ವಿಜಯಸಾಕ್ಷಿ ಸುದ್ದಿ, ರೋಣ: ವಿವಿಧ ಬೇಡಿಕೆಗಳ ಈಡೆರಿಕೆಗೆ ಆಗ್ರಹಿಸಿ ಮಂಗಳವಾರ ಸಾರಿಗೆ ನೌಕರರು ಮುಷ್ಕರದಲ್ಲಿ ಭಾಗಿಯಾದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಪ್ರಯಾಣಿಕರು ಪರದಾಡುವಂತಾಯಿತು.
ಮುಷ್ಕರದ ಅರಿವು ಇರದ ಕೆಲ ಪ್ರಯಾಣಿಕರು ಪಟ್ಟಣಕ್ಕೆ ಬಂದು ಪರದಾಡಿದರು. ಗ್ರಾಮೀಣ ಭಾಗಗಳ ವಿದ್ಯಾರ್ಥಿಗಳು ಸಹ ಬೆಳಗಿನ ಬಸ್ಗಳ ಮೂಲಕ ಶಾಲಾ-ಕಾಲೇಜುಗಳಿಗೆ ಆಗಮಿಸಿ, ಶಾಲಾ ಕಾಲೇಜುಗಳು ಬಿಟ್ಟ ನಂತರ ಮನೆಗೆ ತೆರಳಲು ತೊಂದರೆ ಅನುಭವಿಸಿದರು. ಬಸ್ ಸಂಚಾರ ಸ್ಥಗೀತಗೊಂಡ ಹಿನ್ನೆಲೆಯಲ್ಲಿ ಪಟ್ಟಣ ಜನರಿಲ್ಲದೆ ಬಿಕೋ ಎನ್ನುತ್ತಿತ್ತು.
ಮಧ್ಯಾಹ್ನದ ವೇಳೆಗೆ ಖಾಸಗಿ ವಾಹನಗಳ ಮೂಲಕ ಪ್ರಯಾಣಿಕರು ತಮ್ಮ ಗ್ರಾಮಗಳಿಗೆ ತಲುಪಿದರು. ಸಾರಿಗೆ ನೌಕರರ ಮುಷ್ಕರದಿಂದ ಪ್ರಯಾಣಿಕರಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಬೆಳಗಿನ ಜಾವ 5 ಗಂಟೆಗೇ ಆಗಮಿಸಿದ್ದ ಪಿಎಸ್ಐ ಪ್ರಕಾಶ ಬಣಕಾರ, ಪ್ರಯಾಣಿಕರನ್ನು ಖಾಸಗಿ ವಾಹನಗಳು ನಿಲ್ಲುವ ಸ್ಥಳಗಳಿಗೆ ಕಳುಹಿಸಿ ಮಾರ್ಗದರ್ಶನ, ಮಾಹಿತಿ ನೀಡಿದರು.