ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಬ್ರಾಹ್ಮಣರನ್ನು ಬಹಳಷ್ಟು ಜನ ಅಶಕ್ತರೆಂದು ತಿಳಿದಿದ್ದಾರೆ. ಗೌರವಕ್ಕೆ ಹೆದರಿ ಸುಮ್ಮನಿರುವುದನ್ನು ಅವರ ದೌರ್ಬಲ್ಯವೆಂದು ತಿಳಿದಿದ್ದಾರೆ. ಹೀಗಾಗಿ ಸಮಾಜದಲ್ಲಿ ಅವರ ಬಗ್ಗೆ ಅವಹೇಳನ, ನಿಂದನೆ ಸದಾಕಾಲ ನಡೆದಿರುವುದು ಕಂಡು ಬರುತ್ತದೆ. ಆದರೆ ಬ್ರಾಹ್ಮಣರೆಂದಿಗೂ ಅಶಕ್ತರಲ್ಲ, ಸಮಯ ಬಂದರೆ ಅವರು ಹೋರಾಟಕ್ಕೂ ಸಿದ್ಧ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ನಿಗಮದ ಹಿಂದಿನ ಸದಸ್ಯ ಮದನ ಕುಲಕರ್ಣಿ ಹೇಳಿದರು.
ಪಟ್ಟಣದ ಶ್ರೀ ದತ್ತಾತ್ರೇಯ ದೇವಸ್ಥಾನದಲ್ಲಿ ಅಖಂಡ ಹನುಮಾನ ಚಾಲೀಸಾ ಪಠಣೆಯ ನಿಮಿತ್ತ ಶುಕ್ರವಾರ ಸಂಜೆ ಶೋಭಾಯಾತ್ರೆಯ ನಂತರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಸಮಾಜದಲ್ಲಿನ ಎಲ್ಲ ವ್ಯಕ್ತಿ ಮತ್ತು ಇತರೆ ಸಮಾಜಗಳೊಂದಿಗೆ ಹೊಂದಿಕೊAಡು ಹೋಗುವ ಗುಣ ಬ್ರಾಹ್ಮಣರ ರಕ್ತದಲ್ಲಿ ಬಂದಿದೆ. ಆದರೆ, ಕೆಲವರು ಅವರನ್ನು ಸುಮ್ಮನೆ ಹೀಯಾಳಿಸುವ ಕಾರ್ಯಕ್ಕೆ ಇಳಿಯುತ್ತಿದ್ದಾರೆ. ನೀವೂ ಬಾಳಿ, ನಮ್ಮನ್ನೂ ಬಾಳಲು ಬಿಡಿ. ಇಲ್ಲವಾದರೆ ಹೋರಾಟಕ್ಕೆ ಬ್ರಾಹ್ಮಣರು ಸಿದ್ಧ. ನರೇಗಲ್ಲ ಪಟ್ಟಣದ ಬ್ರಹ್ಮ ಸಮಾಜದ ಒಗ್ಗಟ್ಟನ್ನು ಕಂಡು ಖುಷಿಯಾಗಿದೆ. ಸದ್ಗುರುಗಳ ಶೋಭಾಯಾತ್ರೆಯು ಅತ್ಯಂತ ಮನೋಹರವಾಗಿತ್ತಲ್ಲದೆ, ಇತರರಿಗೆ ಅದು ಮಾದರಿಯೂ ಆಗಿದೆ. ಈ ಸಂಘಟನೆ ಹೀಗೇ ಮುಂದುವರೆಯಲಿ ಎಂದರು.
ಸಭೆಯಲ್ಲಿ ಗದಗ ಜಿಲ್ಲಾ ಬ್ರಾಹ್ಮಣ ಸಮಾಜದ ಅಧ್ಯಕ್ಷ ವೆಂಕಟೇಶ ಜೋಷಿ, ವಿವೇಕ ಕುಲಕರ್ಣಿಯವರಿಗೆ ಶ್ರೀಗಳು ಗೌರವ ಶ್ರೀರಕ್ಷೆ ನೀಡಿದರು. ಡಾ. ಜಿ.ಕೆ. ಕಾಳೆ, ಪ್ರಕಾಶ ಕುಲಕರ್ಣಿ, ಎ.ಜಿ. ಕುಲಕರ್ಣಿ, ಅರುಣ ಕುಲಕರ್ಣಿ ಸೇರಿದಂತೆ ಇತರರು ಇದ್ದರು. ಸೀಮಾ ಕೊಂಡಿ ಪ್ರಾರ್ಥಿಸಿದರು. ಶ್ರೀ ದತ್ತ ಭಕ್ತ ಮಂಡಳಿ ಅಧ್ಯಕ್ಷ ಡಾ. ನಾಗರಾಜ ಗ್ರಾಮಪುರೋಹಿತ ಸ್ವಾಗತಿಸಿದರು. ಶ್ರೀಪಾದಭಟ್ಟ ಜೋಷಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಶಿಕ್ಷಕ ಸುನೀಲ ಅಂಬೇಕರ ನಿರೂಪಿಸಿದರು. ಶ್ರೀ ದತ್ತಭಕ್ತ ಮಂಡಳಿಯ ಕಾರ್ಯದರ್ಶಿ ರಘುನಾಥ ಕೊಂಡಿ ವಂದಿಸಿದರು.
ದಿವ್ಯ ಸಾನ್ನಿಧ್ಯ ವಹಿಸಿದ್ದ ಹೆಬ್ಬಳ್ಳಿಯ ಪ.ಪೂ ಶ್ರೀ ದತ್ತಾವಧೂತ ಮಹಾರಾಜರು ಆಶೀರ್ವಚನ ನೀಡಿ, ಮನುಷ್ಯ ಎಂದಿಗೂ ಸಮಾಜ ಜೀವಿ. ಎಲ್ಲರಿಗೂ ಅವರವರ ಧರ್ಮ ಅವರಿಗೆ ದೊಡ್ಡದು. ಹಾಗೆಂದು ಬೇರೆ ಧರ್ಮವನ್ನು ಹೀಯಾಳಿಸುವ ಕಾರ್ಯಕ್ಕೆ ಎಂದಿಗೂ ಮುಂದಾಗಬಾರದು. ಎಲ್ಲರೂ ತಮ್ಮ ತಮ್ಮ ಧರ್ಮಾಚರಣೆಗಳನ್ನು ಮಾಡಿಕೊಳ್ಳಬೇಕು, ಜಗತ್ತಿನ ಎಲ್ಲ ಜನರೊಂದಿಗೆ ಎಂದಿಗೂ ಸೌಹಾರ್ದತೆಯಿಂದ, ಪ್ರೀತಿ, ವಿಶ್ವಾಸಗಳಿಂದ ಬಾಳಬೇಕು ಎಂದರು.