ವಿಜಯಸಾಕ್ಷಿ ಸುದ್ದಿ, ಗದಗ : ಕ್ಯಾನ್ಸರ್ ಬಗ್ಗೆ ಭಯ ಬೇಡ, ಆರೋಗ್ಯ ಜಾಗೃತಿ ಅವಶ್ಯ ಎಂದು ಡಾ.ಗಣೇಶರಾವ್ ಕುಂದಾಪೂರ ಹೇಳಿದರು.
ಗದಗ ಸ್ಕ್ಯಾನ್ ಸೆಚಿಟರ್ನಲ್ಲಿ ಜಿಲ್ಲಾ ಆರೋಗ್ಯ ಇಲಾಖೆ, ಗದಗ ಐಎಂಎ, ಲೈನ್ಸ್ ಕ್ಲಬ್, ಇನ್ನರ್ವ್ಹೀಲ್ ಕ್ಲಬ್ ಆಫ್ ಗದಗ-ಬೆಟಗೇರಿ ಹಾಗೂ ಮಿಡ್ಟೌನ್, ಗದಗ ಓಬಿಜಿ ಸೊಸೈಟಿ ಮತ್ತು ಡಾ. ಎನ್.ಬಿ. ಪಾಟೀಲ ಹೆಲ್ತ್ಕೇರ್ ಫೌಂಡೇಶನ್ ಆಶ್ರಯದಲ್ಲಿ ಏರ್ಪಡಿಸಿದ್ದ ಸ್ತನ ಕ್ಯಾನ್ಸರ್ ತಪಾಸಣಾ ಶಿಬಿರದಲ್ಲಿ ಅತಿಥಿ ಉಪನ್ಯಾಸಕರಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಕ್ಯಾನ್ಸರ್ ಎಲ್ಲರನ್ನು ಬಾಧಿಸುತ್ತಿರುವ ತೀವ್ರ ಸ್ವರೂಪದ ಕಾಯಿಲೆಯಾಗಿದ್ದು, ಇದನ್ನು ಆರಂಭದಲ್ಲೇ ಪತ್ತೆ ಹಚ್ಚಿ ತಜ್ಞ ವೈದ್ಯರಿಂದ ತುರ್ತು ಚಿಕಿತ್ಸೆ ಪಡೆಯುವದು ಅವಶ್ಯವಿದೆ. ಕ್ಯಾನ್ಸರ್ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವದು ಅಗತ್ಯ ಎಂದರು.
ಆಧುನಿಕ ಭರಾಟೆಯ ಇಂದಿನ ದಿನಗಳಲ್ಲಿ ಆರೋಗ್ಯದ ಬಗ್ಗೆ ಕಾಳಜಿ ವಹಿಸುವದು ಅನಿವಾರ್ಯವಾಗಿದೆ. ಬದಲಾದ ಸನ್ನಿವೇಶ, ಬದಲಾದ ಜೀವನ ಶೈಲಿಯಿಂದಾಗಿ ಆರೋಗ್ಯದಲ್ಲಿ ಹಲವು ರೀತಿಯಿಂದ ಪರಿಣಾಮ ಆಗುತ್ತಿದ್ದು, ನಾವಿಂದು ನಮ್ಮ ಜೀವನ ಶೈಲಿ ಬದಲಿಸಿಕೊಳ್ಳದಿದ್ದರೆ ಇನ್ನೂ ಗಂಭೀರತೆ ಎದುರಿಸಬೇಕಾದೀತು ಎಂದರು.
ಅತಿಥಿಯಾಗಿ ಆಗಮಿಸಿದ್ದ ಡಿಎಚ್ಓ ಡಾ. ಎಸ್.ಎಸ್. ನೀಲಗುಂದ ಮಾತನಾಡಿ, ಕ್ಯಾನ್ಸರ್ ಕುರಿತು ಆರೋಗ್ಯ ಇಲಾಖೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದೆ. ಸರಕಾರವೂ ಸಹ ಈ ಕುರಿತು ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದರು.
