ಬೆಂಗಳೂರು: ಮುಡಾ ಸೈಟು ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ತನಿಖೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಆದೇಶ ಹೊರಡಿಸಿರುವುದನ್ನು ಖಂಡಿಸಿ ರಾಜ್ಯಾದ್ಯಂತ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸಿದ್ದರಾಮಯ್ಯನವವರ ಅಭಿಮಾನಿಗಳು ದೊಡ್ಡಮಟ್ಟದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಇದೇ ಸಂದರ್ಭದಲ್ಲಿ, ರಾಜ್ಯಪಾಲರು ತಾವು ನಿತ್ಯವೂ ಬಳಸುತ್ತಿದ್ದ ಸಾಮಾನ್ಯ ಕಾರನ್ನು ಬದಲಾಯಿಸಿ ಬುಲೆಟ್ ಪ್ರೂಫ್ ನಲ್ಲಿ ಓಡಾಡಲು ಶುರು ಮಾಡಿದ್ದು ಇದು ಚರ್ಚೆಗೆ ಕಾರಣವಾಗಿದೆ.
ಇಷ್ಟು ದಿನ ಅವಕಾಶ ಇದ್ದರೂ ನಾರ್ಮಲ್ ಇನ್ನೋವಾ ಕಾರನ್ನು ಬಳಸುತ್ತಿದ್ದ ರಾಜ್ಯಪಾಲರು ಇದೀಗ ಬುಲೆಟ್ ಫ್ರೂಫ್ ಕಾರನ್ನು ಬಳಸಲು ಆರಂಭಿಸಿದ್ದಾರೆ. ರಾಜ್ಯಪಾಲರು ಅಧಿಕಾರ ಸ್ವೀಕರಿಸಿದಾಗಲೇ ಬುಲೆಟ್ ಪ್ರೂಫ್ ಕಾರಿನ ವ್ಯವಸ್ಥೆ ಮಾಡಲಾಗಿತ್ತು. ಆದರೆ ಆ ಕಾರನ್ನು ವಾಪಸ್ ಕಳುಹಿಸಿದ್ದರು.
ಈಗ ಮತ್ತೆ ಗುಪ್ತಚರ ಇಲಾಖೆಯಿಂದ ಸೂಚನೆ ಬಂದ ನಂತರ ಬುಲೆಟ್ ಪ್ರೂಫ್ ಕಾರಿನ ವ್ಯವಸ್ಥೆ ಮಾಡಲಾಗಿದೆ. ಶನಿವಾರ ಮಧ್ಯಾಹ್ನ ಇಂದೋರ್ಗೆ ತೆರಳಿದ್ದ ರಾಜ್ಯಪಾಲರು ಮಂಗಳವಾರ ರಾತ್ರಿ ವಾಪಸಾಗಿದ್ದಾರೆ. ಇಂದು ನಡೆಯಬೇಕಿದ್ದ ಸಾರ್ವಜನಿಕ ಕಾರ್ಯಕ್ರಮವೊಂದನ್ನು ಸೇರಿ ಆ.29ರ ತನಕ ಪೂರ್ವ ನಿಗದಿಯಾಗಿದ್ದ ಎಲ್ಲಾ ಸಾರ್ವಜನಿಕ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ.