ಉಭಯ ಶ್ರೀಗಳು ಗಂಧರ್ವ ಲೋಕದ ದೇವತೆಗಳು

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಲಿಂ. ಪಂ. ಪಂಚಾಕ್ಷರಿ ಗವಾಯಿಗಳು ಹಾಗೂ ಲಿಂ. ಪಂ. ಪುಟ್ಟರಾಜ ಕವಿ ಗವಾಯಿಗಳವರು ಹಾನಗಲ್ ಕುಮಾರೇಶ್ವರ ಶ್ರೀಗಳ ತಪಸ್ಸಿನ ಫಲವಾಗಿ ಭೂಲೋಕಕ್ಕೆ ಬಂದಿದ್ದಾರೆ ಎಂದು ಹುಬ್ಬಳ್ಳಿಯ ಮೂರುಸಾವಿರ ಮಠದ ಪೂಜ್ಯಶ್ರೀ ಜ. ಗುರುಸಿದ್ದರಾಜಯೋಗೀಂದ್ರ ಮಹಾಸ್ವಾಮಿಗಳು ನುಡಿದರು.

Advertisement

ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ಪರಮಪೂಜ್ಯ ಲಿಂ. ಪಂ. ಪಂಚಾಕ್ಷರಿ ಗವಾಯಿಗಳವರ 81ನೇ ಹಾಗೂ ಪದ್ಮಭೂಷಣ ಲಿಂ.ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳವರ 15ನೇ ಪುಣ್ಯಸ್ಮರಣೋತ್ಸವ ಹಾಗೂ ಉಭಯ ಗುರುಗಳ ಜಾತ್ರಾ ಮಹೋತ್ಸವದ ಅಂಗವಾಗಿ ಸೋಮವಾರ ಜರುಗಿದ ಮಹಾರಥೋತ್ಸವ ಹಾಗೂ ಧರ್ಮೋತ್ತೇಜಕ ಮಹಾಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡುತ್ತಿದ್ದರು.

ತನಗಿಂತ ತನ್ನ ಶಿಷ್ಯರು ದೊಡ್ಡರಾಗಬಾರದೆಂದು ರಹಸ್ಯವನ್ನು ಕಲಿಸಿಕೊಡದ ಹಲವಾರು ಗುರುಗಳು ಇದ್ದಾರೆ. ಆದರೆ, ತಮ್ಮ ಶಿಷ್ಯರು ತಮಗಿಂತ ಹೆಚ್ಚು ಬೆಳೆಯಲಿ ಎಂದು ಬದುಕಿದವರು ಉಭಯ ಶ್ರೀಗಳು. ವೀರೇಶ್ವರ ಪುಣ್ಯಾಶ್ರಮ ಹಣ ಮಾಡುವ ಸಂಸ್ಥೆಯಲ್ಲ, ಸೇವೆ ಮಾಡುವ ಸಂಸ್ಥೆಯಾಗಿದೆ. ಲೋಕದ ಕಲ್ಯಾಣಕ್ಕಾಗಿ ಸೇವಾ ಕಾರ್ಯ ಮಾಡುವ ಸಂಸ್ಥೆಯಾಗಿದೆ. ಈ ಪುಣ್ಯಾಶ್ರಮದಿಂದ ಸಂಗೀತಗಾರರು, ಕಲಾವಿದರು, ಸಾಹಿತಿಗಳು, ನಾಟಕಕಾರರು, ಕೀರ್ತನಕಾರರು, ಪ್ರವಚನಕಾರುಗಳಾಗಿ ಸಾವಿರಾರು ಕಲಾವಿದರು ದೇಶದ ತುಂಬೆಲ್ಲ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿ ಪುಣ್ಯಾಶ್ರಮ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಪರಿಶುದ್ಧ ಮನಸ್ಸಿನಿಂದ ಕಟ್ಟಿದ ಪುಣ್ಯಾಶ್ರಮ ಉತ್ತರೋತ್ತರವಾಗಿ ಬೆಳೆಯಲಿ ಎಂದು ಹಾರೈಸಿದರು.

ಉಪ್ಪಿನ ಬೆಟಗೇರಿಯ ಮೂರುಸಾವಿರಮಠದ ಪೂಜ್ಯಶ್ರೀ ಕುಮಾರ ವಿರೂಪಾಕ್ಷ ಮಹಾಸ್ವಾಮಿಗಳು ಮಾತನಾಡಿ, ಪುಟ್ಟರಾಜ ಗವಾಯಿಗಳನ್ನು ನೋಡಿದರೆ ಪರಮಾತ್ಮನನ್ನು ನೋಡಿದಂತೆ. ಅವರ ಆಶೀರ್ವಾದ ಪಡೆದವರ ಜನ್ಮ ಸಾರ್ಥಕವಾದಂತೆ ಎಂದು ಹೇಳಿದರು.

