ತಮಿಳು ಚಿತ್ರರಂಗದ ಸೂಪರ್ ಸ್ಟಾರ್, ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ ದಳಪತಿ ವಿಜಯ್ ಅವರಿಗೆ ಬಾಂಬ್ ಬೆದರಿಕೆ ಬಂದಿದೆ. ಶನಿವಾರ ಟಿವಿಕೆ ರ್ಯಾಲಿ ವೇಳೆ ಕಾಲ್ತುಳಿತ ಉಂಟಾಗಿ 41 ಜನರು ಮೃತಪಟ್ಟಿದ್ದು ಹಲವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಘಟನೆ ನಡೆದ ಬೆನ್ನಲ್ಲೇ ವಿಜಯ್ ಅವರಿಗೆ ಬಾಂಬ್ ಬೆದರಿಕೆ ಬಂದಿದ್ದು, ಈ ಹಿನ್ನೆಲೆಯಲ್ಲಿ ತಮಿಳುನಾಡಿನ ಚೆನ್ನೈನಲ್ಲಿರುವ ಅವರ ನಿವಾಸಕ್ಕೆ ಬಿಗಿ ಪೊಲೀಸ್ ಭದ್ರತೆ ಓದಗಿಸಲಾಗಿದೆ.
ಕರೂರ್ನಲ್ಲಿ ನಡೆದ ವಿಜಯ್ ಅವರ ರ್ಯಾಲಿಯಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 10 ಮಕ್ಕಳು, 17 ಮಹಿಳೆಯರು ಮತ್ತು 13 ಪುರುಷರು ಸೇರಿದಂತೆ 40 ಜನರು ಸಾವನ್ನಪ್ಪಿದ್ದು ಹಲವರು ಗಾಯಗೊಂಡಿದ್ದಾರೆ. ಘಟನೆ ಬಳಿಕ ಪ್ರತಿಕ್ರಿಯೆ ನೀಡಿದ ನಟ ವಿಜಯ್, ಈ ಘಟನೆಯಿಂದ ನನ್ನ ಹೃದಯ ಛಿದ್ರಗೊಂಡಿದೆ ಎಂದು ಹೇಳಿದ್ದರು. ಜೊತೆಗೆ ಪ್ರಾಣ ಕಳೆದುಕೊಂಡವರಿಗೆ ಗೌರವ ಸಲ್ಲಿಸಿದ್ದು, ಗಾಯಾಳುಗಳು ಬೇಗನೆ ಚೇತರಿಸಿಕೊಳ್ಳಬೇಕೆಂದು ಪ್ರಾರ್ಥಿಸಿದ್ದರು. ಆದರೆ ಘಟನೆ ನಡೆದು ಎರಡು ದಿನ ಕಳೆದರು ವಿಜಯ್ ಆಸ್ಪತ್ರೆಗೆ ಭೇಟಿ ನೀಡಿಲ್ಲ ಜೊತೆಗೆ ಮೃತರ ಕುಟುಂಬಸ್ಥರನ್ನೂ ಭೇಟಿಯಾಗಿಲ್ಲ.
ಚೆನ್ನೈನ ನೀಲಂಕರೈನಲ್ಲಿರುವ ವಿಜಯ್ ನಿವಾಸಕ್ಕೆ ಬಾಂಬ್ ಬೆದರಿಕೆ ಬಂದಿದ್ದು, ಭದ್ರತಾ ಕ್ರಮಗಳನ್ನು ಹೆಚ್ಚಿಸಲಾಗಿದೆ. ಅಪರಿಚಿತರು ಬಾಂಬ್ ಬೆದರಿಕೆ ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ವಿಜಯ್ ಅವರ ನಿವಾಸದ ಸುತ್ತಲೂ ಚೆನ್ನೈ ನಗರ ಪೊಲೀಸ್ ಮತ್ತು ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ (ಸಿಆರ್ಪಿಎಫ್) ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಬಾಂಬ್ ನಿಷ್ಕ್ರಿಯ ದಳವು ಸ್ನಿಫರ್ ನಾಯಿಗಳೊಂದಿಗೆ ವ್ಯಾಪಕ ಶೋಧ ನಡೆಸುತ್ತಿದೆ.
ಘಟನೆ ಹಿನ್ನೆಲೆ
ಶನಿವಾರ ಕರೂರ್ನ ವೇಲುಸಾಮಿಪುರಂನಲ್ಲಿ ನಡೆದ ಟಿವಿಕೆಯ ರ್ಯಾಲಿಯಲ್ಲಿ 41 ಜನರು ಸಾವನ್ನಪ್ಪಿದ್ದು, ಸುಮಾರು 100 ಜನರು ಗಾಯಗೊಂಡಿದ್ದಾರೆ. ಆಯೋಜಕರು 10,000 ಜನರನ್ನು ನಿರೀಕ್ಷಿಸಿದ್ದರೂ,1.2 ಲಕ್ಷ ಚದರ ಅಡಿ ವಿಸ್ತೀರ್ಣದ ಸ್ಥಳದಲ್ಲಿ ಸುಮಾರು 27,000 ಜನರು ಸೇರಿದ್ದರು. ತಮಿಳುನಾಡು ಪೊಲೀಸ್ ಮಹಾನಿರ್ದೇಶಕ ಜಿ. ವೆಂಕಟರಾಮನ್,”ಮಧ್ಯಾಹ್ನ 3ರಿಂದ ರಾತ್ರಿ 10ರವರೆಗೆ ಅನುಮತಿ ನೀಡಿದ್ದರು. ಆದರೆ, ಟಿವಿಕೆಯ ಸಾಮಾಜಿಕ ಮಾಧ್ಯಮ ಹ್ಯಾಂಡಲ್ ಮಧ್ಯಾಹ್ನ 12ರಂದು ವಿಜಯ್ ಆಗಮಿಸುತ್ತಾರೆ ಎಂದು ಘೋಷಿಸಿದ ನಂತರ ಜನಸಂದಣಿ ಹೆಚ್ಚಾಗಿತು. ಜನರು ಬೆಳಿಗ್ಗೆ 11ರಿಂದಲೂ ಆಹಾರ ಅಥವಾ ನೀರಿಲ್ಲದೆ ಬಿಸಿಲಿನಲ್ಲಿ ಕಾಯುತ್ತಿದ್ದರು. ವಿಜಯ್ ಸಂಜೆ 7:40ಕ್ಕೆ ಬಂದರು” ಎಂದು ಹೇಳಿದ್ದಾರೆ. ಸುಮಾರು 500 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಆದರೆ ಜನರನ್ನು ನಿಯಂತ್ರಿಸಲು ಸಾಧ್ಯವಾಗದೇ ಕಾಲ್ತುಳಿತ ಸಂಭವಿಸಿದೆ ಎನ್ನಲಾಗಿದೆ.