ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲೆಯಾದ್ಯಂತ ಶಿವರಾತ್ರಿ ಹಬ್ಬಕ್ಕೆ ಬೇಕಾದ ಅಗತ್ಯ ವಸ್ತುಗಳ ಖರೀದಿ ಜತೆಗೆ ಹಬ್ಬವನ್ನು ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಗುತ್ತಿದೆ. ಶಿವರಾತ್ರಿ ಆಚರಣೆ ಅಂಗವಾಗಿ ಬುಧವಾರ ಶಿವರಾತ್ರಿ ಉಪವಾಸ, ಜಾಗರಣೆ ಮಾಡಿ ಶಿವ ಸ್ಮರಣೆ ಮಾಡಲು ಭಕ್ತರು ಸಹ ಸಜ್ಜಾಗಿದ್ದಾರೆ.
ನಗರದ ತೋಂಟದಾರ್ಯ ಮಠದ ರಸ್ತೆ, ಕೆ.ಸಿ. ರಾಣಿ ರಸ್ತೆ, ಮುಳಗುಂದ ನಾಕಾ, ಗ್ರೇನ್ ಮಾರುಕಟ್ಟೆ, ಬೆಟಗೇರಿಯ ಬಸ್ ನಿಲ್ದಾಣ ಹತ್ತಿರ ಸೇರಿದಂತೆ ವಿವಿಧೆಡೆ ಕಲ್ಲಂಗಡಿ ಸೇರಿದಂತೆ ವಿವಿಧ ಹಣ್ಣುಗಳ ಮಾರಾಟ ಜೋರಾಗಿ ನಡೆಯುತ್ತಿದೆ. ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ಉತ್ತಮ ಮಳೆ ಆದ ಹಿನ್ನೆಲೆಯಲ್ಲಿ ಸಂಭ್ರಮದಿಂದ ಹಬ್ಬವನ್ನು ಆಚರಣೆ ಮಾಡಲು ಮುಂದಾಗಿದ್ದಾರೆ.
ಶಿವರಾತ್ರಿಯಂದು ಶಿವನ ಆರಾಧಕರು ಇಡೀ ದಿನ ಉಪವಾಸ ಮಾಡುತ್ತಾರೆ. ಸಂಜೆ ಶಿವನ ದರ್ಶನ ಪಡೆದ ನಂತರವೇ ಹಣ್ಣುಗಳನ್ನು ಸ್ವೀಕರಿಸುತ್ತಾರೆ. ಹೀಗಾಗಿ ಶಿವರಾತ್ರಿ ಹಬ್ಬ ಬಂದರೆ ನಗರದ ಮಾರುಕಟ್ಟೆಯಲ್ಲಿ ವಿವಿಧ ಬಗೆಯ ಹಣ್ಣುಗಳು ಗ್ರಾಹಕರನ್ನು ಕೈಬೀಸಿ ಕರೆಯುತ್ತಿವೆ. ಸ್ವಲ್ಪ ದರ ಏರಿಕೆಯ ನಡುವೆಯೂ ಅಗತ್ಯ ವಸ್ತುಗಳ ಖರೀದಿ ಮಾತ್ರ ಜೋರಾಗಿತ್ತು.
ಜಿಲ್ಲೆಯ ಎಲ್ಲ ಶಿವ ದೇವಾಲಯಗಳಲ್ಲಿ ಶಿವಲಿಂಗ ಮೂರ್ತಿಗೆ ವಿವಿಧ ಪೂಜೆ, ಅಭಿಷೇಕ, ರುದ್ರಾಭಿಷೇಕ, ಶಿವನಿಗೆ ಬಿಲ್ವಪತ್ರೆ ಪೂಜೆ, ಮಂಗಳಾರತಿ, ಶಿವ ಸಹಸ್ರನಾಮ ಪಠಣ, ಸಂಕೀರ್ತನೆ, ಪುರಾಣ ಪಠಣ, ಸಂಗೀತೋತ್ಸವ ಮತ್ತು ಅಹೋರಾತ್ರಿ ಶಿವನಾಮ ಜಪ ನಡೆಯಲಿದೆ. ಶಿವನ ಆರಾಧಕರು ಜಾಗರಣೆ ನಡೆಸಲು ವಿವಿಧ ದೇವಸ್ಥಾನಗಳಲ್ಲಿ ಪತ್ಯೇಕವಾಗಿ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ ವಿಶೇಷ ಪೂಜೆ ಮಾಡಲಾಗುತ್ತದೆ.