ವೇದಿಕೆಯ ಮೇಲೆ ಗದಗ ಐಎಂಎ ಅಧ್ಯಕ್ಷ ಡಾ. ಪವನಕುಮಾರ ಪಾಟೀಲ, ಕಾರ್ಯದರ್ಶಿ ಡಾ. ತುಕಾರಾಂ ಸೋರಿ, ಗದಗ ಐಎಂಎ ಮಹಿಳಾ ಘಟಕದ ಅಧ್ಯಕ್ಷೆ ಡಾ. ಅನುಪಮಾ ಪಾಟೀಲ, ಕಾರ್ಯದರ್ಶಿ ಡಾ. ಶಿಲ್ಪಾ ಧಡೂತಿ, ಡಾ. ರಾಹುಲ್ ಶಿರೋಳ, ಗದಗ ಓಬಿಜಿ ಸೊಸೈಟಿ ಅಧ್ಯಕ್ಷ ಡಾ. ಪ್ರವೀಣ ಸಜ್ಜನರ, ಇನ್ನರ್ವ್ಹೀಲ್ ಕ್ಲಬ್ ಅಧ್ಯಕ್ಷೆ ನಾಗರತ್ನಾ ಮಾರನಬಸರಿ, ಮಿಡ್ಟೌನ್ ಅಧ್ಯಕ್ಷೆ ಪ್ರೀತಿ ಶಿವಪ್ಪನಮಠ, ಲೈನ್ಸ್ ಕ್ಲಬ್ ಮಹಿಳಾ ಘಟಕದ ಅಧ್ಯಕ್ಷೆ ಅನುರಾಧ ಸಾಲಿ ಉಪಸ್ಥಿತರಿದ್ದರು.
ಶಿಬಿರದಲ್ಲಿ ಸುಮಾರು 50 ಆಶಾ ಕಾರ್ಯಕರ್ತೆಯರಿಗೆ ಉಚಿತವಾಗಿ ಎಕ್ಸರೇ ಮ್ಯಾಮೋಗ್ರಫಿ ಮೂಲಕ ಸ್ತನü ಕ್ಯಾನ್ಸರ್ ತಪಾಸಣೆ ನಡೆಸಿ ಸಲಹೆ ನೀಡಲಾಯಿತು. ಶಿಬಿರದಲ್ಲಿ ವೈದ್ಯರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು ಪಾಲ್ಗೊಂಡು ಶಿಬಿರವನ್ನು ಯಶಸ್ವಿಗೊಳಿಸಿದರು.
ಒಂದು ಸಂಶೋಧನೆಯ ಪ್ರಕಾರ ಒಂದು ಲಕ್ಷ ಜನರನ್ನು ತಪಾಸಣೆಗೆ ಒಳಪಡಿಸಿದಾಗ ಸುಮಾರು 12 ಸಾವಿರ ಜನರಲ್ಲಿ ಕ್ಯಾನ್ಸರ್ ಪತ್ತೆಯಾಗಿರುವದು ವರದಿಯಾಗಿದೆ. ಆದ್ದರಿಂದ ಕನಿಷ್ಠ ವರ್ಷಕ್ಕೆ ಎರಡು ಸಲವಾದರೂ ಕ್ಯಾನ್ಸರ್ ಕುರಿತಾದ ಪರೀಕ್ಷೆ ಮಾಡಿಸಿ ಆರಂಭದಲ್ಲೇ ಚಿಕಿತ್ಸೆ ಪಡೆಯಬೇಕು. ಉಲ್ಬಣವಾದರೆ ನಿಯಂತ್ರಿಸುವದು ಕಷ್ಟ ಎಂದು ಡಾ.ಗಣೇಶರಾವ್ ಕುಂದಾಪೂರ ತಿಳಿಸಿದರು.
Advertisement