ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿಯನ್ನು ಪ್ರತಿಯೊಬ್ಬರು ಖಂಡಿಸುತ್ತಿದ್ದಾರೆ. ದಾಳಿಯ ಬಳಿಕ ಪಾಕಿಸ್ತಾನದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಪಾಕಿಸ್ತಾನದ ಮೇಲೆ ಯುದ್ಧ ಮಾಡಿಯೇ ತೀರಬೇಕೆಂಬ ಒತ್ತಾಯ ಕೇಳಿ ಬರುತ್ತಿದೆ. ಅಲ್ಲದೆ ಪಾಕಿಸ್ತಾನಿ ನಟ ಫಹಾದ್ ಖಾನ್ ನಟಿಸಿರುವ ‘ಅಬಿರ್ ಗುಲಾಲ್’ ಸಿನಿಮಾ ಬಿಡುಗಡೆಗೆ ಹಲವು ಕಡೆ ನಿಷೇಧ ಹೇರಲಾಗಿದೆ. ಅದರ ಬೆನ್ನಲ್ಲೆ ಇದೀಗ ಭಾರತದ ಮತ್ತೊಂದು ಹೊಸ ಸಿನಿಮಾದಿಂದ ಪಾಕಿಸ್ತಾನಿ ನಟಿಯನ್ನು ಹೊರ ಹಾಕಲಾಗಿದೆ.
ದಿಲ್ಜಿತ್ ದುಸ್ಸಾಂಜ್ ನಟನೆಯ ‘ಸರ್ದಾರ್ ಜಿ 3’ ಸಿನಿಮಾದ ಚಿತ್ರೀಕರಣ ಪ್ರಾರಂಭ ಆಗಿದ್ದು. ‘ಸರ್ದಾರ್ ಜಿ 3’ ಸಿನಿಮಾನಲ್ಲಿ ಪಾಕಿಸ್ತಾನಿ ಖ್ಯಾತ ನಟಿ, ಗಾಯಕಿ ಹಾನಿಯಾ ಆಮಿರ್ ಅವರು ನಾಯಕಿಯಾಗಿ ನಟಿಸಬೇಕಿತ್ತು. ಆಕೆಯ ಜೊತೆ ಹಲವು ಸುತ್ತಿನ ಮಾತುಕತೆ ಕೂಡ ನಡೆದಿತ್ತು. ಆದರೆ ಪಹಲ್ಗಾಮ್ ಘಟನೆಯ ಬಳಿಕ ಹಾನಿಯಾ ಆಮಿರ್ ಅವರನ್ನು ‘ಸರ್ದಾರ್ ಜೀ 3’ ಸಿನಿಮಾದಿಂದ ಕೈ ಬಿಡಲಾಗಿದೆ.
‘ಸರ್ದಾರ್ ಜೀ 3’ ಸಿನಿಮಾ ಅನ್ನು ನೀರು ಬಾಜ್ವಾ ನಿರ್ದೇಶನ ಮಾಡುತ್ತಿದ್ದು, ಸಿನಿಮಾದ ಚಿತ್ರೀಕರಣ ಇತ್ತೀಚೆಗಷ್ಟೆ ಇಂಗ್ಲೆಂಡ್ನಲ್ಲಿ ನಡೆದಿದೆ. ಈ ಸಿನಿಮಾದಲ್ಲಿ ಇಬ್ಬರು ನಾಯಕಿಯರಿದ್ದು ಒಬ್ಬ ನಾಯಕಿಯಾಗಿ ಪಾಕಿಸ್ತಾನಿ ನಟಿ, ಗಾಯಕಿ ಹಾನಿಯಾ ಆಮಿರ್ ಅವರನ್ನು ಆಯ್ಕೆ ಮಾಡಿಕೊಳ್ಳುವ ಯೋಜನೆ ಚಿತ್ರತಂಡಕ್ಕಿತ್ತು. ಆದರೆ ಪಹಲ್ಗಾಮ್ ದಾಳಿ ಬಳಿಕ ಆಗಿರುವ ಬದಲಾವಣೆಯಿಂದಾಗಿ ನಟಿಯನ್ನು ಸಿನಿಮಾದಿಂದ ಕೈಬಿಡಲಾಗಿದ್ದು ಹೊಸ ನಟಿಗಾಗಿ ಚಿತ್ರತಂಡ ಹುಡುಕಾಟ ನಡೆಸುತ್ತಿದೆ.
ದಿಲ್ಜೀತ್ ದುಸ್ಸಾಂಜ್ ಈ ಹಿಂದೆ ‘ಇಲ್ಲುಮಿನಾಟಿ’ ಹೆಸರಿನ ಲೈವ್ ಮ್ಯೂಸಿಕ್ ಟೂರ್ ಮಾಡಿದ್ದರು. ಬ್ರಿಟನ್ನಲ್ಲಿ ತಮ್ಮ ಲೈವ್ ಶೋ ಮಾಡಿದಾಗ ತಮ್ಮ ಕಾರ್ಯಕ್ರಮದ ಅತಿಥಿಯಾಗಿ ಹಾನಿಯಾ ಆಮಿರ್ ಅವರನ್ನು ಕರೆಸಿದ್ದರು. ದಿಲ್ಜೀತ್ ಜೊತೆಗೆ ವೇದಿಕೆ ಹಂಚಿಕೊಂಡಿದ್ದ ನಟಿ ಹಾನಿಯಾ, ದಿಲ್ಜೀತ್ ಜೊತೆಗೆ ಹಾಡುಗಳನ್ನು ಸಹ ಹಾಡಿದ್ದರು. ದಿಲ್ಜೀತ್ ಹಾಗೂ ಹಾನಿಯಾರನ್ನು ಒಟ್ಟಿಗೆ ನೋಡಿ ಅಭಿಮಾನಿಗಳು ಸಹ ಖುಷಿ ವ್ಯಕ್ತಪಡಿಸಿದ್ದರು. ಇದೇ ಕಾರಣಕ್ಕೆ ಸಿನಿಮಾದಲ್ಲಿಯೂ ಸಹ ಈ ಇಬ್ಬರನ್ನು ಒಟ್ಟಿಗೆ ತರುವ ಯೋಜನೆ ಹಾಕಿಕೊಳ್ಳಲಾಗಿತ್ತು. ಆದ್ರೆ ಕಾಶ್ಮೀರ ಘಟನೆ ಬಳಿಕ ಇದೀಗ ಚಿತ್ರತಂಡ ಬೇರೆ ನಟಿಗಾಗಿ ತಲಾಶ್ ನಡೆಸುತ್ತಿದೆ.