ಶಿವರಾತ್ರಿ ಹಬ್ಬದ ಅಂಗವಾಗಿ ನಗರದ ಮಾರುಕಟ್ಟೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೈಕ್ ಹಾಗೂ ಕಾರು ಮಾರುಕಟ್ಟೆಗೆ ಬಂದ ಹಿನ್ನೆಲೆಯಲ್ಲಿ ಸಾಕಷ್ಟು ಟ್ರಾಫಿಕ್ ಜಾಮ್ ಆಗಿದೆ. ಬೈಕ್ ಸವಾರರು ಹಾಗೂ ಸಾರ್ವಜನಿಕರು ರಸ್ತೆ ದಾಟಲು ಹರಸಾಹಸ ಪಡಬೇಕಾಯಿತಲ್ಲದೆ, ರಸ್ತೆ ಮಧ್ಯಭಾಗದಲ್ಲಿ ಹೆಚ್ಚಿನ ಅಂಗಡಿ ಹಾಗೂ ಬೈಕ್ ಇರುವುದರಿಂದ ಸಮಸ್ಯೆ ತಲೆದೋರಿತು.
ಶಿವರಾತ್ರಿ ಅಂಗವಾಗಿ ಹಣ್ಣುಗಳ ಬೆಲೆ ಏರಿಕೆಯಾಗಿದೆ. ಅದರಲ್ಲೂ ಬಾಳೆಹಣ್ಣು, ದ್ರಾಕ್ಷಿ, ಖರ್ಜೂರ ಹಣ್ಣಿಗೆ ಬೇಡಿಕೆ ಇದೆ. ಸಹಜವಾಗಿ ಬೆಲೆ ಏರಿಕೆ ನಡುವೆ ವ್ಯಾಪರವೂ ಜೋರಾಗಿದೆ. ಅವಳಿ ನಗರ ಸೇರಿದಂತೆ ಗ್ರಾಮೀಣ ಭಾಗದ ಜನರು ಖರೀದಿ ಮಾಡಲು ಮುಂದಾಗಿದ್ದಾರೆ. ಕಳೆದ ಎರಡೂ ದಿನಗಳಿಂದ ನಗರದಲ್ಲಿ ವ್ಯಾಪಾರ ಜೋರಾಗಿದೆ.
– ಸುರೇಶ್, ಹಣ್ಣಿನ ವ್ಯಾಪಾರಿ.
ಹಬ್ಬಕ್ಕೆ ಬೇಕಾದ ಹಣ್ಣು ಹಾಗೂ ಹೂವುಗಳನ್ನು ಖರೀದಿಸಿದ್ದೇವೆ. ಅಗತ್ಯ ವಸ್ತುಗಳ ಬೆಲೆಯಲ್ಲಿ ಸ್ವಲ್ಪ ಏರಿಕೆ ಕಂಡಿದೆ. ಆದರೂ ಸಹ ಬೇಕಾದ ವಸ್ತುಗಳ ಖರೀದಿ ಮಾಡಲೇಬೇಕು. ಹೀಗಾಗಿ ಕಡಿಮೆ ಪ್ರಮಾಣದಲ್ಲಿ ಹಣ್ಣುಗಳ ಖರೀದಿ ಮಾಡಲಾಗುತ್ತಿದೆ.
-ನೇತ್ರಾ, ಗೃಹಿಣಿ.