ್ಲಿರಬೇಕು. ಇದಕ್ಕೆ ಸರ್ಕಾರ ಅನುದಾನ ನೀಡುತ್ತದೆ. ಆದರೆ ಇಲ್ಲಿ ಎಲ್ಲ ನಿಯಮಾವಳಿಗಳನ್ನು ಗಾಳಿಗೆ ತೂರಿ ಮನಸೋ ಇಚ್ಛೆ ವರ್ತಿಸುತ್ತಿದ್ದಾರೆ.
ಸರ್ಕಾರ ಪೌರಕಾರ್ಮಿಕರಿಗೆ ಉಪಹಾರ ಕೊಡುವ ಯೋಜನೆ ಬಂದ್ ಮಾಡಿ ಇಂದಿರಾ ಕ್ಯಾಂಟೀನ್ನಲ್ಲಿ ಉಪಹಾರ ಮಾಡಲು ನಿರ್ದೇಶಿಸಿದೆ. ಆದರೆ ಪೌರಕಾರ್ಮಿಕರಿಗೆ ಇಲ್ಲಿನ ಉಪಹಾರ ಒಂದಿಷ್ಟೂ ರುಚಿಸುತ್ತಿಲ್ಲ. ದಿನಕ್ಕೆ 30–40 ಜನರಿಗೆ ಉಪಹಾರ–ಊಟ ಕೊಟ್ಟು, “ಖಾಲಿಯಾಗಿದೆ” ಎಂದು ಹೇಳಿ 300 ಕೂಪನ್ ಪುರಸಭೆಗೆ ಕೊಟ್ಟು ಬೋಗಸ್ ಬಿಲ್ ತೆಗೆಯುತ್ತಿದ್ದಾರೆ.
ಈ ಅವ್ಯವಸ್ಥೆ ಸರಿಯಾಗುವವರೆಗೂ ನಾನು ನಿತ್ಯ ಭೇಟಿ ಕೊಡುತ್ತೇನೆ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಬೇಕು. ಸುಧಾರಣೆ ಆಗದೆ ಇದ್ದರೆ ಗುತ್ತಿಗೆದಾರರ ಬದಲಾವಣೆಗೆ ಬರೆಯುತ್ತೇನೆ ಎಂದರು.
ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ, ಹಿರಿಯ ಆರೋಗ್ಯ ನಿರೀಕ್ಷಕ ಮಂಜುನಾಥ ಮುದಗಲ್, ಗಂಗಾಧರ ಮೆಣಸಿನಕಾಯಿ, ವಿಜಯ ಕುಂಬಾರ, ಜಗದೀಶಗೌಡ ಪಾಟೀಲ, ವಿಶಾಲ ಬಟಗುರ್ಕಿ, ಬಸವರಾಜ ಕಲ್ಲೂರ, ರುದ್ರಪ್ಪ ಉಮಚಗಿ, ಪೌರಕಾರ್ಮಿಕರು ಇದ್ದರು.



