ಬೆಂಗಳೂರು: ಕಸ್ಟಮರ್ ಮನೆಯಲ್ಲಿ ಕಳವು ಮಾಡಿದ ಆರೋಪದ ಮೇಲೆ ಕ್ಯಾಬ್ ಚಾಲಕನನ್ನು ಹೆಬ್ಬಾಳ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಅಬ್ದುಲ್ ರೆಹಮಾನ್ ಎಂದು ಗುರುತಿಸಲಾಗಿದೆ. ಬಂಧಿತನಿಂದ ಸುಮಾರು 25 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಫೆಬ್ರವರಿ 11ರಂದು ಸೈಯದ್ ಸಲ್ಮಾನ್ ಮತ್ತು ಅವರ ಪತ್ನಿ ಶಾಪಿಂಗ್ ಸಲುವಾಗಿ ಮುಂಬೈಗೆ ತೆರಳಲು ಹೆಬ್ಬಾಳದಿಂದ ಯಶವಂತಪುರಕ್ಕೆ ಕ್ಯಾಬ್ ಬುಕ್ ಮಾಡಿಕೊಂಡಿದ್ದರು. ಈ ವೇಳೆ ಕ್ಯಾಬ್ ಚಾಲಕ ಅಬ್ದುಲ್ ರೆಹಮಾನ್, ದಂಪತಿಗಳ ಮಾತುಕತೆಯನ್ನು ಆಲಿಸಿದ್ದಾನೆ.
ಸೈಯದ್ ಸಲ್ಮಾನ್ ಅವರ ಪತ್ನಿ, “ಮನೆಯಲ್ಲಿ ಚಿನ್ನಾಭರಣ ಇದೆ, ವಾರ್ಡ್ರೋಬ್ ಲಾಕ್ ಮಾಡಿದ್ದೀಯಾ?” ಎಂದು ಕೇಳಿದ ಮಾತು ಕ್ಯಾಬ್ ಚಾಲಕನ ಕಿವಿಗೆ ಬಿದ್ದಿದೆ. ಅಲ್ಲದೆ ಅವರು ಮೂರು ದಿನಗಳ ಕಾಲ ಮನೆಗೆ ವಾಪಸ್ ಬರುವುದಿಲ್ಲ ಎಂಬುದನ್ನು ಕೂಡ ಚಾಲಕ ತಿಳಿದುಕೊಂಡಿದ್ದಾನೆ.
ಯಶವಂತಪುರದಲ್ಲಿ ದಂಪತಿಯನ್ನು ಇಳಿಸಿದ ನಂತರ ಅಬ್ದುಲ್ ರೆಹಮಾನ್ ಮತ್ತೆ ಹೆಬ್ಬಾಳಕ್ಕೆ ಬಂದು, ಸೈಯದ್ ಅವರ ಮನೆಗೆ ನುಗ್ಗಿ ಚಿನ್ನಾಭರಣ ಕಳವು ಮಾಡಿದ್ದಾನೆ. ಈ ಕುರಿತು ದೂರು ದಾಖಲಾದ ಬಳಿಕ ಪೊಲೀಸರು ಸಿಸಿ ಟಿವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲನೆ ನಡೆಸಿದರು. ಈ ವೇಳೆ ಕ್ಯಾಬ್ ಚಾಲಕ ಮನೆ ಬಳಿ ಬಂದಿರುವುದು ಪತ್ತೆಯಾಗಿದೆ.
ನಂತರ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳವು ಮಾಡಿರುವುದು ಬೆಳಕಿಗೆ ಬಂದಿದೆ. ಇದೇ ರೀತಿಯ ಪ್ರಕರಣದಲ್ಲಿ ಈ ಹಿಂದೆ ಕೂಡ ಬಂಧಿತನು ಜಾಮೀನಿನ ಮೇಲೆ ಹೊರಬಂದು ಮತ್ತೆ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.