ವೇದಿಕೆಯ ಮೇಲೆ ಧಾರವಾಡ ಮುರಘಾಮಠದ ಪೂಜ್ಯಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು, ಬಳಗಾನೂರ ಶ್ರೀಮಠದ ಪೂಜ್ಯಶ್ರೀ ಶಿವಶಾಂತವೀರ ಶರಣರು, ಅಡ್ನೂರ ಬ್ರಹನ್ಮಠದ ಅಭಿನವ ಪಂಚಾಕ್ಷರ ಶಿವಾಚಾರ್ಯರು, ಮುದ್ದೇಬಿಹಾಳದ ಪೂಜ್ಯಶ್ರೀ ಡಾ. ಲಾಲಲಿಂಗೇಶ್ವರ ಶರಣರು, ಅಫಜಲಪೂರಿನ ಪೂಜ್ಯಶ್ರೀ ವಿರೂಪಾಕ್ಷಿ ದೇವರು, ಲಿಂಗಸೂರಿನ ಪೂಜ್ಯಶ್ರೀ ಶಿವಶರಣೆ ನಂದೀಶ್ವರಿ ಅಮ್ಮನವರು ಉಪಸ್ಥಿತರಿದ್ದರು.

ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ, ಡಿಡಿಪಿಐ ಆರ್.ಎಸ್. ಬುರಡಿ, ಡಾ. ಪುರುಷೋತ್ತಮಗೌಡ್ರ, ದತ್ತಪ್ಪ ಸಾಗನೂರ, ಡಾ. ಸಂಗಮೇಶ ಕೊಳ್ಳಿ, ಎಂ.ಕೆ. ಪಟ್ಟಣಶೆಟ್ಟಿ, ಬಾಬುರಾವ್ ಕೋಬಾಳ, ಬಸಯ್ಯ ಗುತ್ತೆದಾರ, ನಾಡಗೌಡ್ರ ಚನ್ನೂರ ಮುಂತಾದವರು ಉಪಸ್ಥಿತರಿದ್ದರು.

ಗದುಗಿನ ಶ್ರೀ ಕುಮಾರೇಶ್ವರ ಕೃಪಾ ಪೋಷಿತ ಪಂ. ಪಂಚಾಕ್ಷರ ಗವಾಯಿಗಳವರ ಸಂಗೀತ ಪಾಠಶಾಲೆಯ ವಿದ್ಯಾರ್ಥಿಗಳಿಂದ ಪ್ರಾರ್ಥನೆ ಜರುಗಿತು. ಅಡ್ನೂರಿನ ಎಂ. ಕಲ್ಲಿನಾಥ ಶಾಸ್ತಿç ಅವರು ಕಾರ್ಯಕ್ರಮ ನಿರೂಪಿಸಿದರು. ಪೂಜ್ಯಶ್ರೀ ಡಾ. ಕಲ್ಲಯ್ಯಜ್ಜನವರು ಅಭಾರ ಮನ್ನಣೆ ಮಾಡಿದರು.

ಇದೇ ಸಂದರ್ಭದಲ್ಲಿ ರಾಮಣ್ಣ ನಸಬಿ ಸಾ. ಬಿಳೇಕಲ್(ಸಂಗೀತ ಕ್ಷೇತ್ರ) ಅವರಿಗೆ 2025ನೇ ಸಾಲಿನ ಪದ್ಮಭೂಷಣ ಪಂ. ಪುಟ್ಟರಾಜ ಪ್ರಶಸ್ತಿ ಹಾಗೂ ಜಗಳೂರಿನ ವಿರೂಪಾಕ್ಷಯ್ಯ ಶಾಸ್ತ್ರೀ ಹಿರೇಮಠ (ಪ್ರವಚನ ಕ್ಷೇತ್ರ), ಬೆಂಗಳೂರಿನ ರಾಜು ಎಮ್ಮಿಗನೂರ (ಗಾಯನ ಕ್ಷೇತ್ರ) ಹಾಗೂ ಪ್ರಕಾಶ ಬಸರಿಗಿಡದ (ಭೂದಾನ ಕ್ಷೇತ್ರ) ಅವರುಗಳಿಗೆ ಕುಮಾರ ಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.


Spread the love

LEAVE A REPLY

Please enter your comment!
Please enter your name here