ದೆಹಲಿ:– ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿದ್ದ ಬಿಆರ್ಎಸ್ (BRS) ನಾಯಕಿ ಕೆ.ಕವಿತಾ (K Kavitha) ಅವರನ್ನು ಮಂಗಳವಾರ ಸಂಜೆ ದೆಹಲಿಯ ಡಿಡಿಯು ಆಸ್ಪತ್ರೆಗೆ (DDU Hospital) ಕರೆದೊಯ್ಯಲಾಗಿದೆ.
ಕವಿತಾ ಅವರನ್ನು ಈ ವರ್ಷ ಮಾರ್ಚ್ 15 ರಂದು ಬಂಧಿಸಲಾಗಿತ್ತು. ಆರು ದಿನಗಳ ನಂತರ, ಜಾರಿ ನಿರ್ದೇಶನಾಲಯವು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದ ಮನಿ ಲಾಂಡರಿಂಗ್ ತನಿಖೆಯಲ್ಲಿ ಬಂಧಿಸಿದೆ. ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದಿರುವುದು ಯಾಕೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಕೆ ಕವಿತಾ ಅವರನ್ನು ಮೊದಲು ಜಾರಿ ನಿರ್ದೇಶನಾಲಯ ಬಂಧಿಸಿತ್ತು. ಮರು ತಿಂಗಳು ಸಿಬಿಐ ಆಕೆಯನ್ನು ಬಂಧಿಸಿತು. ತೆಲಂಗಾಣ ಮಾಜಿ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರ ಪುತ್ರಿ ಕೆ ಕವಿತಾ ಎರಡೂ ಪ್ರಕರಣಗಳಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಅನುಕೂಲಕರ ಮದ್ಯ ನೀತಿಯನ್ನು ರೂಪಿಸಿದ್ದಕ್ಕಾಗಿ ಎಎಪಿಗೆ ₹100 ಕೋಟಿ ಮೊತ್ತದ ಕಿಕ್ಬ್ಯಾಕ್ ನೀಡಿದ ಗುಂಪಿನ ಭಾಗವಾಗಿ ಕೆ ಕವಿತಾ ಆರೋಪ ಎದುರಿಸುತ್ತಿದ್ದಾರೆ.ಇದೇ ಪ್ರಕರಣದಲ್ಲಿ ಮನೀಷ್ ಸಿಸೋಡಿಯಾ ಮತ್ತು ಕೇಜ್ರಿವಾಲ್ ಕೂಡ ತಿಹಾರ್ ಜೈಲಿನಲ್ಲಿದ್ದಾರೆ.



